ಕನ್ನಡಪ್ರಭ ವಾರ್ತೆ ಆಳಂದಏಕಾಏಕಿ ತೊಗರಿ ಫಸಲು ಆಳಂದದ ಸುತ್ತಮುತ್ತ ಒಣಗಲು ಶುರು ಮಾಡಿದ್ದರಿಂದ ಬಂಪರ್ ತೊಗರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳವಳ ಉಂಟಾಗಿದೆ. ತಾಲೂಕಿನ ಹಲವಡೆ ತೊಗರಿ ಅಪಾರ ಪ್ರಮಾಣದಲ್ಲಿ ಒಣಗಿದ್ದು, ಕೆಲವಡೆ ಇನ್ನೂ ಒಣಗಲಾರಂಭಿಸಿದೆ. ಈ ಕುರಿತು ಕೃಷಿ ಇಲಾಖೆ ಸರ್ವೆ ಮೂಲಕ ಅಂಕಿಅಂಶಗಳ ಮಾಹಿತಿ ಕಲೆಹಾಕಲು ಮುಂದಾಗಿದೆ.
ತೊಗರಿ ಹಾನಿ ಅನುಭವಿಸುತ್ತಿರುವ ರೈತರ ಕಷ್ಟವನ್ನು ಮನಗಂಡು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ್ ಅವರು ಕಡಗಂಚಿ ವಲಯದ ಹೊಲಗಳಿಗೆ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು. ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 90174 ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ಈಗಗಲೇ ನರೋಣಾ, ನಿಂಬರಗಾ, ಅಳಂದ ವಲಯದಲ್ಲಿ ತೊಗರಿ ಒಣಗಿದ ಬಗ್ಗೆ ಹೆಚ್ಚಿನ ಪ್ರಮಾಣ ಕಂಡುಬಂದರೆ, ಖಜೂರಿ ಮತ್ತು ಮಾದನಹಿಪ್ಪರಗಾ ವಲಯದಲ್ಲಿ ಅಲ್ಲಲ್ಲಿನ ರೈತರ ತೊಗರಿ ಒಣಗಿ ನಷ್ಟವಾಗಿದೆ. ಈ ಕುರಿತು ಸರ್ವೆ ನಡೆಸಲು ಕೃಷಿ ಇಲಾಖೆ ಮುಂದಾಗಬೇಕಿದೆ.
ಬೆಳೆ ಒಣಗಲು ಕಾರಣ* ಇಲಾಖೆ ಶಿಫಾರಸ್ಸು ಮಾಡಿದ ಜಿಆರ್ಕೊ 811, ತಳಿ, ಜಿಆರ್ಜಿ 152 ಈ ತಳಿ ಸಿಫಾರಸ್ಸು ಬಿಟ್ಟು ಕೆಲವು ರೈತರು ಮಹಾರಾಷ್ಟ್ರದಿಂದ ಅಥವಾ ಸ್ಥಳೀಯ ತಳಿಗಳನ್ನು ಬಿತ್ತನೆ ಕೈಗೊಂಡಿದ್ದರೆ ಒಣಗಲು ಕಾರಣವಾಗಿರಬವುದು.* ಪ್ರತಿವರ್ಷ ತೊಗರಿ ಬೆಳೆದ ಹೊಲದಲ್ಲಿ ತೊಗರಿ ಬೆಳೆದರೆ ರೋಗ ಬರುವುದು ಸಾಮಾನ್ಯ.
ತೊಗರಿ ಒಣಗಿ ನೆಟೆಹಾಯದಂತೆ ಈ ರೋಗ ಕಡಿಮೆ ಮಾಡಲು ತೊಗರಿ ಬದಲಾಗಿ ಜೋಳ, ಸಜ್ಜೆ ಮೆಕ್ಕೆಜೋಳ ಬೆಳೆಯಬೇಕು. ಭೂಮಿಯಲ್ಲಿ ತಿಪ್ಪೆಗೊಬ್ಬರ ಅಂಶ ಅಥವಾ ಸಾವಯವ ಅಂಶ ಕಡಿಮೆ ಇದ್ದಲ್ಲಿ ಈ ರೋಗವು ಉಲ್ಬಣಗೊಳ್ಳುತ್ತದೆ.
ಈ ವರ್ಷ ತೊಗರಿ ನೆಟೆ ಬಿದ್ದ ಹೊಲದಲ್ಲಿ ಮುಂದಿನ ವರ್ಷ ಯಾವ ಕಾರಣಕ್ಕೂ ತೊಗರಿ ಬಿತ್ತನೆ ಕೈಗೊಳ್ಳಬಾರದು. ಒಂದು ವೇಳೆ ತೊಗರಿ ಬಿತ್ತುವುದೇ ಆಗಿದ್ದರೆ ಕಡ್ಡಾಯವಾಗಿ ಬಿತ್ತನೆ ನಂತರ ಎಕರೆ 4 ಕಿ.ಲೋ ಗ್ರಾಮ ಟ್ರೈಕೋಡರ್ಮಾ ಒಂದು ಮಣ್ಣು ಬುಟ್ಟಿಯಲ್ಲಿ ಮಿಶ್ರಣಮಾಡಿ ತೊಗರಿ ಬಿತ್ತಿದ ಸಾಲಿನಲ್ಲಿ ಹಾಕಬೇಕು. ಪಿ.ಎಂ. ಮಲ್ಲಿಕಾರ್ಜುನ ಸಹಾಯಕ ಕೃಷಿ ನಿರ್ದೇಶಕರುಆಳಂದದ ಕಡಗಂಚಿ ವ್ಯಾಪ್ತಿಯಲ್ಲಿನ ಹೊಲಗಳಲ್ಲಿ ಒಣಗಿದ ತೊಗರಿಯನ್ನು ಶಾಸಕ ಬಿ.ಆರ್. ಪಾಟೀಲ ಭೇಟಿ ನೀಡಿ ವೀಕ್ಷಿಸಿದರು. ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮತ್ತು ರೈತರಿದ್ದರು.