ಮಿಮ್ಸ್‌ ಆಸ್ಪತ್ರೆ ಜಾಗದ ಸ್ಯಾಟಲೈಟ್ ಸರ್ವೇಯೇ ಅವೈಜ್ಞಾನಿಕ

KannadaprabhaNewsNetwork |  
Published : Jul 28, 2026, 01:30 AM IST
೨೭ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ ಸೇರಿದ ಜಾಗದ ಸಂಬಂಧ ಜಿಲ್ಲಾಡಳಿತ ನಡೆಸಿದ ಸ್ಯಾಟಲೈಟ್ ಸರ್ವೆಯೇ ಅವೈಜ್ಞಾನಿಕವಾಗಿದೆ. ಸ್ಯಾಟಲೈಟ್ ಸರ್ವೇಯಲ್ಲಿ ಕೇವಲ ಆಸ್ಪತ್ರೆ ಜಾಗವನ್ನಷ್ಟೇ ತೋರಿಸಿಬಿಡಲಾಗಿದೆ. ಉಳಿದಂತೆ ಅದರೊಳಗೆ ಬರುವ ಖರಾಬು ಭೂಮಿ, ಒತ್ತುವರಿಯಾಗಿರುವ ಜಾಗ ಎಲ್ಲೆಲ್ಲಿ ಎಷ್ಟೆಷ್ಟು ಎಂಬುದನ್ನು ನಿಖರವಾಗಿ ತೋರಿಸದೆ ಮರೆಮಾಚಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ ಸೇರಿದ ಜಾಗದ ಸಂಬಂಧ ಜಿಲ್ಲಾಡಳಿತ ನಡೆಸಿದ ಸ್ಯಾಟಲೈಟ್ ಸರ್ವೆಯೇ ಅವೈಜ್ಞಾನಿಕವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಆರೋಪಿಸಿದರು.

ಸ್ಯಾಟಲೈಟ್ ಸರ್ವೇಯಲ್ಲಿ ಕೇವಲ ಆಸ್ಪತ್ರೆ ಜಾಗವನ್ನಷ್ಟೇ ತೋರಿಸಿಬಿಡಲಾಗಿದೆ. ಉಳಿದಂತೆ ಅದರೊಳಗೆ ಬರುವ ಖರಾಬು ಭೂಮಿ, ಒತ್ತುವರಿಯಾಗಿರುವ ಜಾಗ ಎಲ್ಲೆಲ್ಲಿ ಎಷ್ಟೆಷ್ಟು ಎಂಬುದನ್ನು ನಿಖರವಾಗಿ ತೋರಿಸದೆ ಮರೆಮಾಚಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.

ರಾಜ್ಯ ಪತ್ರದ ಪ್ರಕಾರ ಸರ್ವೇ ನಂ.೮೫೫/೩ರಲ್ಲಿ ೫ ಎಕರೆ ೩೦ ಗುಂಟೆ ಖರಾಬು ಭೂಮಿಯಲ್ಲಿ ೨ ಎಕರೆ ೩೧ ಗುಂಟೆ ಸ್ವಾಧೀನವಾಗಿದ್ದು, ಉಳಿದ ೩ ಎಕರೆ ನಾಪತ್ತೆಯಾಗಿದೆ. ಸರ್ವೇ ನಂ.೮೬೦ರಲ್ಲಿ ೭ ಎಕರೆ ೩೨ ಗುಂಟೆ ಖರಾಬು ಭೂಮಿ ಇದೆ. ಇದರಲ್ಲಿ ೨.೨೩ ಎಕರೆ ಭೂ ಸ್ವಾಧೀನವಾಗಿದ್ದು, ಉಳಿದ ೫.೦೯ ಎಕರೆ ಎಲ್ಲಿದೆ ಎಂಬುದನ್ನು ತೋರಿಸಿಲ್ಲ. ಸರ್ವೇ ನಂ. ೮೨೭/೨ರಲ್ಲಿ ೩೧ ಗುಂಟೆ ಖರಾಬು ಭೂಮಿ ಕಾಣಿಸುತ್ತಿಲ್ಲ. ಸರ್ವೇ ನಂ. ೮೨೪/೩ರಲ್ಲಿ ೮.೧೭ ಎಕರೆ ಜಮೀನಿನಲ್ಲಿ ೩.೧೩ ಎಕರೆ ಸ್ವಾಧೀನವಾಗಿದ್ದು ೭ ಗುಂಟೆ ಖರಾಬು ಭೂಮಿ ಇದೆ. ಆರ್‌ಟಿಸಿಯಲ್ಲಿ ೩೯ ಗುಂಟೆ ಮಾತ್ರ ಕಾಣಿಸಲಾಗಿದೆ. ಉಳಿಕೆ ಜಮೀನು ಎಲ್ಲಿ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ೫.೨೫ ಎಕರೆ ವಿಸ್ತೀರ್ಣದಲ್ಲಿದ್ದು, ಈ ಜಾಗ ಮಾತ್ರ ವಿವಾದಾಸ್ಪದವಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಉಳಿದಂತೆ ೧೯ ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ನ್ಯಾಯಾಲಯದಲ್ಲಿ ಇಲ್ಲದಿದ್ದರೂ ಆ ಜಾಗವನ್ನು ತೆರವುಗೊಳಿಸುವುದಕ್ಕೆ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಇದರಲ್ಲಿ ಜಿಲ್ಲಾಡಳಿತ ರಾಜಕೀಯ ಒತ್ತಡಗಳಿಗೆ ಮಣಿದಂತೆ ಕಂಡುಬರುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಪ್ರಭಾವಿಗಳು ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ಯಾಟಲೈಟ್ ಸರ್ವೇಯಲ್ಲಿ ೧೪.೨೪ ಎಕರೆ ಮಾತ್ರ ಒತ್ತುವರಿ ಮಾಡಿರುವುದಾಗಿ ತೋರಿಸಲಾಗಿದೆ. ಒತ್ತುವರಿಯಾಗಿರುವ ಜಾಗದಲ್ಲಿ ೯೯ ಅನಧಿಕೃತ ಕಟ್ಟಡಗಳಿವೆ ಎನ್ನಲಾಗಿದ್ದು, ಅವೆಲ್ಲವನ್ನೂ ಸ್ಯಾಟಲೈಟ್ ಸರ್ವೇಯಲ್ಲಿ ತೋರಿಸಬೇಕಿತ್ತು. ಮಹಿಳಾ ಕಾಲೇಜು, ಕಲ್ಲು ಕಟ್ಟಡ ಜಾಗ ಎಷ್ಟು ವಿಸ್ತೀರ್ಣದಲ್ಲಿದೆ. ಖರಾಬು ಜಮೀನು ಎಲ್ಲೆಲ್ಲಿ ಬರುವುದಾಗಿ ತೋರಿಸದೆ ಅವೈಜ್ಞಾನಿಕವಾಗಿ ಸರ್ವೇ ಮಾಡಲಾಗಿದೆ. ಈ ಮೊದಲು ೪೨ ಎಕರೆಯನ್ನು ಸ್ಯಾಟಲೈಟ್ ಸರ್ವೇಯಲ್ಲಿ ಗುರುತಿಸಿ ಇದೀಗ ಅದನ್ನು ೩೯.೩೩ ಎಕರೆಗೆ ಇಳಿಸಲಾಗಿದೆ. ಇದು ಕೇವಲ ಕಾಲಹರಣ ಮಾಡುವ ತಂತ್ರವೇ ಹೊರತು ಬೇರೇನೂ ಅಲ್ಲ ಎಂದು ನುಡಿದರು.

ಆಸ್ಪತ್ರೆ ಜಾಗದಲ್ಲಿ ಅಕ್ರಮವಾಗಿ ವಾಸವಿರುವ ತಮಿಳು ಕಾಲೋನಿಯ ೫೭೬ ಕುಟುಂಬಗಳನ್ನು ಒಂದು ವರ್ಷದೊಳಗೆ ತೆರವುಗೊಳಿಸುವಂತೆ ೭.೯.೨೦೧೫ರಲ್ಲೇ ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿದೆ. ಕರ್ನಾಟಕ ಕೊಳಗೇರಿ ಮಂಡಳಿಯವರು ಚಿಕ್ಕಮಂಡ್ಯ ಕೆರೆ ಅಂಗಳ ಸರ್ವೇ ನಂ.೫೦೭ರಲ್ಲಿ ೫೭೬ ಮನೆಗಳನ್ನು ೩೬ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ್ದರೂ ಅಲ್ಲಿಗೆ ಸ್ಥಳಾಂತರಗೊಳಿಸಿಲ್ಲ. ಆಸ್ಪತ್ರೆ, ಮೆಡಿಕಲ್ ಕಾಲೇಜು ವಿಸ್ತರಣೆಯಾಗುವುದು ಸ್ಥಳೀಯ ರಾಜಕಾರಣಿಗಳು, ಪ್ರಭಾವಿಗಳಿಗೆ ಬೇಕಿಲ್ಲ. ಹೀಗಾಗಿ ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಇನ್ನೂ ಗಗನಕುಸುಮವಾಗಿಯೇ ಉಳಿದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸೀಟುಗಳನ್ನು ೧೫೦ರಿಂದ ೨೦೦ಕ್ಕೆ ಹಾಗೂ ಸ್ನಾತಕೋತ್ತರ ಪದವಿಗೆ ೨೩ ಹೆಚ್ಚುವರಿ ಸೀಟುಗಳನ್ನು ನೀಡಲಾಗಿದೆ. ಇದರಿಂದ ೧೦೦ ಕೋಟಿಗೂ ಹೆಚ್ಚು ಹಣ ಮಿಮ್ಸ್‌ಗೆ ಸಿಗಲಿದ್ದರೂ ಜಾಗದ ಕೊರತೆಯಿಂದ ವಿಸ್ತರಣೆ ಮಾಡಲಾಗುತ್ತಿಲ್ಲ. ಜಾಗವಿದ್ದರೂ ತೆರವುಗೊಳಿಸುವ ಬದ್ಧತೆ, ಇಚ್ಛಾಶಕ್ತಿ ಜಿಲ್ಲಾಡಳಿತಕ್ಕಿಲ್ಲ. ಇದೂ ಕೂಡ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಬೆಳವಣಿಗೆಗೆ ತೊಡಕಾಗಿದೆ ಎಂದು ದೂರಿದರು.

ಇದರ ನಡುವೆ ಮಂಡ್ಯ ತಮಿಳು ಕಾಲೋನಿ ನಿವಾಸಿಗಳು ತಮಿಳುನಾಡಿನಲ್ಲೂ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು ಪಡೆದು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಲ್ಲದೇ, ಕರ್ನಾಟಕದಲ್ಲಿಯೂ ಮತದಾರರ ಗುರುತಿನ ಚೀಟಿ ಪಡೆದು ಇಲ್ಲಿಯೂ ಮತದಾನ ಮಾಡುತ್ತಿದ್ದಾರೆ. ನಗರಸಭೆಯ ೨೪ನೇ ವಾರ್ಡ್‌ಗೆ ಸೇರುವ ತಮಿಳು ಕಾಲೋನಿಯಲ್ಲಿ ೧೬೮೫ ಮತದಾರರಿದ್ದು ತಮಿಳು ಕಾಲೋನಿ ನಿವಾಸಿಗಳಲ್ಲಿ ೧೫೦ ರಿಂದ ೨೦೦ ಕುಟುಂಬಗಳು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ನಗರದ ಸುತ್ತ ಸ್ವಂತ ಮನೆ, ಜಮೀನುಗಳನ್ನು ಹೊಂದಿದ್ದಾರೆ. ಇವರು ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30 ವಿದ್ಯಾರ್ಥಿಗಳ ಸಾವಿಗೆ ಸಚಿವ ಶಾ ನೇರ ಹೊಣೆ
ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ: ಬಿ.ಸಿ.ಪಾಟೀಲ್