ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ದೊಡ್ಡ ಸೂಟ್ಕೇಸ್ವೊಂದು ಪತ್ತೆಯಾಗಿದೆ. ಸುಮಾರು ಹೊತ್ತಾದರೂ ಸೂಟ್ ಕೇಸ್ನ ವಾರಸುದಾರರು ಪತ್ತೆಯಾಗಲಿಲ್ಲ. ಆಗ ನಿಲ್ದಾಣದ ಭದ್ರತಾ ಸಿಬ್ಬಂದಿ ಅದರ ಮೇಲೆ ನಿಗಾ ಇಟ್ಟು, ಮೇಲಾಧಿಕಾರಿಗಳ ಗಮನಕ್ಕೆ ತಂದರು.
ಅನಾಥವಾಗಿ ಬಿದ್ದಿದ್ದ ಸೂಟ್ಕೇಸ್ ಬಳಿ ಯಾರೂ ಸುಳಿಯದಂತೆ ಮುನ್ನೆಚ್ಚರಿಕೆ ವಹಿಸಿದ ನಿಲ್ದಾಣದ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿದರಲ್ಲದೇ ಪೊಲೀಸ್ ಇಲಾಖೆ ಶ್ವಾನದಳನ್ನು ಕರೆಸಲಾಯಿತು. ಸಾಕಷ್ಟು ಎಚ್ಚರಿಕೆಯಿಂದ ಶ್ವಾನದಳ ಹಾಗೂ ಪೊಲೀಸ್ ಸಿಬ್ಬಂದಿ ಭಯ, ಆತಂಕದಿಂದಲೇ ಸೂಟ್ ಕೇಸ್ ಬಳಿ ಪರಿಶೀಲಿಸಿದಾಗ ಅದು ಯಾರೋ ಲಾಕ್ ಮಾಡಿ, ಬಿಸಾಕಿದ್ದ ಕಪ್ಪು ಬಣ್ಣದ ಸೂಟ್ ಕೇಸ್ ಆಗಿದ್ದು, ಅದರಲ್ಲಿ ಯಾವುದೇ ಅಪಾಯಕಾರಿ ವಸ್ತು ಇರಲಿಲ್ಲವೆಂಬುದು ಸ್ಪಷ್ಟವಾಯಿತು. ಆ ನಂತರವೇ ಅಧಿಕಾರಿ, ಸಿಬ್ಬಂದಿ, ಪ್ರಯಾಣಿಕರು ನಿಟ್ಟಿಸಿರು ಬಿಟ್ಟರು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯಾರೋ ಹಳೆ ಸೂಟ್ ಕೇಸ್ ಅಂತಲೋ ಅಥವಾ ಆಕಸ್ಮಿಕವೋ ಸೂಟ್ ಕೇಸ್ನ್ನು ಬೀಳಿಸಿಕೊಂಡು ಹೋಗಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು.