ಹಾನಗಲ್ಲ: ಮಾನವನ ಬದುಕಿನ ಸಂಕಷ್ಟ ನೀಗಿಸುವ ಶಕ್ತಿಯುತ ವಚನ ಸಾಹಿತ್ಯ, ಕಲಿಯುಗದಲ್ಲಿಯೂ ಅಧರ್ಮ ಕಿತ್ತೊಗೆಯುವ ಸರಳ ಮಾರ್ಗದರ್ಶನದ ಸಂದೇಶಗಳನ್ನು ಹೊಂದಿದೆ ಎಂದು ನಿವೃತ್ತ ಪ್ರಾಧ್ಯಾಪಕ ಎ.ಐ. ಮಳೆಣ್ಣನವರ ತಿಳಿಸಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣ ಸಾಹಿತ್ಯ ಬಂಗಾರದಂಗಡಿ. ಇಲ್ಲಿ ಸತ್ಯ ಶುದ್ಧ ಕಾಯಕವೇ ಮೂಲ ಆಶಯ. ಶರಣರು ನಡೆಯನ್ನು ನುಡಿಯಾಗಿಸಿದ್ದಾರೆ. ಮಾನವ ಜೀವನಕ್ಕೆ ಇದು ದೊಡ್ಡ ಕೊಡುಗೆ. ಇತ್ತೀಚೆಗೆ ಸತ್ಸಂಗಗಳು ದೂರವಾಗುತ್ತಿದ್ದು, ಮತ್ತೆ ಶರಣ ಸಾಹಿತ್ಯದ ಪ್ರಚಾರ ಪ್ರಸಾರದ ಮೂಲಕ ಸತ್ಸಂಗಗಳ ಪುನರುತ್ಥಾನವಾಬೇಕು. ಈ ಮೂಲಕ ಧರ್ಮ ಜಾಗೃತವಾಗಿ ಅಧರ್ಮ ನಾಶವಾಗಬೇಕು. ಸಾಮಾಜಿಕ ನೆಮ್ಮದಿಯ ಜೀವನಕ್ಕೆ ಸಾಕ್ಷಿಯಾಗಬೇಕು ಎಂದರು.ನ್ಯಾಯವಾದಿ ಪ್ರವೀಣ ಬ್ಯಾತನಾಳ ಅಲ್ಲಮಪ್ರಭುಗಳ ಬದುಕು ಬರಹ ಕುರಿತು ಮಾತನಾಡಿ, ವೈರಾಗ್ಯ ನಿಧಿ ಅಲ್ಲಮಪ್ರಭುಗಳು ನೇರ ನಿಲುವಿನ ನಿಷ್ಠುರ ಅನುಭಾವದ ಮಾರ್ಗದರ್ಶಕರು. ಅಲ್ಲಮರ ಮಹಿಮೆ ಶರಣ ಸಂಕುಲದಲ್ಲಿ ಅಗಾಧವಾದ ಶಕ್ತಿಯನ್ನು ಹೊಂದಿತ್ತು. ಅವರ ಕೃತಿಗಳನ್ನು ಗ್ರಹಿಸುವುದು ಸ್ವಲ್ಪ ಕಠಿಣ. ಆದರೆ ಅಲ್ಲಿನ ಅನುಭಾವ ಮಾತ್ರ ಅಚ್ಚಳಿಯದ ಸಂವೇದನೆ ನೀಡುತ್ತದೆ. ಆಳವಾದ ಆಧ್ಯಾತ್ಮಿಕ ಕಳೆ ಅನುಭಾವ ಹೊಂದಿದ ಅಲ್ಲಮಪ್ರಭುಗಳು ಕೈಲಾಸದಿಂದ ಬಂದ ಚಿತ್ಕಳೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಉಪಾಧ್ಯಕ್ಷ ಅಶೋಕ ದಾಸರ, ವಚನಗಳು ನಮ್ಮ ಬದುಕಿನ ಮಂತ್ರಗಳು. ಅತ್ಯಂತ ಸರಳ ಹಾಗೂ ಸುಲಭವಾಗಿ ಅರ್ಥೈಸಲು ಸಾಧ್ಯ. ಆದರೆ ಅದರಲ್ಲಿನ ಅರ್ಥವಂತಿಕೆ ನೀತಿ ನಿಯಮಗಳ ಅಭಿವ್ಯಕ್ತಿ ಮಾತ್ರ ಸಾರ್ವಕಾಲಿಕ ಸತ್ಯಗಳು ಎಂದರು.ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಅಕ್ಕಮ್ಮ ಶೆಟ್ಟರ, ರಾಮಣ್ಣ ಸುಗಂಧಿ, ಜ್ಯೋತಿ ಕುಲಕರ್ಣಿ, ಶಂಕರ ಬೂದನಾಳ, ಸುಮಂಗಲಾ ಕಟ್ಟಿಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕದಳಿಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟರ ಸ್ವಾಗತಿಸಿದರು. ಸುವರ್ಣ ಹಿರೇಗೌಡರ ಪ್ರಾಸ್ತಾವಿಕ ಮಾತನಾಡಿದರು. ಶಸಾಪ ಕಾರ್ಯದರ್ಶಿ ಸುಭಾಸ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ ವಂದಿಸಿದರು.