ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿಯ ನಿರ್ದೇಶಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಕುಷ್ಟಗಿಸಮಾಜದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು, ಸಮಾಜದ ಪ್ರತಿಯೊಂದು ಕಾರ್ಯಗಳಲ್ಲಿ ಯುವಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ ಗಂಗಾವತಿ ಹೇಳಿದರು.
ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ನೂತನವಾಗಿ ಆಯ್ಕೆಯಾದ ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ದ್ಯಾಮಮ್ಮ ದೇವಿಯ ಜಾತ್ರೆಯಲ್ಲಿ ವಿಶ್ವಕರ್ಮ ಸಮಾಜದಿಂದ ಸೇವೆ ಸಲ್ಲಿಸಿದವರಿಗೆ ಅಭಿನಂದನಾ, ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಾವೆಲ್ಲ ಹಿಂದುಳಿದವರಾಗಿದ್ದು, ಸತತ ಕಾರ್ಯಕ್ರಮಗಳನ್ನು ಮಾಡುತ್ತಾ ಇದ್ದರೆ ಬಾಂಧವ್ಯ ಬೆಳೆಯುತ್ತದೆ. ಪ್ರತಿಯೊಂದು ಸಮಾಜದಲ್ಲೂ ಮೇಲು-ಕೀಳು ಎನ್ನುವುದು ಇದ್ದೇ ಇರುತ್ತದೆ. ಯಾವುದೇ ಸಣ್ಣ ಪುಟ್ಟ ಮನಸ್ತಾಪ, ಬಿನ್ನಾಭಿಪ್ರಾಯ ಇಟ್ಟುಕೊಳ್ಳದೇ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ದುಡಿದು ಸಮಾಜವನ್ನು ಬೆಳೆಸಬೇಕಿದೆ. ಒಗ್ಗಟ್ಟಿನಿಂದ ಮಾತ್ರ ಸಮಾಜದ ಬದಲಾವಣೆ ಅಭಿವೃದ್ಧಿ ಸಾಧ್ಯ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಬೆಳೆಸೋಣ ಎಂದರು.
ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ಬಡಿಗೇರ ಮಾತನಾಡಿ, ಯುವಕರು ಹೆಚ್ಚಾಗಿ ಸಮಾಜದ ಕಾಳಜಿ ವಹಿಸಿ ಮುನ್ನಡೆಯಬೇಕಿದೆ. ನಮ್ಮ ಸಮಾಜ ಸರ್ಕಾರದ ಸೌಲಭ್ಯ ಪಡೆಯಲು ಮುಂದಾಗಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬೆಳೆಯಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದರು. ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಹೊಸನಿಂಗಾಪುರ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕಾಧ್ಯಕ್ಷ ಶರಣಪ್ಪ ಬಡಿಗೇರ ವಹಿಸಿದ್ದರು. ಈ ಸಂದರ್ಭ ವೀರೇಶ ಪತ್ತಾರ, ರಾಮಚಂದ್ರಪ್ಪ ಬಡಿಗೇರ, ಅಮರೇಶ ವಿಶ್ವಕರ್ಮ, ಮಂಜುನಾಥ ಪತ್ತಾರ, ಯಮನೂರಪ್ಪ ಬಡಿಗೇರ, ಕಾಳಪ್ಪ ಬಡಿಗೇರ, ದೇವೇಂದ್ರಪ್ಪ ಬಡಿಗೇರ, ಮಹಾದೇವಪ್ಪ ಕಮ್ಮಾರ, ಸಿದ್ದಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ಶಣ್ಮುಖಪ್ಪ ಬಡಿಗೇರ, ಭೀಮಣ್ಣ ಬಡಿಗೇರ, ಅನೀಲ ಎಂ. ಕಮ್ಮಾರ, ಬಸವರಾಜ ಬಡಿಗೇರ, ಅಯ್ಯಪ್ಪ ಬಡಿಗೇರ, ಕೆ.ಆರ್. ಕಮ್ಮಾರ ಸೇರಿದಂತೆ ಇತರರಿದ್ದರು.