ಸೂಪರ್‌ ಮಾರುಕಟ್ಟೆಗೆ ಬೇಕಿದೆ ಅಭಿವೃದ್ಧಿ!

KannadaprabhaNewsNetwork |  
Published : Jul 11, 2026, 12:45 AM IST
ಸೂಪರ್ ಮಾರುಕಟ್ಟೆ ಅಭಿವೃದ್ಧಿ ಕುರಿತು ಬುಧವಾರ ಆಯೋಜಿಸಿದ್ದ ಚಿಂತನ ಸಭೆಯಲ್ಲಿ ಬಿ.ಡಿ. ಹಿರೇಮಠ ಮಾತನಾಡಿದರು. | Kannada Prabha

ಸಾರಾಂಶ

ಸೂಪರ್ ಮಾರ್ಕೆಟ್‌ನಲ್ಲಿ ವ್ಯಾಪಾರಿಗಳು, ಗ್ರಾಹಕರು, ಪಾರ್ಕಿಂಗ್ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನೊಳಗೊಂಡ ಬಹುದ್ದೇಶಿತ ಕಟ್ಟಡ ನಿರ್ಮಿಸಿ ಧಾರವಾಡ ಜನರಿಗೆ ಅನುಕೂಲತೆ ಕಲ್ಪಿಸಬೇಕಿದೆ.

ಧಾರವಾಡ:

ಹಲವು ದಶಕಗಳಿಂದಲೂ ಬಾಕಿ ಉಳಿದಿರುವ ಸೂಪರ್‌ ಮಾರುಕಟ್ಟೆ ಅಭಿವೃದ್ಧಿ ದೃಷ್ಟಿಯಿಂದ ಬಹುಮಹಡಿ ಕಟ್ಟಡ ನಿರ್ಮಿಸುವ ಯೋಜನೆ ಬದಲು ಬಹುದ್ದೇಶಿತ ಕಟ್ಟಡ ನಿರ್ಮಿಸುವುದು ಸೂಕ್ತ ಎಂದು ಧಾರವಾಡ ವಾಣಿಜ್ಯೋದ್ಯಮ ಸಂಘದ ಕಾರ್ಯದರ್ಶಿ ರವೀಂದ್ರ ಆಕಳವಾಡಿ ಪ್ರತಿಪಾದಿಸಿದರು.

ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ವೇದಿಕೆ ಸೂಪರ್ ಮಾರುಕಟ್ಟೆ ಅಭಿವೃದ್ಧಿ ಕುರಿತು ಆಯೋಜಿಸಿದ್ದ ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ಸೂಪರ್ ಮಾರ್ಕೆಟ್‌ನಲ್ಲಿ ವ್ಯಾಪಾರಿಗಳು, ಗ್ರಾಹಕರು, ಪಾರ್ಕಿಂಗ್ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನೊಳಗೊಂಡ ಬಹುದ್ದೇಶಿತ ಕಟ್ಟಡ ನಿರ್ಮಿಸಿ ಧಾರವಾಡ ಜನರಿಗೆ ಅನುಕೂಲತೆ ಕಲ್ಪಿಸಬೇಕಿದೆ ಎಂದರು.

ಹಾಲಗೇರೆಯಲ್ಲಿರುವ 5.35 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ. ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿ ನಿರ್ಮಿಸಿದ ಕಟ್ಟಡ ವಿಫಲಗೊಂಡಿದ್ದು, ಇದು ವ್ಯಾಪಾರಕ್ಕೆ ಪೂರಕವಾಗಿಲ್ಲ ಎಂದು ವ್ಯಾಪಾರಸ್ಥರು ಇಲ್ಲಿಗೆ ಬಂದಿಲ್ಲ. ಆದ್ದರಿಂದ ಎಲ್ಲ ರೀತಿಯಲ್ಲಿ ಚಿಂತನೆ ಮಾಡಿ ಮಾರುಕಟ್ಟೆ ರೂಪಿಸಬೇಕಿದೆ. ಇದಕ್ಕಾಗಿ ಧಾರವಾಡದ ಜನರು ಪಾಲಿಕೆ ಸದಸ್ಯರ ಸಹಕಾರದಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಅಧ್ಯಕ್ಷ ಮನೋಜ ಪಾಟೀಲ, ನಮ್ಮ ಸಂಘಟನೆ ವತಿಯಿಂದ ಸೂಪರ್ ಮಾರುಕಟ್ಟೆ ಅಭಿವೃದ್ಧಿಗಾಗಿ ಹೋರಾಟ ನಡೆಯಲಿದ್ದು, ಇದಕ್ಕೆ ಜನರ ಸಹಕಾರ ಬೇಕು. ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ನಮ್ಮೊಂದಿಗೆ ಕೈಜೋಡಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಹೋರಾಟಕ್ಕೆ ಫಲ ಸಿಗಲು ಸಾಧ್ಯ ಎಂದರು.

ಹೋರಾಟಗಾರ ಬಿ.ಡಿ. ಹಿರೇಮಠ ಮಾತನಾಡಿ, ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ನಡೆದಂತೆ ಸೂಪರ್ ಮಾರುಕಟ್ಟೆ ಅಭಿವೃದ್ಧಿಗಾಗಿಯೂ ಹೋರಾಟ ಮಾಡುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ಪಕ್ಷಾತೀತ ಸಭೆ ನಡೆದು ಜನಪ್ರತಿನಿಧಿಗಳು ಬೆಂಬಲ ನೀಡಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸೂಪರ್ ಮಾರುಕಟ್ಟೆ ಅಭಿವೃದ್ಧಿ ಹೋರಾಟಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ಮಾಜಿ ಮೇಯರ್‌ ದಾನಪ್ಪ ಕಬ್ಬೇರ, ಮಾಜಿ ಪಾಲಿಕೆ ಸದಸ್ಯ ಸಿ.ಎಸ್. ಪಾಟೀಲ, ಪಾಲಿಕೆ ಸದಸ್ಯ ರಾಜಶೇಖರ ಕಮತಿ ಮಾತನಾಡಿದರು. ಸಂವಾದದಲ್ಲಿ ಪಾಲಿಕೆ ಮಾಜಿ ಸದಸ್ಯ ಹೇಮರಾಜ್ ಭಂಡಾರಿ, ವೀರೇಶ ಕೆಲಗೇರಿ, ದೀಪಕ್ ಆಕಳವಾಡಿ, ಮಹಾಂತೇಶ ಪಟ್ಟಣಶೆಟ್ಟಿ, ರಾಜೇಶ ಪಾಲ್ಗೊಂಡರು. ಪ್ರೊ. ಷಡಕ್ಷರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಠರಾವುಗಳು

ಹಾಲಗೇರಿ ಸೂಪರ್ ಮಾರುಕಟ್ಟೆ ಸರ್ವಾಂಗೀಣ ಅಭಿವೃದ್ಧಿ

ಒಂದೇ ಮಾರುಕಟ್ಟೆ ಬದಲು ವಿವಿಧೆಡೆ ಸಣ್ಣ ಮಾರುಕಟ್ಟೆಗಳ ಅಭಿವೃದ್ಧಿ

ಪಾಲಿಕೆ ಆಯುಕ್ತರು ಎರಡು ದಿನ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಧಾರವಾಡದ ಕಚೇರಿಯಲ್ಲಿ ಕಡ್ಡಾಯವಾಗಿರಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕಾಗಿ ಬೃಹತ್ ಪ್ರತಿಭಟನೆ