ಶುದ್ಧ ಕುಡಿವ ನೀರಿನ ಘಟಕಗಳ ಸ್ತಬ್ಧ, ಜನತೆ ಹೈರಾಣ!

KannadaprabhaNewsNetwork |  
Published : May 16, 2026, 04:00 AM IST
ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಹೊಸೂರ ಸಿರಾಸಾಬ ದರ್ಗಾದ ಬಳಿ ಬಂದ್ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ. ೨ಎ) ರಾಂಪುರ ಶ್ರೀನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಕೂಡಾ ಬಂದ್ ಸ್ಥಿತಿಯಲ್ಲಿರುವ ಘಟಕ | Kannada Prabha

ಸಾರಾಂಶ

ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಕೋಟ್ಯಂತರ ರೂ. ಹಣ ವಿನಿಯೋಗಿಸಿದೆ. ಆದರೆ ನಗರಸಭೆ ವ್ಯಾಪ್ತಿಯ ಹಲವಾರು ಶುದ್ಧ ನೀರಿನ ಘಟಕಗಳು ಸ್ತಬ್ಧವಾಗಿ ಹಲವು ತಿಂಗಳು ಕಳೆದರೂ ಕೇಳುವವರೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು, ಜನತೆ ಶುದ್ಧ ಕುಡಿಯುವ ನೀರಿಗಾಗಿ ಖಾಸಗಿ ಘಟಕಗಳನ್ನೇ ಅವಲಂಬಿಸುವ ಸ್ಥಿತಿ ಬಂದಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಕೋಟ್ಯಂತರ ರೂ. ಹಣ ವಿನಿಯೋಗಿಸಿದೆ. ಆದರೆ ನಗರಸಭೆ ವ್ಯಾಪ್ತಿಯ ಹಲವಾರು ಶುದ್ಧ ನೀರಿನ ಘಟಕಗಳು ಸ್ತಬ್ಧವಾಗಿ ಹಲವು ತಿಂಗಳು ಕಳೆದರೂ ಕೇಳುವವರೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು, ಜನತೆ ಶುದ್ಧ ಕುಡಿಯುವ ನೀರಿಗಾಗಿ ಖಾಸಗಿ ಘಟಕಗಳನ್ನೇ ಅವಲಂಬಿಸುವ ಸ್ಥಿತಿ ಬಂದಿದೆ.ರಬಕವಿ ಹೊಸೂರ ರಾಮಪುರ ಸೇರಿ ೫ ಘಟಕಗಳಲ್ಲಿ ಕೇವಲ ರಬಕವಿ ಬಸ್ ನಿಲ್ದಾಣ ರಸ್ತೆಯಲ್ಲಿ ಒಂದು ಘಟಕದಲ್ಲಿ ಮಾತ್ರ ನೀರು ಬರುತ್ತದೆ. ಹೊಸೂರ ಸಿರಾಸಾಬ ಮುರಾದಸಾಬ ದರ್ಗಾ ಪಕ್ಕದಲ್ಲಿನ, ರಾಮಪುರನೀಲಕಂಠೇಶ್ವರ ಮಠದ ಆವರಣ, ರಬಕವಿ ಕುಂಬಾರ ಓಣಿಯಲ್ಲಿನ ಪರಪ್ಪ ಉರಭಿನವರ ಮನೆಯ ಪಕ್ಕದಲ್ಲಿ ಒಂದು ಹೀಗೆ ೪ ಘಟಕಗಳು ಸಂಪೂರ್ಣ ಬಂದ್ ಆಗಿ ಹಲವು ತಿಂಗಳುಗಳೇ ಕಳೆದಿವೆ.

ಬನಹಟ್ಟಿಯಲ್ಲಿ ೯ ಘಟಕಗಳ ಪೈಕಿ ಮೂರು ಮಾತ್ರ ಚಾಲು ಹಂತದಲ್ಲಿವೆ. ಶರಣ್ಯಾರ ಭಾವಿ, ಬಾಲಾಜಿ ದೇವಸ್ಥಾನ ಎದುರಿನ ಘಟಕಗಳು ಮಾತ್ರ ಚಾಲೂ ಇದ್ದು, ಉಳಿದೆಲ್ಲವುಗಳು ಬಂದ್ ಆಗಿವೆ.

ನೀರು ಶುದ್ಧೀಕರಣ ಘಟಕಗಳು ಸ್ಥಗಿತಗೊಂಡಿರುವ ಪರಿಣಾಮ ಅವಳಿ ನಗರ ಜನರಿಗೆ ಅಶುದ್ಧ ನೀರೇ ಗತಿಯಾಗಿದೆ. ಅದರಲ್ಲೂ ಈಗ ನದಿಯಲ್ಲಿ ನಿಂತ ನೀರು ಇರುವುದರಿಂದ ಕಾಯಿಸಿ ಆರಿಸಿ ಕುಡಿಯುವಂತಾಗಿದೆ. ಕೆಲವು ಘಟಕಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಸ್ಥಾಪನೆ ಮಾಡಿದ್ದು, ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸ್ತಬ್ಧವಾಗಿವೆ ಎನ್ನುತ್ತಾರೆ ಸಾರ್ವಜನಿಕರು. ಆದರೆ ಶುದ್ಧನೀರಿನ ಘಟಕಗಳು ಹೆಸರಿಗೆ ಮಾತ್ರ ಉಳಿದುಕೊಂಡಿದ್ದು, ನಾಗರಿಕರಿಗೆ ಹನಿ ನೀರು ದಕ್ಕದಂತಾಗಿದೆ.

ಟೆಂಡರ್ ನವೀಕರಣವಾಗದ ಹಿನ್ನೆಲೆ ಈ ಘಟಕಗಳು ಸ್ತಗಿತಗೊಂಡಿವೆ. ನಗರಸಭೆ ಅಧೀನದಲ್ಲಿನ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಹೀಗಾಗಿ ಸರ್ಕಾರದ ಕೋಟ್ಯಂತರ ರೂ. ಹಣ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ರಾಜ್ಯ ಸರ್ಕಾರ ೧,೦೦೦ ಲೀಟರ್ ಶುದ್ಧ ನೀರು ಪೂರೈಕೆ ಮಾಡುವ ಆರ್‌ಒ ಪ್ಲಾಂಟ್ ಘಟಕಕ್ಕೆ ₹೧೦ ಲಕ್ಷ ಹಾಗೂ ೫೦೦ ಲೀಟರ್ ನೀರು ಪೂರೈಸುವ ಘಟಕಕ್ಕೆ ₹೫ ಲಕ್ಷ ನೆರವು ನೀಡಿದೆ. ಇಷ್ಟು ದೊಡ್ಡ ಮೊತ್ತದ ಹಣ ನೀಡಿದ್ದರೂ ಕೂಡ ಅವಳಿ ನಗರದ ಜನರು ಮಾತ್ರ ಶುದ್ಧ ನೀರಿಗಾಗಿ ಪರದಾಡುವ ಪರಿಸ್ಥಿತಿ ಒದಗಿ ಬಂದಿದೆ.

ಘಟಕ ಸ್ಥಾಪಿಸುವಾಗ ಏನಾದರೂ ತೊಂದರೆ ಆದರೆ ಯಾವ ಏಜೆನ್ಸಿ ಟೆಂಡರ್ ಪಡೆದುಕೊಂಡಿದೆಯೋ ಅವರೇ ನಿರ್ವಹಣೆ ಮಾಡಬೇಕು ಎಂಬ ಷರತ್ತು ಸಹ ಇದೆ. ಆದರೆ, ಇದನ್ನು ಯಾರೂ ಪಾಲನೆ ಮಾಡುತ್ತಿಲ್ಲ. ಅಧಿಕಾರಿಗಳೂ ಸಹ ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ಆರ್‌ಒ ಪ್ಲಾಂಟ್‌ಗಳು ಅವಳಿ ನಗರದ ಪ್ರದೇಶ ಜನರಿಗೆ ಶುದ್ಧ ನೀರು ಕೊಡದೆ ಪಾಳು ಬಿದ್ದಿವೆ. ಶುದ್ಧ ಕುಡಿಯುವ ನೀರು ಸಿಗದಿದ್ದರಿಂದ ಜನರು ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಸಂಬಂಧಿಸಿದ ಅಧಿಕಾರಿಗಳು ಗಾಢ ನಿದ್ರೆಯಿಂದ ಎಚ್ಚೆತ್ತು ಪುನಃ ನೀರಿನ ಘಟಕ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳೀಯ ಹಾಗೂ ಶಾಸಕರ ನಿಧಿಯ ನೆರವಿನಡಿ ಸಾಕಷ್ಟು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರೂ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಅವಳಿ ನಗರದ ಜನತೆ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಶಾಸಕರು, ಪೌರಾಯುಕ್ತರು ಸ್ಥಗಿತಗೊಂಡಿರುವ ಘಟಕಗಳ ಮಾಹಿತಿ ಪಡೆದು, ತಾಂತ್ರಿಕ ಸಮಸ್ಯೆಗಳ ಪರಿಹರಿಸಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಕೊಡಿಸುವತ್ತ ಚಿತ್ತ ಹರಿಸಬೇಕು.

- ಚಿದಾನಂದ ಸೊಲ್ಲಾಪೂರ. ಕನ್ನಡಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರಬಕವಿ

ಅವಳಿ ನಗರದಲ್ಲಿ ಹಾಳಾದ ಮತ್ತು ಬಂದ್ ಸ್ಥಿತಿಯಲ್ಲಿರುವ ಶುದ್ಧ ನೀರಿನ ಘಟಕಗಳನ್ನು ಕೂಡಲೇ ಸರ್ವೇ ಮಾಡಿಸಿ, ತಕ್ಷಣದಿಂದ ಕ್ರಿಯಾಯೋಜನೆ ತಯಾರಿಸಿ ಡಿಸಿಯವರ ಗಮಕ್ಕೆ ತಂದು ಸರಿಮಾಡುತ್ತೇವೆ. ನಾನು ಕೂಡ ಕಳೆದ ವಾರ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದೇನೆ. ಅವಳಿ ನಗರದ ಜನತೆಗೆ ಬೇಕಾಗುವ ನೀರಿನ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ.

- ಗೋಪಾಲ ಕಾಸೆ ಪೌರಾಯುಕ್ತರು. ನಗರಸಭೆ ರಬಕವಿ-ಬನಹಟ್ಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ
ಪ್ರಾಮಾಣಿಕರನ್ನು ಗೌರವಿಸಿ, ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ನಾನು