ನರಗುಂದ: ಮಾನವನ ಬದುಕಿನಲ್ಲಿ ಮತ್ತು ಪರಿಸರ ವ್ಯವಸ್ಥೆಯಲ್ಲಿ ಗುಬ್ಬಚ್ಚಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಆದ್ದರಿಂದ ಗುಬ್ಬಚ್ಚಿಗಳ ಸಂತಾನ ಬೆಳವಣಿಗೆ ಬಗ್ಗೆ ಗಂಭೀರ ಚಿಂತನೆ ಮಾಡಬೇಕೆಂದು ಯಲ್ಲಾಪುರದ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ ತಿಳಿಸಿದರು.
ವಿಶೇಷವಾಗಿ ತಮ್ಮ ಮರಿಗಳಿಗೆ ಆಹಾರ ನೀಡುವಾಗ, ಇವು ಹಾನಿಕಾರಕ ಕೀಟಗಳನ್ನು ಹೆಚ್ಚಾಗಿ ಬೇಟೆಯಾಡುವುದರಿಂದ ರೈತರಿಗೆ ಸಹಕಾರಿಯಾಗಿವೆ. ಇವು ಕೇವಲ ಮುದ್ದಾದ ಪಕ್ಷಿಗಳಲ್ಲ. ಬದಲಾಗಿ ಪರಿಸರದ ಆರೋಗ್ಯದ ಸಂಕೇತಗಳಾಗಿವೆ. ಗುಬ್ಬಚ್ಚಿಗಳು ವಿವಿಧ ಸಸ್ಯಗಳ ಬೀಜಗಳನ್ನು ತಿಂದು ನಂತರ ಅವುಗಳನ್ನು ಬೇರೆಡೆಗೆ ಸಾಗಿಸುವ ಮೂಲಕ ಸಸ್ಯಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತವೆ. ಇದು ಪರಿಸರದಲ್ಲಿ ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಗುಬ್ಬಚ್ಚಿಗಳ ಸಂರಕ್ಷಣೆ ಅವಶ್ಯವೆಂದು ತಿಳಿಸಿದರು.
ಸಂಶೋಧಕ ಮಂಜುನಾಥ ನಾಯಕ ಮಾತನಾಡಿ, ಮಾ. 20 ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತದೆ. ಬಿಸಿಲಿನ ಪ್ರಖರತೆಯಿಂದ ಪಕ್ಷಿ- ಪ್ರಾಣಿಗಳು ಸಾವಿಗೀಡಾಗುತ್ತವೆ. ಆದರಿಂದ ವಿದ್ಯಾರ್ಥಿಗಳು ತಮ್ಮ ಮನೆ ಅಂಗಳ, ತಾರಸಿ ಮೇಲೆ ನೀರು ತುಂಬಿದ ಮಡಕೆ, ಮಣ್ಣಿನ ಪಾತ್ರೆಗಳನಿಟ್ಟು ಪಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಎಲ್ಲ ಸಿಬ್ಬಂದಿಗೆ ಪ್ರಶಾಂತ ಸಾಗರ ಅವರು ನಿರ್ದೇಶಿಸಿ ನಿರ್ಮಿಸಿದ ಕೌತುಕ ಮಂಗಟ್ಟೆ ಜೀವನಕ್ರಮದ ಕಿರುಚಿತ್ರ ಪ್ರದರ್ಶಿಸಲಾಯಿತು. ಶಿಕ್ಷಕಿ ಎಸ್.ಎಲ್. ಮರಿಗೌಡರ ಸ್ವಾಗತಿಸಿದರು. ಶಿಕ್ಷಕ ಎಸ್.ಜಿ. ಕಡಿವಾಲ ನಿರೂಪಿಸಿದರು. ಬಿ.ಆರ್. ಹಳೆಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಐ.ಎಂ. ಹುರಕಡ್ಲಿ, ಬಿ.ಎಚ್. ಲಕ್ಕಲಕಟ್ಟಿ, ಎಸ್.ಪಿ. ಹಿರೇಮನಿ ಉಪಸ್ಥಿತರಿದ್ದರು.