ಗ್ರಾಪಂಯಲ್ಲಿ ಅಂಗವಿಕಲರಿಗೆ ಮೀಸಲಿಟ್ಟಿದ್ದ ಶೇ.೫ ರಷ್ಟು ಅನುದಾನ ದುರ್ಬಳಕೆ
ಇಲ್ಲಿನ ಗ್ರಾಪಂಯಲ್ಲಿ ಅಂಗವಿಕಲರಿಗೆ ಮೀಸಲಿಟ್ಟಿದ್ದ ಶೇ.೫ ರಷ್ಟು ಅನುದಾನ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಬುಧವಾರ ಗ್ರಾಪಂಗೆ ಮುತ್ತಿಗೆ ಹಾಕಿ ಅಂಗವಿಕಲರು ಪ್ರತಿಭಟಿಸಿದರು.
ಮುಖಂಡ ಮಂಜುನಾಥ ಕೊಪ್ಪಳ ಮಾತನಾಡಿ, ಗ್ರಾಮದ 2021-22 ಹಾಗೂ 23ನೇ ಸಾಲಿನಲ್ಲಿ ಲಕ್ಷಾಂತರ ಅನುದಾನವನ್ನು ಗ್ರಾಪಂ ಮೀಸಲಿಟ್ಟಿದೆ. ಆದರೆ ಅದನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಬಳಕೆ ಮಾಡುವುದನ್ನು ಬಿಟ್ಟು ಇನ್ನಿತರ ಕೆಲಸಕ್ಕೆ ಉಪಯೋಗಿಸಿದ್ದಾರೆ. ಗ್ರಾಮದ ಅಂಗವಿಕಲರ ಅಲ್ಲದ ನಾಲ್ಕು ಜನರಿಗೆ ₹೨,೬೧,೩೫೦ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಇದರ ಮಾಹಿತಿಯನ್ನು ಸರಿಯಾಗಿ ನೀಡುತ್ತಿಲ್ಲ. ಈ ಅನುದಾನಕ್ಕಾಗಿ ಕಳೆದ ಎರಡ್ಮೂರು ವರ್ಷದಿಂದ ಅಂಗವಿಕಲರ ಗ್ರಾಪಂಗೆ ಅಲೆದಾಡುತ್ತಿದ್ದರು. ಅಧಿಕಾರಿಗಳಾಗಲಿ, ಆಡಳಿತ ಮಂಡಳಿಯವರಾಗಲಿ ಅನುದಾನದ ಬಗ್ಗೆ ಸರಿಯಾದ ಮಾಹಿತಿ ತಿಳಿಸುತ್ತಿಲ್ಲ ಎಂದು ದೂರಿದರು.ಸ್ಥಳಕ್ಕೆ ಆಗಮಿಸಿದ ಪಿಡಿಒ ದೇವೇಂದ್ರಪ್ಪ ಕಮತರ ಪ್ರತಿಕ್ರಿಯಿಸಿ, ಇದು ನನ್ನ ಅವಧಿಯಲ್ಲಿ ಆಗಿಲ್ಲ, ಇದರ ಬಗ್ಗೆ ಮಾಹಿತಿ ಇಲ್ಲ. ನಿವೇಶನವನ್ನು ನಿಗದಿ ಪಡಿಸಿ ಹಂತಹಂತವಾಗಿ ಅವರ ಕಾರ್ಯಚಟುವಟಿಕೆಗಾಗಿ ಒಂದು ಮಿಟಿಂಗ್ ಹಾಲನ್ನು ಒದಗಿಸಲಾಗುವುದು ಎಂದರು.