ಕನಕರ ಕೀರ್ತನೆಗಳಲ್ಲಿ ಜೀವನಾಂಶದ ಮೌಲ್ಯ: ಶಾಸಕ ನಾರಾ ಭರತ್ ರೆಡ್ಡಿ

KannadaprabhaNewsNetwork |  
Published : Nov 09, 2025, 02:45 AM IST
ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶ್ರೀಕನಕದಾಸರ ಜಯಂತಿಯನ್ನು ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.  | Kannada Prabha

ಸಾರಾಂಶ

ಭಕ್ತಶ್ರೇಷ್ಠ ಕನಕದಾಸರ ಕೀರ್ತನೆಗಳಲ್ಲಿ ಪ್ರತಿಯೊಂದು ಪದಕ್ಕೂ ಜೀವನಾಂಶದ ಮೌಲ್ಯವಿದೆ.

ಬಳ್ಳಾರಿ: ದಾಸ ಶ್ರೇಷ್ಠರಾಗಿದ್ದ ಶ್ರೀಕನಕದಾಸರ ಜಯಂತಿ ನಗರ ಸೇರಿದಂತೆ ಜಿಲ್ಲಾದ್ಯಂತ ಭಕ್ತಿಯಿಂದ ಆಚರಿಸಲಾಯಿತು.

ಜಯಂತಿ ಸಂಭ್ರಮದಲ್ಲಿ ಭಾಗವಹಿಸಿದ್ದ ಜನರು ಕನಕದಾಸರ ಕೀರ್ತನೆ ಹಾಗೂ ಸಂದೇಶಗಳು, ಕನ್ನಡ ಸಾಹಿತ್ಯ ಲೋಕಕ್ಕೆ ಕನಕರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ ಶನಿವಾರ ಆಯೋಸಿದ್ದ ಭಕ್ತ ಶ್ರೇಷ್ಠ

ಶ್ರೀ ಕನಕದಾಸರ ಜಯಂತಿಯನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಕ್ತಶ್ರೇಷ್ಠ ಕನಕದಾಸರ ಕೀರ್ತನೆಗಳಲ್ಲಿ ಪ್ರತಿಯೊಂದು ಪದಕ್ಕೂ ಜೀವನಾಂಶದ ಮೌಲ್ಯವಿದೆ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ದೇವರನ್ನು ಕೊಂಡಾಡಿ ದಾಸಶ್ರೇಷ್ಠ ಎನಿಸಿಕೊಂಡರು. ಅವರ ಕೀರ್ತನೆಗಳು ಸಾಮಾಜಿಕ ಕಳಕಳಿ ಹೊಂದಿದ್ದವು ಎಂದು ತಿಳಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಪಿ.ಎಲ್. ಗಾದಿಲಿಂಗನ ಗೌಡ ಮಾತನಾಡಿ, ಕನಕದಾಸರು ಶೋಷಿತರ ದೊಡ್ಡ ಧ್ವನಿಯಾಗಿದ್ದರು. ತಮ್ಮ ಕೀರ್ತನೆಗಳಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಿ, ಸಮಾನತೆ ಸಾರಿದರು ಎಂದು ಹೇಳಿದರು.

ವೀರಶೈವ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಕೆ. ನೀಲಮ್ಮ ವಿಶೇಷ ಉಪನ್ಯಾಸ ನೀಡಿದರು.

ಭಾರತದ ಕರ್ನಾಟಕದ ಹರಿದಾಸ ಸಂತ ಮತ್ತು ದ್ವೈತ ವೇದಾಂತದ ತತ್ವಜ್ಞಾನಿಯಾಗಿದ್ದ ಕನಕದಾಸರು, ಕ್ರಿ.ಶ. 1509 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ಯುದ್ಧದಲ್ಲಿ ಗಾಯಗೊಂಡ ನಂತರ ಸೈನಿಕ ವೃತ್ತಿಯನ್ನು ತ್ಯಜಿಸಿ ಶ್ರೀಕೃಷ್ಣನ ಭಕ್ತರಾದರು. ನಂತರ ''''''''ಕನಕದಾಸರು'''''''' ಎಂಬ ಹೆಸರನ್ನು ಪಡೆದು, ತಮ್ಮ ಕೀರ್ತನೆಗಳ ಮೂಲಕ ಸಿರಿ ಮತ್ತು ಸಂಪತ್ತು ಶ್ರೇಷ್ಠವಲ್ಲ ಎಂಬುದನ್ನು ಸಾರಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕವಿತಾ ಗಂಗೂರು ತಂಡದವರು ದಾಸರ ಪದಗಳನ್ನು ಹಾಡಿದರು. ಜಯಂತಿ ಅಂಗವಾಗಿ ಮೆರವಣಿಗೆ ಜರುಗಿತು.

ಕನಕದಾಸರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳು ಹಾಗೂ ವಾದ್ಯಗಳೊಂದಿಗೆ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಯು-ಗಡಿಗಿ ಚೆನ್ನಪ್ಪ ವೃತ್ತ-ಬೆಂಗಳೂರು ರಸ್ತೆ-ಬ್ರೂಸ್‌ಪೇಟೆ ಪೊಲೀಸ್ ಠಾಣೆ ಮುಂಭಾಗ ತೇರು ಬೀದಿ-ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆವರೆಗೆ ತಲುಪಿ ಸಂಪನ್ನಗೊಂಡಿತು.

ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಪಿ.ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಡಿಡಿಪಿಐ ಉಮಾದೇವಿ, ಸಮಾಜದ ಮುಖಂಡ ಬೆಣಕಲ್ ಬಸವರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ಹಾಗು ಇತರರು ಉಪಸ್ಥಿತರಿದ್ದರು.

ಕೆಲವೇ ದಿನಗಳಲ್ಲಿ ರಾಯಣ್ಣ ಪುತ್ಥಳಿ ಅನಾವರಣ:

ನಗರದಲ್ಲಿ ರಾಯಣ್ಣನವರ ಪುತ್ಥಳಿ ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು. ನಗರದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಳ್ಳಾರಿ ನಗರ ಅಭಿವೃದ್ಧಿಯತ್ತ ಸಾಗಿದೆ. ಬಳ್ಳಾರಿ ಜನರ ನಿರೀಕ್ಷೆಯಂತೆಯೇ ಕಾರ್ಯನಿರ್ವಹಿಸುತ್ತಿದ್ದೇವೆ. ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ರೂಪಿಸಿ, ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯುವ ಕೆಲಸ ಮಾಡುತ್ತಿದೆ ಎಂದು ಶಾಸಕ ರೆಡ್ಡಿ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ