ಬೆಂಗಳೂರು : ‘ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್ಎಸ್ಎಸ್) ಒಂದು ದೆವ್ವವಾದರೆ, ಬಿಜೆಪಿ ಅದರ ನೆರಳು. ನಾವು ನೆರಳಿನ ಜೊತೆಗೆ ಗುದ್ದಾಡುತ್ತಿದ್ದೇವೆ. ದೆವ್ವದ ಜೊತೆ ಗುದ್ದಾಡಿದರೆ ದೇಶ ಉದ್ಧಾರವಾಗುತ್ತದೆ’ ಎಂದಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ಆರ್ಎಸ್ಎಸ್ ಹಿಂದೆ ಬಹುದೊಡ್ಡ ಅಕ್ರಮ ಹಣ ವರ್ಗಾವಣೆ ದಂಧೆ (ಮನಿ ಲಾಂಡರಿಂಗ್) ಇದೆ’ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಭಾನುವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ-ಕಣ್ಣೀರು’ (ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
‘ನಾನು ಈಗ ಆರ್ಎಸ್ಎಸ್ ಬಗ್ಗೆ ಸ್ವಲ್ಪ ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ. ಆರ್ಎಸ್ಎಸ್ನವರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಅವರಲ್ಲಿ ಉತ್ತರವೇ ಇಲ್ಲ. ಆರ್ಎಸ್ಎಸ್ ಅನ್ನು ನೋಂದಣಿ ಮಾಡಿಸಬೇಕು ಎಂದು ಹೇಳಿದರೆ, ‘ನೋಂದಣಿ ಮಾಡಿಸುವ ಅಗತ್ಯವಿಲ್ಲ, ನಮ್ಮದು ವ್ಯಕ್ತಿಗಳ ಸಂಸ್ಥೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಹೇಳುತ್ತಾರೆ. ಬೆಂಗಳೂರು ಕ್ಲಬ್ ಸಹ ವ್ಯಕ್ತಿಗಳ ಸಂಸ್ಥೆ. ಅದು ಸಹ ತೆರಿಗೆ ಮತ್ತು ಸಂವಿಧಾನದ ವ್ಯಾಪ್ತಿಗೆ ಬರುತ್ತದೆ. ನಾನು ಹೇಳುತ್ತಿದ್ದೇನೆ ನೋಡಿ, ಇವತ್ತಲ್ಲ ನಾಳೆ ಆರ್ಎಸ್ಎಸ್ ನೋಂದಣಿಯಾಗಲೇಬೇಕು. ನಾನು ಮಾಡಿಸುತ್ತೇನೆ. ನಾವು ಕಾನೂನು ಮತ್ತು ಸಂವಿಧಾನ ಪರವಾಗಿದ್ದರೆ ಹಾಗೂ ರಾಜಕೀಯ ಇಚ್ಛಾಶಕ್ತಿ ಹೊಂದಿದ್ದರೆ ಆರೆಸ್ಸೆಸ್ ಅಥವಾ ಎಸ್ಡಿಪಿಐ ಸೇರಿ ಯಾವುದೇ ಕೋಮುವಾದಿ ಸಂಘಟನೆಯನ್ನು ಬಗ್ಗಿಸಬಹುದು’ ಎಂದರು.
2,500 ಸಂಘಟನೆಗಳ ನೆಟ್ವರ್ಕ್:
‘ಆರ್ಎಸ್ಎಸ್ 2500 ಸಂಘಟನೆಗಳ ನೆಟ್ವರ್ಕ್ ಹೊಂದಿದೆ. ಅಮೆರಿಕ, ಇಂಗ್ಲೆಂಡ್ನಿಂದ ಆರ್ಎಸ್ಎಸ್ ದುಡ್ಡು ತೆಗೆದುಕೊಳ್ಳುತ್ತದೆ. ಅಂದರೆ ಅದರ ಹಿಂದೆ ದೊಡ್ಡ ಮನಿ ಲಾಂಡರಿಂಗ್ ಇದೆ. ನಾವೆಲ್ಲ ತೆರಿಗೆ ಪಾವತಿಸಬೇಕು. ಆರ್ಎಸ್ಎಸ್ ಮಾತ್ರ ತೆರಿಗೆ ವಿನಾಯ್ತಿ ಕೇಳುತ್ತದೆ. ಇನ್ನು ನಾವು ಯಾರ ಬಳಿಯೂ ದೇಣಿಗೆ ಪಡೆಯುವುದಿಲ್ಲ. ಕೇವಲ ಗುರು ದಕ್ಷಿಣೆ ತೆಗೆದುಕೊಳ್ಳುತ್ತೇವೆ ಎಂದು ಮೋಹನ್ ಭಾಗವತ್ ಹೇಳುತ್ತಾರೆ. ಅದು ಕೇಳಿ ನನಗೆ ಅಚ್ಚರಿಯಾಯಿತು. ಗುರು ದಕ್ಷಿಣೆ ಏನೆಂದು ನಾನು ಪರಿಶೀಲಿಸಿದಾಗ, ಗುರು ಎಂದರೆ ಧ್ವಜ. ಧ್ವಜದ ಹೆಸರಿನಲ್ಲಿ ದುಡ್ಡು ತೆಗೆದುಕೊಳ್ಳುತ್ತಾರೆ. ನಾಳೆ ದಿನ ನಾನೂ ನೀಲಿ ಧ್ವಜ ಹಾಕಿ, ಅದರ ಹೆಸರಿನಲ್ಲಿ ದುಡ್ಡು ತೆಗೆದುಕೊಳ್ಳಲು ಸಾಧ್ಯವೇ?’ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಜೆಡಿಎಸ್ಗಿಂತಲೂ ಕನಿಷ್ಠ:
‘ಆರ್ಎಸ್ಎಸ್ ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್ಗಿಂತಲೂ ಕನಿಷ್ಠವಾಗುತ್ತಿರುತ್ತಿತ್ತು. ವಿಪರ್ಯಾಸವೆಂದರೆ, ನಾವು ದೆವ್ವದ ನೆರಳಿನ ಜೊತೆ ಜಗಳವಾಡುತ್ತಿದ್ದೇವೆ. ಇಲ್ಲಿ ದೆವ್ವದ ನೆರಳು ಎಂದರೆ ಬಿಜೆಪಿ. ದೆವ್ವ ಎಂದರೆ ಆರ್ಎಸ್ಎಸ್. ನಾವು ಬಿಜೆಪಿಯನ್ನು ಬಿಟ್ಟು; ಆರ್ಸ್ಎಸ್ನೊಂದಿಗೆ ಜಗಳವಾಡಿದರೆ, ದೇಶ ತನ್ನಿಂದ ತಾನೇ ಸುಧಾರಣೆಯಾಗುತ್ತದೆ’ ಎಂದು ಪ್ರತಿಪಾದಿಸಿದರು.
‘ಬಿಜೆಪಿ ಮತ್ತು ಆರ್ಎಸ್ಎಸ್ ನವರು ಧರ್ಮ ಮತ್ತು ಜಾತಿಗಳ ನಡುವೆ ದ್ವೇಷ ಹಚ್ಚುತ್ತಾರೆ. ಅವರ ಮಕ್ಕಳು ವಿದೇಶ ಪ್ರವಾಸ ಮಾಡುತ್ತಾರೆ. ಕೈಗಾರಿಕೋದ್ಯಮಗಳು ಆಗುತ್ತಾರೆ. ಬಿಜೆಪಿ ನಾಯಕರಲ್ಲಿ ಯಾರ ಮಕ್ಕಳು ಗೋಶಾಲೆಗೆ ಹೋಗಿದ್ದಾರೆ? ಧರ್ಮ ರಕ್ಷಣೆಗೆ ಶಾಲು ಹಾಕಿಕೊಂಡು, ತ್ರಿಶೂಲ-ಕತ್ತಿ ಹಿಡಿದುಕೊಂಡು ಬೀದಿಗೆ ಇಳಿಯುತ್ತಾರೆ? ಕರಾವಳಿ ರಕ್ತ-ಕಣ್ಣೀರು ಪುಸ್ತಕ ನೋಡಿದರೆ, ಧರ್ಮ ರಕ್ಷಣೆಯಲ್ಲಿ ಯಾವ್ಯಾವ ಸಮಾಜದ ಜನ ಇದ್ದಾರೆ ಎಂಬುದು ತಿಳಿಯುತ್ತದೆ’ ಎಂದು ಹೇಳಿದರು.
‘ವಾಲ್ಮೀಕಿ ಬರೆದ ರಾಮಾಯಣವೇ ಬೇರೆ, ಈಗ ನಡೆಯುತ್ತಿರುವುದೇ ಬೇರೆ. ರಾಜಕಾರಣಿಗಳು, ಧಾರ್ಮಿಕ ಗುರುಗಳು ತಮಗೆ ಬೇಕಾದಂತೆ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಯಾವ ಧರ್ಮವೂ ಹಿಂಸೆ ಪ್ರಚೋದಿಸಲ್ಲ. ಪ್ರತಿ ಧರ್ಮವೂ ಪ್ರಜ್ಞೆ ಮತ್ತು ದಯೆ ಭೋದಿಸುತ್ತದೆ. ಬುದ್ಧ-ಬಸವಣ್ಣ ಹೇಳಿರುವುದೂ ಇದೆ. ಜಾತಿ ವ್ಯವಸ್ಥೆಯನ್ನು ನಾವು ಮಾಡಿಕೊಂಡಿದ್ದೇವೆ’ ಎಂದರು.
ಭಾಗವತ್ ಮದುವೆ ಆಗಿಲ್ಲ:
ಧರ್ಮ ಉಳಿಸಲು ಮೂರು ಮಕ್ಕಳನ್ನು ಹೆರಬೇಕು ಎನ್ನುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮದುವೆ ಆಗಿಲ್ಲ. ಆದರೂ, ಬೇರೆಯವರ ಮಕ್ಕಳನ್ನು ಎತ್ತಿಕಟ್ಟುವ ಮಾತು ಹೇಳುತ್ತಾರೆ. ಹೀಗೆ, ಬಿಜೆಪಿಯವರು ಹೊರಗೊಂದು, ಒಳಗೊಂದು ಮಾತುಗಳನ್ನು ನಿತ್ಯ ಹೇಳಿ ಬಡವರ ಮಕ್ಕಳನ್ನು ಬೀದಿಪಾಲು ಮಾಡುತ್ತಿದ್ದಾರೆ. ರಾಜಕಾರಣಿಗಳು ಮತ್ತು ಧರ್ಮಗಳು ಜನರಿಗೆ ಧರ್ಮದ ನಶೆ ತುಂಬುವುದನ್ನು ನಿಲ್ಲಿಸಬೇಕು. ಜನ ಜಾಗೃತರಾಗಬೇಕು. ಎಲ್ಲಿಯವರೆಗೆ ಜನ ಜಾಗೃತವಾಗುವುದಿಲ್ಲೋ; ಅಲ್ಲಿಯವರೆಗೆ ಈ ದಂಧೆ ನಡೆಯುತ್ತಲೇ ಇರುತ್ತದೆ’ ಎಂದರು.
ಕಾಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ನಟ ಕಿಶೋರ್, ಪ್ರಕಾಶಕಿ ಮಂಜುಳ ಹುಂಚದಕಟ್ಟೆ ಉಪಸ್ಥಿತರಿದ್ದರು.
ಪ್ರಿಯಾಂಕ್ ಹೇಳಿದ್ದೇನು?
- ಯಾವುದೋ ಕ್ಲಬ್ ನೋಂದಣಿ ಆದರೆ, ಆರೆಸ್ಸೆಸ್ ಏಕೆ ನೋಂದಣಿ ಆಗಬಾರದು?
- ಇವತ್ತಲ್ಲ, ನಾಳೆ ಆರೆಸ್ಸೆಸ್ ನೋಂದಣಿ ಆಗುತ್ತೆ. ಆ ಕೆಲಸ ನಾನು ಮಾಡಿಸುತ್ತೇನೆ
- ಅಮೆರಿಕ, ಇಂಗ್ಲೆಂಡಿಂದ ಆರ್ಎಸ್ಎಸ್ಗೆ ದುಡ್ಡು. ಇದರ ಹಿಂದೆ ಮನಿ ಲಾಂಡರಿಂಗ್
- ಆರೆಸ್ಸೆಸ್ ಇಲ್ಲದಿದ್ದರೆ ಜೆಡಿಎಸ್ಗಿಂತ ಬಿಜೆಪಿ ಕಡೆಯಾಗುತ್ತಿತ್ತು, ಬೆಲೆ ಇರುತ್ತಿರಲಿಲ್ಲ
- ಧರ್ಮ ಉಳಿಸಲು 3 ಮಕ್ಕಳ ಹೆರಬೇಕು ಎನ್ನುವ ಮೋಹನ್ ಭಾಗವತ್ ಮದುವೆ ಆಗಿಲ್ಲ
