ಗೌರಿಬಿದನೂರು: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಇಂದಿನ ಮಕ್ಕಳ ಪಾತ್ರ ಮಹತ್ತರವಾದದ್ದು, ಆದ್ದರಿಂದ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವ ಸಾರುವ ಸಲುವಾಗಿ ನವೆಂಬರ್ 14ರಂದು ದೇಶಾದ್ಯಂತ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ ಎಂದು ನಿವೃತ್ತ ಉಪ ನಿರ್ದೇಶಕ ಟಿ.ಅಶ್ವತ್ಥ್ ರೆಡ್ಡಿ ತಿಳಿಸಿದರು.
ಗೌರಿಬಿದನೂರು ತಾಲೂಕಿನ ಡಿ. ಪಾಳ್ಯದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಮಕ್ಕಳಿಗೆ ಶಿಕ್ಷಣ, ಆರೋಗ್ಯ, ರಕ್ಷಣೆ, ಮೂಲಭೂತ ಸೌಕರ್ಯ ಒದಗಿಸಿ, ಅವರ ಎಲ್ಲಾ ಹಕ್ಕುಗಳನ್ನು ಕಾಪಾಡಬೇಕಿದೆ. ಅವರ ಉತ್ತಮ ಭವಿಷ್ಯ ರೂಪಿಸುವುದು ಬಹಳ ಮುಖ್ಯವಾದುದು ಎಂದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆ ರೂಪದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅವರಿಗೆ ಮಕ್ಕಳ ಮೇಲೆ ಅಗಾಧವಾದ ಪ್ರೀತಿ ಇತ್ತು. ಮಕ್ಕಳು ದೇಶದ ಭವಿಷ್ಯ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.ಮಕ್ಕಳು ಭವಿಷ್ಯದಲ್ಲಿ ಐಎಎಸ್, ಐಪಿಎಸ್, ವಿಜ್ಞಾನಿ, ವೈದ್ಯರು, ಶಿಕ್ಷಕರು, ಕ್ರೀಡಾಪಟು, ಉದ್ಯಮಿಗಳಾಗುವ ಕನಸುಗಳನ್ನು ಇಟ್ಟುಕೊಂಡು ಓದಬೇಕು. ಮನೆಯೇ ಮೊದಲ ಪಾಠ ಶಾಲೆ ಆಗಿರುವುದರಿಂದ ಕುಟುಂಬದಿಂದ ಬಾಲ್ಯವನ್ನು ಕಾಪಾಡಿ, ಉತ್ತಮ ಸಂಸ್ಕಾರ, ಶಿಕ್ಷಣ, ಮೌಲ್ಯಗಳನ್ನು ನೀಡಿ, ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ತಿಳಿಸಿದರು.
ಎಸ್.ಎಸ್.ಇ.ಎ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಂಕರರೆಡ್ಡಿ.ಸಿ. ಎನ್.ಮಾತನಾಡಿ, ಇಂದಿನ ಮಾಹಿತಿ ಯುಗದಲ್ಲಿ ಉತ್ತಮ ಶಿಕ್ಷಣ ಪಡೆಯಲು ವಸತಿ ಶಾಲೆಗಳು ತುಂಬಾ ಸಹಕಾರಿಯಾಗಿದ್ದು. ಶಿಕ್ಷಣ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರುಕಾರ್ಯಕ್ರಮದಲ್ಲಿ ಶಾಲೆಯಿಂದ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು.
ಪ್ರಾಂಶುಪಾಲರಾದ ಗಂಗರೆಡ್ಡಿ.ವಿ., ಶಿಕ್ಷಕರಾದ ಸುಮಲತಾ, ಶಾಂತಮ್ಮ ಮತ್ತು ಪೋಷಕರು ಭಾಗವಹಿಸಿದ್ದರು.