ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಆಗುವುದಿಲ್ಲ-ಸಚಿವ ಹೆಬ್ಬಾಳಕರ್‌

KannadaprabhaNewsNetwork | Published : Nov 10, 2024 1:40 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಆಗುವುದಿಲ್ಲ. ಐದು ವರ್ಷವೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಹಾವೇರಿ (ಶಿಗ್ಗಾಂವಿ): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟ ಆಗುವುದಿಲ್ಲ. ಐದು ವರ್ಷವೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ತಾಲೂಕಿನ ಕಲ್ಯಾಣ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ್ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸದಾ ಬಡವರ ಬಗ್ಗೆ ಚಿಂತಿಸುವ ಪಕ್ಷ. ಜನ ಸಾಮಾನ್ಯರ ಅಭಿವೃದ್ಧಿಯೇ ಪಕ್ಷದ ಗುರಿಯಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಿಗೆ ಜಿಎಸ್‌ಟಿ ವಿಧಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಪ್ರತಿಯೊಂದಕ್ಕೂ ಜಿಎಸ್‌ಟಿ ಹೇರುತ್ತಾ ಬಂದಿದೆ ಎಂದು ಟೀಕಿಸಿದರು.ಕೊರೋನಾ ಬಂದು ಹೋದಮೇಲೆ ಜನರ ಕಷ್ಟ ಕೇಳುವರಿರಲಿಲ್ಲ. ಇದರಿಂದ ಸಂಕಷ್ಟದಲ್ಲಿದ್ದ ಜನರ ಸುಧಾರಣೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇದರ ಫಲವಾಗಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪುತ್ತಿದ್ದು, ತಿಂಗಳಿಗೆ ಮೂರು ಸಾವಿರ ಕೋಟಿ ರುಪಾಯಿ ವ್ಯಯಿಸಲಾಗುತ್ತಿದೆ ಎಂದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಇಂಥ ನಾಯಕರಿರುವ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಸಿಕ್ಕಾಗಿನಿಂದ ಇಲ್ಲಿಯವರೆಗೂ ಕಾಂಗ್ರೆಸೇ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ದೇಶದಲ್ಲಿರುವ ಪ್ರತಿಯೊಂದು ಯೋಜನೆಗಳು ಕೂಡ ಕಾಂಗ್ರೆಸ್ ನೀಡಿದ ಕೊಡುಗೆ ಎಂದರು. ಬೆಳೆಹಾನಿಗೆ ಪರಿಹಾರ ನೀಡುವ ಸಲುವಾಗಿ ಕಾಂಗ್ರೆಸ್ ಶಾಸಕರು, ಸಚಿವರು ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ಹಣ ಕೊಡಲಿಲ್ಲ. ಬೇರೆ ರಾಜ್ಯಗಳಲ್ಲಿ ಏನೇ ಆದರೂ ಮೋದಿ, ಅಮಿತ್ ಶಾ ಹೋಗುತ್ತಾರೆ. ಆದರೆ, ಕರ್ನಾಟಕದಲ್ಲಿ ಬರ ಬಂದಿದ್ದರೂ ಮೋದಿ ಬರಲಿಲ್ಲ. 2019ರಲ್ಲಿ ಭಾರಿ ಮಳೆಯಿಂದ ಉತ್ತರ ಕರ್ನಾಟಕವೇ ತತ್ತರಿಸಿದರೂ ಮೋದಿ ತಿರುಗಿ ನೋಡಲಿಲ್ಲ ಎಂದು ಸಚಿವರು ಟೀಕಾ ಪ್ರಹಾರ ನಡೆಸಿದರು.ಬಿಜೆಪಿಯವರಿಗೆ ಶ್ರೀಮಂತರ ಚಿಂತೆಯಾದರೆ ಕಾಂಗ್ರೆಸ್ಗೆ ಬಡವರ ಚಿಂತೆ. ಸರ್ವರಿಗೂ ಸಮಬಾಳು ಎಂಬುದೇ ಕಾಂಗ್ರೆಸ್ ಗುರಿ ಎಂದರು.ಕುಂದೂರು ಜಿಪಂ ವ್ಯಾಪ್ತಿಯ ಕಲ್ಯಾಣ, ಕುಲಸಾಪುರ, ಚಿಕ್ಕಮಲ್ಲೂರ, ಹಿರೇಮಲ್ಲೂರ, ಗಂಜಿಗಟ್ಟಿ ಗ್ರಾಮಗಳಲ್ಲಿ ಸಚಿವರು ಪ್ರಚಾರ ನಡೆಸಿದರು.ಈ ವೇಳೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಮುಖಂಡರಾದ ಗೀತಾ ಪೂಜಾರ್, ಶಂಭು ಅಜೂರು ಭರಮಣ್ಣ ಶಿವೂರು ಸೇರಿದಂತೆ ಹಲವು ಮುಖಂಡರು ಇದ್ದರು.

Share this article