ಶರಣರಲ್ಲೇ ನಿಜಶರಣರೆನಿಸಿದ ಅಂಬಿಗರ ಚೌಡಯ್ಯನವರ ವಚನಗಳು ಒಂದು ಸಮುದಾಯಕ್ಕೆ ಸೀಮಿತವಾಗದೇ ಸಂಪೂರ್ಣ ಮಾನವ ಕುಲಕ್ಕೆ ದಾರಿದೀಪವಾಗಿದೆ.
ದೀವಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ
ಶ್ರೀಮದ್ಭಗವದ್ಗೀತಾ ಅಧ್ಯಯನ ಕೇಂದ್ರದ ಸಂಚಾಲಕಿ ಉಪನ್ಯಾಸ
ಕನ್ನಡಪ್ರಭ ವಾರ್ತೆ ಕುಮಟಾ
ಶರಣರಲ್ಲೇ ನಿಜಶರಣರೆನಿಸಿದ ಅಂಬಿಗರ ಚೌಡಯ್ಯನವರ ವಚನಗಳು ಒಂದು ಸಮುದಾಯಕ್ಕೆ ಸೀಮಿತವಾಗದೇ ಸಂಪೂರ್ಣ ಮಾನವ ಕುಲಕ್ಕೆ ದಾರಿದೀಪವಾಗಿದೆ. ಪ್ರತಿಯೊಬ್ಬರೂ ನಿಜಶರಣರ ಚಿಂತನೆ ಅರಿತು, ಜೀವನದಲ್ಲಿ ಅಳವಡಿಸಿಕೊಂಡು ಶ್ರೇಷ್ಠರಾಗಬೇಕಿದೆ ಎಂದು ದಿವಗಿಯ ಶ್ರೀಮದ್ಭಗವದ್ಗೀತಾ ಅಧ್ಯಯನ ಕೇಂದ್ರದ ಸಂಚಾಲಕಿ ಎ.ಆರ್. ಭಾರತಿ ಹೇಳಿದರು.
ದೀವಗಿಯಲ್ಲಿ ಚೇತನಾ ಸೇವಾ ಸಂಸ್ಥೆ ಹಾಗೂ ಅಂಬಿಗರ ಚೌಡಯ್ಯ ಅಭಿಮಾನಿ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಗಂಗಾಮಾತಾ ದೇವಾಲಯ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಆರ್. ಅಂಬಿಗ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಗ ಸಮಾಜದ ಹಿರಿಯರಾದ ಎಲ್.ಎಸ್. ಅಂಬಿಗ ಮಾತನಾಡಿ, ಚೌಡಯ್ಯನವರ ಮೇಲಿನ ಅಭಿಮಾನದಿಂದ ಸರ್ಕಾರೇತರವಾಗಿ ದಿವಗಿಯಲ್ಲಿ ಆಯೋಜಿಸಿದ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿಯೂ ಆಯೋಜಿತಗೊಂಡು ಎಲ್ಲ ಸಮಾಜದವರೂ ಭಾಗವಹಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಕಸ ವಿಲೇವಾರಿ ವಾಹನದ ಚಾಲಕಿ ಶ್ಯಾಮಲಾ ಸಂತೋಷ ಅಂಬಿಗ ಹಾಗೂ ಅಂಬಿಗ ಸಮಾಜದ ಯಜಮಾನ ಮನೆತನದ ಸಂತೋಷ ಪರಮೇಶ್ವರ ಅಂಬಿಗ ಅವರನ್ನು ಗೌರವಿಸಲಾಯಿತು.
ಗ್ರಾಮೀಣ ಸೇವಾ ಸಹಕಾರಿ ಸಂಘದ ನಿರ್ದೇಶಕ ಗಂಗಾಧರ ಎಸ್. ಅಂಬಿಗ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ನಾಗವೇಣಿ ಆರ್. ಅಂಬಿಗ, ಡಿಜೆವಿಎಸ್ ಪ್ರೌಢಶಾಲಾ ಶಿಕ್ಷಕ ಸುಭಾಸ ಎನ್. ಅಂಬಿಗ ಉಪಸ್ಥಿತರಿದ್ದರು. ತುಳಸಿ ಗೌಡ ಪ್ರಾರ್ಥಿಸಿದರು. ಚೈತನ್ಯಾ ಆರ್. ಅಂಬಿಗ ಸ್ವಾಗತಿಸಿದರು. ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಂಬಿಗ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ್ ಎ. ಅಂಬಿಗ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.