ಬೆಂಗ್ಳೂರಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೇ ಕಚೇರಿ!

KannadaprabhaNewsNetwork |  
Published : Dec 18, 2025, 12:45 AM IST
Post Office

ಸಾರಾಂಶ

ಬಹುಹಿಂದೆ ಕೈಯಲ್ಲೊಂದು ಲಾಟೀನು, ಬಗಲಲ್ಲಿ ಟಪಾಲು ಚೀಲ ಹಿಡಿದು ಬರುತ್ತಿದ್ದ ಅಂಚೆಯಣ್ಣನ ಕಚೇರಿ ಈಗ ಜೆನ್‌ - ಝಿ ಕಾಲಕ್ಕೆ ತಿರುಗಿದೆ. ಬೆಂಗಳೂರಿನ ಅಚಿತ್‌ ನಗರದಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೆ ಕಚೇರಿ ಅನಾವರಣಗೊಂಡಿದೆ.

 ಬೆಂಗಳೂರು :  ಬಹುಹಿಂದೆ ಕೈಯಲ್ಲೊಂದು ಲಾಟೀನು, ಬಗಲಲ್ಲಿ ಟಪಾಲು ಚೀಲ ಹಿಡಿದು ಬರುತ್ತಿದ್ದ ಅಂಚೆಯಣ್ಣನ ಕಚೇರಿ ಈಗ ಜೆನ್‌ - ಝಿ ಕಾಲಕ್ಕೆ ತಿರುಗಿದೆ. ಬೆಂಗಳೂರಿನ ಅಚಿತ್‌ ನಗರದಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೆ ಕಚೇರಿ ಅನಾವರಣಗೊಂಡಿದೆ.

ವರ್ಕ್ ಕೆಫೆ ಶೈಲಿಯ ಆಂತರಿಕ ವಿನ್ಯಾಸ, ಡಿಜಿಟಲ್‌ ಪಾವತಿ, ಮೈ ಸ್ಟ್ಯಾಂಪ್‌ ಮೂಲಕ ನಮ್ಮದೇ ಭಾವಚಿತ್ರದ ಅಂಚೆ ಚೀಟಿ ಪಡೆವ ಸೌಲಭ್ಯ, ಓದಿಗೆ ಪುಸ್ತಕಗಳು... ಹೀಗೆ ಜನರೇಷನ್ ಝಡ್ ಪೀಳಿಗೆಯನ್ನು ಆಕರ್ಷಿಸುವ ಎಲ್ಲವನ್ನೂ ಒಳಗೊಂಡು ಅಂಚೆ ಕಚೇರಿ ಇದಾಗಿದೆ.

ಸಾಂಪ್ರದಾಯಿಕ ಸ್ವರೂಪದಲ್ಲಿದ್ದ ಅಚಿತ್ ನಗರ ಅಂಚೆ ಕಚೇರಿ

ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಸಾಂಪ್ರದಾಯಿಕ ಸ್ವರೂಪದಲ್ಲಿದ್ದ ಅಚಿತ್ ನಗರ ಅಂಚೆ ಕಚೇರಿಯನ್ನು ಹೀಗೆ ನವೀಕರಣ ಮಾಡಲಾಗಿದೆ. ಒಳವಿನ್ಯಾಸ, ಕಲೆಯನ್ನು ವಿದ್ಯಾರ್ಥಿಗಳಿಂದಲೇ ರೂಪಿಸಲಾಗಿದೆ.

ವರ್ಕ್ ಕೆಫೆ, ಪುಸ್ತಕ ಮತ್ತು ಬೋರ್ಡ್ ಆಟಗಳಿಂದ ತುಂಬಿದ ‘ಬುಕ್-ಬೂತ್‌’ ಹಾಗೂ ವಿದ್ಯಾರ್ಥಿಗಳಿಂದ ರಚಿಸಲಾದ ಕಲಾಕೃತಿಗಳನ್ನು ಇರಿಸಲಾಗಿದೆ. ಆಂತರಿಕ ವಿನ್ಯಾಸವು ವರ್ಕ್ ಕೆಫೆ ಶೈಲಿಯನ್ನು ಪ್ರತಿಬಿಂಬಿಸುವಂತಿದೆ. ಉಚಿತ ವೈ-ಫೈ, ಆರಾಮದಾಯಕ ಆಸನ ವ್ಯವಸ್ಥೆ, ಲ್ಯಾಪ್‌ಟಾಪ್, ಮೊಬೈಲ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌, ಕಾಫಿ ವೆಂಡಿಂಗ್ ಯಂತ್ರ ಒಳಗೊಂಡಿದೆ.

ಜೆನ್‌-ಝಿ ಡಿಐವೈ (Do-It-Yourself) ಪರಿಕಲ್ಪನೆ

ಜೆನ್‌-ಝಿ ಡಿಐವೈ (Do-It-Yourself) ಪರಿಕಲ್ಪನೆಯಲ್ಲಿ ಸ್ವಯಂ-ಬುಕಿಂಗ್ ಕಿಯೋಸ್ಕ್ ಮತ್ತು ಕ್ಯುಆರ್ ಕೋಡ್ ತ್ವರಿತ ಪಾವತಿ ಆಯ್ಕೆ, ಡಿಜಿಟಲ್ ಪಾವತಿ ಇದೆ. ಇಲ್ಲಿರುವ ‘ಮೈಸ್ಟ್ಯಾಂಪ್’ ಕೌಂಟರ್‌ನಲ್ಲಿ ತಮ್ಮದೇ ಭಾವಚಿತ್ರದ ಅಂಚೆಚೀಟಿಗಳನ್ನೂ ಪಡೆಯಬಹುದು.

ಈ ಕಚೇರಿಯನ್ನು ಬುಧವಾರ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಪ್ರಕಾಶ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಜೆನ್‌-ಝಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿ ಈ ಅಂಜೆ ಕಚೇರಿ ನಿರ್ಮಿಸಿದ್ದೇವೆ. ‘ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ’ ಎಂಬ ಈ ಉಪಕ್ರಮದ ಧ್ಯೇಯವಾಕ್ಯವನ್ನು ಅನುಸರಿಸಲಾಗಿದೆ. ಈ ಕ್ಯಾಂಪಸ್‌ನಲ್ಲಿ ಪಾರ್ಸೆಲ್ ಪ್ಯಾಕೇಜಿಂಗ್ ಸೇವೆಗಳನ್ನು ಸಹ ಕಚೇರಿ ಒದಗಿಸುತ್ತದೆ ಎಂದರು.

ಆಚಾರ್ಯ ಸಮೂಹ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕರಾದ ಡಾ। ವಿ.ಭಾಗೀರಥಿ ಪಶ್ಚಿಮ ವಿಭಾಗದ ಅಂಚೆ ಕಚೇರಿಗಳ ಹಿರಿಯ ಮೇಲ್ವಿಚಾರಕಿ ಸೂರ್ಯಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್ಸಲ್ಲಿ ಲಗೇಜ್‌ ದರ ಹೆಚ್ಚಳ
ಆರೆಸ್ಸೆಸ್ಸನ್ನು ದೆವ್ವಕ್ಕೆ ಹೋಲಿಸಿದ ಪ್ರಿಯಾಂಕ್‌