ಉದ್ಯೋಗಾವಕಾಶಕ್ಕೆ ನಿರುದ್ಯೋಗಿಗಳ ಧಾವಂತ

KannadaprabhaNewsNetwork |  
Published : Feb 02, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ  ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ಯುವಕರ ನಿರುದ್ಯೋಗ ನಿವಾರಣೆ ಸಂಬಂದ ಭಾನುವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ನಿರೀಕ್ಷೆಗೂ ಮೀರಿ ಯಶ ಕಂಡಿತು. 6200 ಮಂದಿ ನಿರುದ್ಯೋಗಿಗಳ ಹೆಸರು ನೋಂದಾಯಿಸಿ ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನ ಧಾವಂತ ತೋರಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಶಿಖರ ಏರಬೇಕಾದರೆ ಮೊದಲ ಹೆಜ್ಜೆ ಅತ್ಯಗತ್ಯ. ಹಾಗೆಯೇ ಉದ್ಯೋಗದ ವಿಷಯದಲ್ಲೂ ಯುವಕರು ಹಿಂಜರಿಯದೆ ಮೊದಲು ಸಿಕ್ಕ ಅವಕಾಶವನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.

ಮೇಳದಲ್ಲಿ ಉದ್ಯೋಗ ಸಿಕ್ಕ ಆರಂಭದಲ್ಲಿ ಸಂಬಳ ಕಡಿಮೆ ಇರಬಹುದು ಅಥವಾ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರಬಹುದು. ಆದರೆ ಯುವಕರು ಹೊಂದಿಕೊಳ್ಳಬೇಕು. ಖಾಸಗಿ ಕಂಪನಿಗಳಲ್ಲಿ ಶಿಸ್ತು ಮತ್ತು ಪರಿಶ್ರಮ ಬಹಳ ಮುಖ್ಯ. ಅಲ್ಲಿ ಸರ್ಕಾರಿ ಕೆಲಸದಂತೆ ಸೋಮಾರಿತನಕ್ಕೆ ಅವಕಾಶವಿರುವುದಿಲ್ಲ ಎಂದು ಎಚ್ಚರಿಸಿದರು.

ಶಾಸಕನಾಗಿ 2015-16ರಲ್ಲಿ ಚಳ್ಳಕೆರೆ ನಗರದಲ್ಲಿ ನಾವು ನಡೆಸಿದ ಉದ್ಯೋಗ ಮೇಳದಲ್ಲಿ ಸುಮಾರು 150 ಕಂಪನಿಗಳು ಭಾಗವಹಿಸಿದ್ದವು ಮತ್ತು 13,000 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದರು. ಸುಮಾರು 8,000 ದಿಂದ 9,000 ಜನರಿಗೆ ಉದ್ಯೋಗ ಲಭಿಸಿತ್ತು ಎಂದು ಶಾಸಕ ಟಿ. ರಘುಮೂರ್ತಿ ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಪ್ರಾಸ್ತಾವಿಕ ಮಾತನಾಡಿದ ಜಿಪಂ ಸಿಇಓ ಡಾ.ಆಕಾಶ್ ಉದ್ಯೋಗ ಮೇಳದಲ್ಲಿ 6,200ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರು, ತುಮಕೂರು, ಕೋಲಾರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಚಿತ್ರದುರ್ಗ ಜಿಲ್ಲೆಯ ಒಟ್ಟು 86ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ. ಮೇಳ ಆರಂಭವಾದ ಕೆಲವೇ ಗಂಟೆಗಳಲ್ಲಿ ಅಂದರೆ ಮಧ್ಯಾಹ್ನದ ವೇಳೆಗೆಯೇ ಸುಮಾರು 575 ಅಭ್ಯರ್ಥಿಗಳ ಸಂದರ್ಶನ ಪೂರ್ಣಗೊಂಡಿದ್ದು, ಈ ಪೈಕಿ 145 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಗಿದೆ. ಇದರ ಹೊರತಾಗಿ ಇನ್ನೂ 180 ಅಭ್ಯರ್ಥಿಗಳನ್ನು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಮೇಳದಲ್ಲಿ 32 ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಿದ್ದು, ಅವರಲ್ಲಿ 6 ಜನರಿಗೆ ಉದ್ಯೋಗ ಖಚಿತವಾಗಿದೆ. ಮೇಳದಲ್ಲಿ ಎಸ್‍ಎಸ್‍ಎಲ್‍ಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಪ್ರತಿಯೊಬ್ಬರಿಗೂ ಅವರ ವಿದ್ಯಾರ್ಹತೆಗೆ ತಕ್ಕಂತೆ ಅವಕಾಶಗಳಿವೆ. ಕನಿಷ್ಠ 10 ಕಂಪನಿಗಳಲ್ಲಾದರೂ ಸಂದರ್ಶನ ಎದುರಿಸಲು ಪ್ರಯತ್ನಿಸಿ ಎಂದು ಅಭ್ಯರ್ಥಿಗಳಿಗೆ ತಿಳಿಸಿದರು.

*ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ: ಜಿಲ್ಲಾ ಮಟ್ಟದ ಉದ್ಯೋಗ ಮೇಳ-2026ಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಉದ್ಯೋಗ ಮೇಳದಲ್ಲಿ ಒಟ್ಟು 6,248 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಸ್ನಾತಕೋತ್ತರ ಪದವಿ 580, ಎಂ.ಟೆಕ್. 16, ಇಂಜಿನಿಯರಿಂಗ್ 388, ಪದವಿ 2,939, ಐ.ಟಿ.ಐ 411, ಡಿಪೆÇ್ಲಮಾ 199, ನಸಿರ್ಂಗ್ 86, ಪಿಯುಸಿ 899 ಎಸ್.ಎಸ್.ಎಲ್.ಸಿ ಪೂರೈಹಿಸಿದ 730 ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ನೊಂದಣಿಯಾದವರಲ್ಲಿ 3,110 ಪುರುಷ ಹಾಗೂ 3100 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 1739 ಪರಿಶಿಷ್ಟ ಜಾತಿ, 1042 ಪರಿಶಿಷ್ಟ ಪಂಗಡ, 2326 ಹಿಂದುಳಿದ ವರ್ಗ, 129 ಅಲ್ಪ ಸಂಖ್ಯಾತ, 977 ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಭಾಗವಹಿಸಿದ್ದರು.

ಟೆಕ್, ಫಾರ್ಮಾ, ಹಾರ್ಡವೇರ್, ಬ್ಯಾಂಕಿಂಗ್, ಇನ್ಸೂರೆನಸ್, ಮಾರ್ಕೆಟಿಂಗ್ ಸೇರಿದಂತೆ 86 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. ಸೂಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಂಡವು. ಇದರೊಂದಿಗೆ 35 ವರ್ಷ ಮೇಲ್ಪಟ್ಟವರಿಗೂ ಕಂಪನಿಗಳು ಉದ್ಯೋಗ ಅವಕಾಶದ ಬಾಗಿಲು ತೆರೆದವು.

ಕಳೆದ ವರ್ಷ ಇಲ್ಲಿಯೇ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಯಾಗಿ ಪಾಲ್ಗೊಂಡಿದ್ದ ಹೊಳಲ್ಕೆರೆಯ ಶರತ್ ಆಗ ಎಸ್‍ಬಿಐ ಲೈಫ್ ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು, ಶರತ್ ಈ ಬಾರಿಯ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲು ಸಂದರ್ಶಕರಾಗಿ ಪಾಲ್ಗೊಂಡಿದ್ದಾರೆ. ಸದ್ಯ ಅವರು ಮಾಸಿಕ ರೂ.80,000 ವೇತನದ ಪಡೆಯುತ್ತಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಉಪನಿರ್ದೇಶಕ ಮಂಜುನಾಥ್, ಉದ್ಯೋಗಾಧಿಕಾರಿ ರವೀಂದ್ರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ