ಕನ್ನಡಪ್ರಭ ವಾರ್ತೆ ನಂಜನಗೂಡು
ಗ್ರಾಮದಲ್ಲಿ ಮೇ 4 ರಂದು ಶ್ರೀರಾಮ ನವಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ವಿಶೇಷವಾಗಿ ನಂಜನಗೂಡು-ಟಿ. ನರಸೀಪುರ ಮುಖ್ಯರಸ್ತೆಯ ರಸ್ತೆ ವಿಭಜಕದಲ್ಲಿರುವ ಸೋಲಾರ್ ವಿದ್ಯುತ್ ಕಂಬಕ್ಕೆ ಶ್ರೀರಾಮಚಂದ್ರ ಪ್ರಭುವಿನ ಕೇಸರಿ ಬಾವುಟವನ್ನು ಯುವಕರು ಕಟ್ಟಿದ್ದಾರೆ.
ಬಾವುಟ ಕಟ್ಟಲು ಅನುಮತಿ ಪಡೆದಿಲ್ಲ, ತೆರವುಗೊಳಿಸುವಂತೆ ಮೌಖಿಕವಾಗಿ ತಿಳಿಸಿದರೂ ತೆಗೆದಿರಲಿಲ್ಲ. ಹಾಗಾಗಿ ಬುಧವಾರ ನಾನೇ ಖುದ್ದು ತೆರಳಿ ಏಣಿ ಹತ್ತಿ ತೆರವು ಮಾಡಿದ್ದೇನೆ ಎಂದು ಪಿಡಿಒ ಈಶಕುಮಾರ್ ತಿಳಿಸಿದ್ದಾರೆ.ಆದರೆ, ಇದಕ್ಕೆ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು, ಗ್ರಾಮದಲ್ಲಿ ಈ ರೀತಿಯ ಅನೇಕ ಬಾವುಟಗಳನ್ನು ಅಳವಡಿಸಲಾಗಿದೆ. ಯಾರೂ ಕೂಡ ಅನುಮತಿ ಪಡೆದಿಲ್ಲ. ಆ ಬಾವುಟ ಇದ್ದಿದ್ದರೆ ಏನೂ ಸಮಸ್ಯೆ ಇರಲಿಲ್ಲ. ಹಿಂದು ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಪಿಡಿಒ ಈಶಕುಮಾರ್ ತಾವೇ ಖುದ್ದು ಏಣಿ ಹತ್ತಿ ಬಾವುಟವನ್ನು ಕಿತ್ತು ನೆಲೆಕ್ಕೆ ಬಿಸಾಡುವ ಮೂಲಕ ಹಿಂದೂಗಳನ್ನು ಕೆರಳುವಂತೆ ಮಾಡಿದ್ದಾರೆ.
ಇದರಿಂದಾಗಿ ಪಿಡಿಒ ಈಶಕುಮಾರ್ ಹಾಗೂ ಯುವಕರ ನಡುವೆ ವಾಗ್ವಾದವೂ ನಡೆದಿದೆ. ಇನ್ನು ಪಿಡಿಒ ಈಶಕುಮಾರ್ ಶ್ರೀರಾಮಚಂದ್ರ ಪ್ರಭುವಿನ ಬಾವುಟವನ್ನು ಕಿತ್ತು ಕೆಲಕ್ಕೆ ಬಿಸಾಡುವುದನ್ನು ಯುವಕರು ವಿಡಿಯೋ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳನ್ನು ಹರಿಬಿಟ್ಟಿದ್ದಾರೆ. ಪಿಡಿಒ ನಡೆದುಕೊಂಡಿರುವ ರೀತಿಗೆ ವ್ಯಾಪಕ ಖಂಡನೆಯು ಸಹ ವ್ಯಕ್ತವಾಗಿದೆ.