ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ಜೀವನಕ್ಕೆ ಕಾಲಿಟ್ಟ ವಧು-ವರರನ್ನು ಹರಸಿ ಆಶೀರ್ವಚನ ನೀಡಿದರು. ಸತಿ-ಪತಿಗಳೆಂದರೆ ಬದುಕಿನ ಬಂಡಿಯ ಎರಡು ಚಕ್ರಗಳಿದ್ದಂತೆ. ಒಂದು ಚಕ್ರ ಉರುಳದಿದ್ದರೂ ಬದುಕು ನಿಂತ ನೀರಾಗಿ ಬಿಡುತ್ತದೆ. ಎರಡೂ ಚಕ್ರಗಳು ಸಮನಾಗಿ ಸಾಗಿದರೆ ಬದುಕಿನ ದಡವನ್ನು ಸುಲಭವಾಗಿ ತಲುಪಬಹುದು ಎಂದು ತಿಳಿಸಿದರು.
ದೇವರು ಕರ್ಮ ಹಾಗೂ ಪೂರ್ವ ಫಲಗಳನ್ನು ಹೊಂದಿಸಿ ಒಂದು ಗಂಡಿಗೆ ಮತ್ತೊಂದು ಹೆಣ್ಣನ್ನು ಕೂಡಿಸುವ ಮೂಲಕ ಸ್ವರ್ಗದಲ್ಲಿಯೇ ಮದುವೆ ನಿಶ್ಚಯ ಮಾಡಿರುತ್ತಾನೆ. ಇಲ್ಲಿ ಗುರು ಹಿರಿಯರ ಆಶೀರ್ವಾದ ಹಾಗೂ ದೇವತೆಗಳ ಸಾಕ್ಷಿಯೊಂದಿಗೆ ನವಜೀವನ ಪ್ರಾರಂಭವಾಗಲಿದೆ ಎಂದರು. ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಕಾರ್ಯಯೋನ್ಮುಖರಾಗಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳೆ ಎಂದಿಗೂ ದುರ್ಬಲಳಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದರು.ಆಧುನಿಕತೆ ಮುಂದುವರಿದಿದ್ದರೂ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಸೇರಿದಂತೆ ವಿವಿಧ ಅನಿಷ್ಟ ಪದ್ಧತಿಗಳು ಜೀವಂತವಾಗಿದ್ದು ಸಮಾಜದಲ್ಲಿ ಪಿಡುಗಾಗಿ ಪರಿಣಮಿಸುತ್ತಿವೆ. ಈ ಎಲ್ಲವನ್ನು ನಿರ್ಮೂಲನಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಶ್ರೀ ಕ್ಷೇತ್ರದಲ್ಲಿ ಜರುಗಿದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ೨೦ ಜೋಡಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಾನಿಗಳಾದ ಬೆಂಗಳೂರಿನ ಉದ್ಯಮಿ ಪ್ರದೀಪಾ ವೆಂಕಟೇಶ ಪ್ರಸಾದ್ ವಧುವರರಿಗೆ ವಸ್ತ್ರಗಳು, ಮಾಂಗಲ್ಯ, ಹೂವಿನ ಹಾರಗಳು, ಬಾಸಿಂಗ-ಪೇಟ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದ್ದರು.