ಕನ್ನಡಪ್ರಭ ವಾರ್ತೆ ಅಥಣಿ
ಒಂದು ಕಾಲಕ್ಕೆ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ಷಾಮವಿದ್ದಾಗ. ತ್ಯಾಗ ಮತ್ತು ಪರಿಶ್ರಮದಿಂದ ಅಕ್ಷರ ಕ್ರಾಂತಿಯ ಮೂಲಕ ಬೆಳಕು ನೀಡಿದ ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳು ಅವರು ಸದಾ ಸ್ಮರಣೀಯರು ಎಂದು ಚಿಕ್ಕೋಡಿಯ ಬಿ.ಕೆ. ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜವಾಹರ ಕದಮ್ ಅಭಿಪ್ರಾಯಪಟ್ಟರು.ಅಥಣಿ ಕೆಎಲ್ಇ ಸ್ಥಳೀಯ ಅಂಗಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಖೋತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೆಎಲ್ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹೆಚ್ಚಿನ ಶಿಕ್ಷಣಕ್ಕಾಗಿ ಪಕ್ಕದ ಸಾಂಗಲಿ ಕೊಲ್ಲಾಪುರ ಮತ್ತು ಪುಣೆಯಂತಹ ಪಟ್ಟಣಗಳಿಗೆ ಹೋಗಬೇಕಾದ ಅನಿವಾರ್ಯತೆ ಮನಗಂಡ ಸಪ್ತರ್ಷಿಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಬೆಳಗಾವಿಯಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸುವ ಮೂಲಕ ಈ ಭಾಗದ ಶಿಕ್ಷಣ ಕ್ರಾಂತಿಗೆ ಕಾರಣರಾದರು ಎಂದು ಹೇಳಿದರು.ನೆಟ್ಟ ಕೆ.ಎಲ್.ಇ. ಎಂಬ ಸಸಿ ಇಂದು ಪ್ರಸ್ತುತ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದು ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಸಹ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ವಿಶ್ವಕ್ಕೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಡಾ.ಪ್ರಭಾಕರ ಕೋರೆ ಅವರನ್ನು 8ನೇ ಸಪ್ತರ್ಷಿ ಕರೆಯುತ್ತಾರೆ ಎಂದು ಹೇಳಿದರು.
ಎಸ್.ಎಸ್.ಎಂ.ಎಸ್. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಶಂಭುಲಿಂಗ ಮಮದಾಪೂರ ಅಧ್ಯಕ್ಷತೆ ವಹಿಸಿದ್ದರು.ಉಪಪ್ರಾಚಾರ್ಯ ಡಾ. ಪ್ರಶಾಂತ ಮಗದುಮ್ ಸ್ವಾಗತಿಸಿದರು, ಎಸ್.ಜಿ. ಸಲಗರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಜಿ. ವಂಟಗುಡಿ ಪರಿಚಯಿಸಿದರು, ಸಿ.ಎಸ್. ಗೋಟೆ ನಿರೂಪಿಸಿದರು. ಡಾ.ರೇಷ್ಮಾ ಇನಾಮದಾರ ವಂದಿಸಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ ಪಾಟೀಲ ಇದ್ದರು. ಎಲ್ಲ ಅಂಗಸಂಸ್ಥೆಗಳ ಮುಖ್ಯಶಿಕ್ಷಕರು, ಪ್ರಾಚಾರ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.