ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ತುಂಗಾ ಹಾಗೂ ಭದ್ರಾ ನದಿಗಳ ಮೇಲ್ಭಾಗದ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಪರಿಣಾಮ ಮಧ್ಯ ಕರ್ನಾಟಕದ ಜೀವನದಿಯಾದ ತುಂಗಭದ್ರೆ ಮೈದುಂಬಿ ಹರಿಯುತ್ತಿದೆ. ಭದ್ರಾ ಡ್ಯಾಂನಿಂದಲೂ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಿರುವ ಕಾರಣ ಹರಿಹರ ನಗರದಲ್ಲಿ ತುಂಗಭದ್ರಾ ನದಿ ಭೋರ್ಗರೆದು ಹರಿಯುವ ಮೂಲಕ ನೋಡುಗರ ಕಣ್ಮನ ಸೇಳೆಯುತ್ತಿದೆ.
- ತುಂಗಭದ್ರಾರತಿ ಮಂಟಪ ಮೆಟ್ಟಿಲುಗಳ ಆವರಿಸಿದ ನದಿ ನೀರು
- - -
ಕನ್ನಡಪ್ರಭ ವಾರ್ತೆ ಹರಿಹರ
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ತುಂಗಾ ಹಾಗೂ ಭದ್ರಾ ನದಿಗಳ ಮೇಲ್ಭಾಗದ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಪರಿಣಾಮ ಮಧ್ಯ ಕರ್ನಾಟಕದ ಜೀವನದಿಯಾದ ತುಂಗಭದ್ರೆ ಮೈದುಂಬಿ ಹರಿಯುತ್ತಿದೆ. ಭದ್ರಾ ಡ್ಯಾಂನಿಂದಲೂ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಿರುವ ಕಾರಣ ಹರಿಹರ ನಗರದಲ್ಲಿ ತುಂಗಭದ್ರಾ ನದಿ ಭೋರ್ಗರೆದು ಹರಿಯುವ ಮೂಲಕ ನೋಡುಗರ ಕಣ್ಮನ ಸೇಳೆಯುತ್ತಿದೆ.
ಈಗಾಗಲೇ ಹರಿಹರದ ತುಂಗಭದ್ರಾ ನದಿ ಮಧ್ಯದ ಕಲ್ಲಿನ ಮಂಟಪ, ಅಕ್ಕಪಕ್ಕದ ಹೊಲಗಳು ಜಲಾವೃತವಾಗಿವೆ. ರಾಘವೇಂದ್ರ ಮಠದ ಬಳಿಯ ತುಂಗಭದ್ರಾರತಿ ಮಂಟಪ ಬಳಿ ಬಹುತೇಕ ಮೆಟ್ಟಿಲುಗಳು ನೀರಿನಲ್ಲಿ ಮರೆಯಾಗಿವೆ. ಇನ್ನು 4 ಮೆಟ್ಟಿಲುಗಳು ಆವರಿಸಿದರೆ ರಾಘವೇಂದ್ರ ಮಠದ ಗೋಡೆಗೂ ನದಿ ನೀರು ಅಪ್ಪಳಿಸಲಿದೆ.
ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಉಕ್ಕಡಗಾತ್ರಿ ಕ್ಷೇತ್ರದ ಸ್ನಾನಘಟ್ಟ ಮುಳುಗಡೆಯಾಗಿದೆ. ಫತೇಪುರ- ಉಕ್ಕಡಗಾತ್ರಿ ರಸ್ತೆ ಮುಳುಗಡೆ ಭೀತಿ ಇದೆ. ಗಂಗಾನಗರ ಹಾಗೂ ಕೈಲಾಸ ನಗರದ ನಿವಾಸಿಗಳಿಗೆ ನಿರಂತರ ಮಳೆ ಹಿನ್ನೆಲೆ ನೆರೆ ಆತಂಕ ತಪ್ಪಿಲ್ಲ.
ನದಿ ವೀಕ್ಷಣೆ-ನಿಷೇಧಾಜ್ಞೆ:
ಹರಿಹರ ನಗರದ ಬಳಿ ತುಂಗಭದ್ರಾ ನದಿ ಸೊಬಗನ್ನು ಸವಿಯಲು ಸಾರ್ವಜನಿಕರು ನದಿಯ ಸೇತುವೆ, ರಾಘವೇಂದ್ರ ಮಠದ ಹಿಂಭಾಗದ ಆರತಿ ಮಂಟಪದ ಬಳಿ ಆಗಮಿಸುತ್ತಿದ್ದಾರೆ. ನಗರ ಸೇರಿದಂತೆ ತಾಲೂಕಿನಲ್ಲಿ ಹರಿಯುವ ನದಿ ಪಾತ್ರದಲ್ಲಿ ಈಜಾಡುವುದು, ಸ್ನಾನ ಮಾಡುವುದು, ಬಟ್ಟೆ ಒಗೆಯುವುದು, ವಾಹನ ಹಾಗೂ ದನಕರುಗಳನ್ನು ತೊಳೆಯುವುದು, ವಿಹರಿಸುವುದು, ನದಿ ಪಾತ್ರದ ಜಮೀನುಗಳಿಗೆ ರೈತರು ತೆರಳದಂತೆ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಎಚ್ಚರಿಕೆ ನೀಡಿ, ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.