ಗುರು, ಲಿಂಗ, ಜಂಗಮಕ್ಕಿಂತ ಕಾಯಕ ಬಹಳ ವೈಶಿಷ್ಟ: ಡಾ. ತೋಂಟದ ಸಿದ್ಧರಾಮ ಶ್ರೀಗಳು

KannadaprabhaNewsNetwork |  
Published : Jun 23, 2024, 02:05 AM IST
ಕಾರ್ಯಕ್ರಮದಲ್ಲಿ ಮಹೇಶಗೌಡ ಪೋಲಿಸಪಾಟೀಲ, ಡಾ. ಶೇಖರ ಸಜ್ಜನರ, ಸಂಗಮೇಶ ದುಂದೂರು ಹಾಗೂ ನಿರಂಜನ ವಿಶ್ವನಾಥ ಬುಳ್ಳಾ ಅವರನ್ನು ಪೂಜ್ಯರು ಸನ್ಮಾನಿಸಿದರು. | Kannada Prabha

ಸಾರಾಂಶ

ಸತ್ಯ, ಶುದ್ಧ, ಪ್ರಾಮಾಣಿಕ ಕಾಯಕದಿಂದ ಗಳಿಸಬೇಕು. ಕಾಯಕಕ್ಕೆ ತಕ್ಕಷ್ಟೇ ಪ್ರತಿಫಲ ಬಯಸಬೇಕು. ಕಾಯಕದಲ್ಲಿ ಆಸೆ ಇರಬಾರದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ: ಬಸವಾದಿ ಶಿವಶರಣರು ಕಾಯಕಕ್ಕೆ ಕೊಟ್ಟಿರುವ ಸ್ಥಾನಮಾನ ಬಹಳ ದೊಡ್ಡದು. ಗುರು, ಲಿಂಗ, ಜಂಗಮಕ್ಕಿಂತಲೂ ಕಾಯಕ ಬಹಳ ವೈಶಿಷ್ಟ್ಯಪೂರ್ಣವಾದುದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಅವರು ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2698ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾಯಕದಿಂದ ಒಬ್ಬ ವ್ಯಕ್ತಿ ಭಗವಂತನಿಗೆ ಪ್ರಿಯನಾಗುತ್ತಾನೆ, ಭಕ್ತನಾಗುತ್ತಾನೆ ಎಂದು 12ನೇ ಶತಮಾನದಲ್ಲಿ ಶರಣರು ಹೇಳಿದ್ದಾರೆ. ಸತ್ಯ, ಶುದ್ಧ, ಪ್ರಾಮಾಣಿಕ ಕಾಯಕದಿಂದ ಗಳಿಸಬೇಕು. ಕಾಯಕಕ್ಕೆ ತಕ್ಕಷ್ಟೇ ಪ್ರತಿಫಲ ಬಯಸಬೇಕು. ಕಾಯಕದಲ್ಲಿ ಆಸೆ ಇರಬಾರದು. ಆಸೆಯೆಂಬುದು ಭವದ ಬೀಜ. ಆಸೆಯಿಂದ ಕಾಯಕ ಮಾಡಿದರೆ ಮುಕ್ತಿ, ಲಿಂಗಾಂಗ ಸಾಮರಸ್ಯ, ಮೋಕ್ಷ ಲಭ್ಯವಾಗುವುದಿಲ್ಲ ಎಂದು ಶರಣರು ತಿಳಿಸಿದ್ದಾರೆ ಎಂದರು.

ಕಾಯಕ ಮತ್ತು ದಾಸೋಹ ಕುರಿತು ಕಡೂರು ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಮಾತನಾಡಿ, ವಚನಗಳು ಶರಣರ ಅನುಭವದ ನುಡಿಗಳು. ಶರಣರ ದೃಷ್ಟಿಕೋನದಲ್ಲಿ ಜಂಗಮ ಎಂದರೆ ಅನಂತವಾದುದು, ಚಲನಶೀಲವಾದುದು, ಜೀವ ಜಗತ್ತು. ಸತ್ಯ, ಶುದ್ಧ, ಕಾಯಕ ಕೈಗೊಂಡ ಸಮಯದಲ್ಲಿ ಆ ಕಾಯಕ ಕೈಲಾಸವಾಗುವುದು. ಕಾಯಕದಲ್ಲಿ ನಿರತರಾದಾಗ ಗುರು, ಲಿಂಗ, ಜಂಗಮವನ್ನಾದರೂ ಮರೆಯಬೇಕು ಎಂದು ಶರಣರು ಹೇಳಿದ್ದಾರೆ ಎಂದು ಹೇಳಿದರು.

ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಸುಪ್ರಿಯಾ ಎನ್. ನಾಗನೂರ, ವಚನ ಚಿಂತನೆಯನ್ನು ಅಮೃತ ವಿ. ಅಂಗಡಿ ನೆರವೇರಿಸಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಅಕ್ಕಿ ಕೊಟ್ರಪ್ಪನವರು ಮತ್ತು ಅಂದಾನಪ್ಪ ಶಾಂತಪ್ಪ ಚವಡಿ ಪರಿವಾರದವರನ್ನು ಶ್ರೀಗಳು ಸನ್ಮಾನಿಸಿದರು.

ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೋಗಲ್, ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌