ಕನ್ನಡಪ್ರಭ ವಾರ್ತೆ ತಿಪಟೂರು
ನಮ್ಮ ಹಿರಿಯರು ಪ್ರಕೃತಿಯನ್ನು ದೇವರೆಂದು ಪೂಜಿಸಿ ಉಳಿಸಿ ಬೆಳಸಿದರು. ಆದರೆ ಇಂದು ನಮ್ಮ ಅವಶ್ಯಕತೆಗಳು ಮಿತಿ ಮೀರಿ ಪರಸರ ನಾಶವಾಗುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಆಡಳಿತ ಸಹಾಯಕ ಡಿ.ಅಶೋಕ್ ಕಳವಳ ವ್ಯಕ್ತಪಡಿಸಿದರು.ನಗರದ ನಿವೃತ್ತ ನೌಕರರ ಸಂಘದ ವತಿಯಿಂದ ಮಾಸಿಕ ಸಭೆಯ ಅಂಗವಾಗಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ಭೂಮಿ, ಕಾಡು, ಕೆರೆ ಮುಂತಾದವುಗಳನ್ನು ನಾಶ ಮಾಡಿ ನಗರ, ಕಾರ್ಖಾನೆಯಂತಹ ಕಾಂಕ್ರಿಟ್ ಕಾಡು ನಿರ್ಮಿಸುತ್ತ ಪ್ರಕೃತಿ ವಿಕೋಪಗಳಿಗೆ ತಾನೇ ಕಾರಣನಾಗುತ್ತಿದ್ದಾನೆ. ಈ ವಿನಾಶದಿಂದ ಹೊರಬರದಿದ್ದಲ್ಲಿ ಮುಂದೆ ಮಾನವ ಭೂಮಿಯ ಮೇಲೆ ಜೀವಿಸಲು ದುಡ್ಡುಕೊಟ್ಟು ಆಮ್ಲಜನಕ ಸೇವಿಸುವ ಕಾಲ ದೂರವಿಲ್ಲ. ಜೀವ ವಿರೋಧಿಯಾದ ಪ್ಲಾಸ್ಟಿಕ್ ಬಳಕೆಯನ್ನು ೨೦೪೦ನೇ ಇಸವಿಯೊಳಗೆ ಭೂಮಿಯ ಮೇಲೆ ಸಂಪೂರ್ಣವಾಗಿ ನಿಲ್ಲಿಸಬೇಕಾಗಿದ್ದು ಈ ಹಿನ್ನಲೆಯಲ್ಲಿ ೨೦೨೫ನೇ ವರ್ಷವನ್ನು ಪ್ಲಾಷ್ಟಿಕ್ ಮುಕ್ತ ವರ್ಷ ಎಂದು ಆಚರಿಸಲಾಗುತ್ತಿದ್ದು ಆದ್ದರಿಂದ ಯುವಪೀಳಿಗೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು. ಪ್ರಧಾನ ಕಾರ್ಯದರ್ಶಿ ಪಿ.ಆರ್.ಗುರುಸ್ವಾಮಿ ಜಿಲ್ಲೆಯಲ್ಲಿ ನಮ್ಮ ಸಂಘವು ಅನೇಕ ಸಂಘ ಸಂಸ್ಥೆಗಳ ಜೊತೆ ಸೇರಿ ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಒಟ್ಟು ೧೫೦೦ ಸದಸ್ಯರನ್ನೊಳಗೊಂಡ ಸಂಘವಾಗಿ ಬೆಳದಿದೆ. ಹೊಸದಾಗಿ ಸದಸ್ಯರಾದವರು ಸಂಘದ ಚಟುವಟಿಕೆಗಳ ಗಮನಹರಿಸುವುದರ ಮೂಲಕ ಮುಂದೆ ಸಂಘವನ್ನ ಬಲಪಡಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ ಮಾತನಾಡಿ ಸಂಘದ ಚಟುವಟಿಕೆಗಳು ಹೆಚ್ಚುತ್ತಿದ್ದು ನಗರದ ವಿವಿಧ ಸಂಘಗಳ ಜೊತೆ ನಿವೃತ್ತ ನೌಕರರ ಸಂಘವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಸಾರ್ವಜನಿಕವಾಗಿ ಗಮನ ಸೆಳೆಯುತ್ತಿದ್ದು ಮಾಸಿಕ ಸಭೆ ನಡೆಸಲು ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆ ಇದ್ದು ಈ ಬಗ್ಗೆ ಗಮನಹರಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಕವಿ ಎಚ್.ಎಸ್.ವೆಂಕಟೇಶಮೂರ್ತಿರವರಿಗೆ ಗೀತ ನಮನ ಸಲ್ಲಿಸಿ ಕವಿಗಳ ಕವನ ವಾಚನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಸದ್ಯರುಗಳಾದ ಎಚ್.ಎಸ್ಮಂಜಪ್ಪ, ಕಾತ್ಯಾಯಿನಿ, ನಂ.ಶಿವಗಂಗಪ್ಪ, ಶಿವಾನಂದ್, ಹನುಮಪ್ಪ, ನರಸಿಂಹಮೂರ್ತಿ, ಡಿ.ಎಸ್.ಮರುಳಪ್ಪ, ಸಿ.ಕುಮಾರ್, ಸ್ವರ್ಣಗೌರಿ, ಮಹದೇವಯ್ಯ, ಟಿ.ಎ.ಗಂಗಾಧರ್, ಎಂ.ಆರ್ ಸೋಮಶೇಖರ್, ನರಸಿಂಹಮೂರ್ತಿ, ಕಲಾವತಿ, ದಾಸೋಹಿಗಳಾದ ಶಂಕರಲಿಂಗಪ್ಪ, ಸತ್ಯನಾರಾಯಣ ಸೇರಿದಂತೆ ಅಕ್ಕನ ಬಳಗ, ಸಂಸ್ಕಾರ ಭಾರತಿ ಸದಸ್ಯರು ಭಾಗವಹಿಸಿದ್ದರು. ನಂತರ ವಿಶ್ವ ಪರಿಸರದ ದಿನದ ಅಂಗವಾಗಿ ಸಂಘದ ಆವರಣದಲ್ಲಿ ಹಣ್ಣಿನ ಗಿಡ ನೆಡಲಾಯಿತು.