ಭವಿಷ್ಯದ ಘಟನೆಗಳಿಗೆ ಚರಿತ್ರೆ ಬೆಸೆಯುವ ಕೆಲಸ ಅಗತ್ಯ: ಹಂಪಿ ವಿವಿ ಕುಲಪತಿ ಡಾ.ಪರಮಶಿವಮೂರ್ತಿ

KannadaprabhaNewsNetwork | Published : Sep 29, 2024 1:33 AM

ಸಾರಾಂಶ

ಸ್ಥಳೀಯವಾದ ಇತಿಹಾಸವ ಆಳವಾಗಿ ಅಧ್ಯಯನ ಮಾಡುವುದರ ಮೂಲಕ ಆತ್ಮಾಭಿಮಾನದ ಅಂಶಗಳನ್ನು ಮತ್ತೆ ಹುಡುಕಿ ಮುಂದಿನ ಭವಿಷ್ಯದ ಘಟನೆಗಳಿಗೆ ಅದನ್ನು ಬೆಸೆಯುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಸ್ತತ ಸಮಾಜ ಎದರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಚರಿತ್ರೆಯಲ್ಲಿ ಹಿರಿಯರು ಪರಿಹಾರ ಸೂಚಿಸಿದ್ದಾರೆ. ಅದನ್ನು ನೋಡುವ ವ್ಯವಧಾನ ನಮ್ಮಲ್ಲಿ ಇಲ್ಲವಾಗಿದೆ. ಭವಿಷ್ಯದ ಘಟನೆಗಳಿಗೆ ಚರಿತ್ರೆ ಬೆಸೆಯುವ ಕೆಲಸ ಆಗಬೇಕಾಗಿದೆ ಎಂದು ಹಂಪಿ ವಿವಿ ಕುಲಪತಿ ಡಾ.ಪರಮಶಿವಮೂರ್ತಿ ಹೇಳಿದರು.

ಸಂಸ್ಕಾರ ಭಾರತಿ ಜಿಲ್ಲಾ ಸಮಿತಿ ಮತ್ತು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದ ಮೊತ್ತ ಮೊದಲ ಸಾಮ್ರಾಜ್ಯ ಸ್ಥಾಪಕ ಮಯೂರವರ್ಮ ಮತ್ತು ಚಿತ್ರದುರ್ಗ ವಿಷಯದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಇಂದಿನ ಜಾಗತಿಕ ವಿದ್ಯಮಾನಗಳು ಆತ್ಮವಿಶ್ವಾಸ ಕುಸಿಯುವಂತೆ ಮಾಡಿವೆ. ಇದಕ್ಕೆ ಅನೇಕ ಸಾಮಾಜಿಕ, ಅರ್ಥಿಕ, ಧಾರ್ಮಿಕ ಕಾರಣಗಳು ಸಹಾಯ ಮಾಡುತ್ತಿವೆ. ಸ್ಥಳಿಯವಾದ ಇತಿಹಾಸವ ಆಳವಾಗಿ ಅಧ್ಯಯನ ಮಾಡುವುದರ ಮೂಲಕ ಆತ್ಮಾಭಿಮಾನದ ಅಂಶಗಳನ್ನು ಮತ್ತೆ ಹುಡುಕಿ ಮುಂದಿನ ಭವಿಷ್ಯದ ಘಟನೆಗಳಿಗೆ ಅದನ್ನು ಬೆಸೆಯುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂದರು.

ಇತಿಹಾಸ ಎಂದರೆ ಘತಕಾಲವಲ್ಲ, ನಮ್ಮ ಸಂಸ್ಕೃತಿ ಪ್ರತಿಬಿಂಬ. ಭಾರತದಲ್ಲಿ ಬೇರೆ ರಾಜ್ಯಗಳಿಗೆ ಹೊಲಿಸಿದರೆ ನಮ್ಮ ಕರ್ನಾಟಕದಲ್ಲಿ ಚರಿತ್ರೆ ಆಕರಗಳು, ರಚನೆ, ಚರಿತ್ರೆ ಪುನಾರಚನೆ ತುಂಬಾ ಮುಂಚೂಣಿಯಲ್ಲಿ ಇವೆ. ಸ್ಥಳೀಯ ಚರಿತ್ರೆಗೆ ಸರಿಯಾದ ನ್ಯಾಯ ಇದುವರೆವಿಗೂ ದೊರಕಿಲ್ಲ. ಸ್ಥಳೀಯ ಚರಿತೆಯ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನಗಳು ಮುಂದಿನ ದಿನದಲ್ಲಿ ನಡೆಯಬೇಕಿದೆ. ಭಾರತ ವೈವಿಧ್ಯಮಯ ಸಂಸ್ಕೃತಿ ಹೊಂದಿದ ದೇಶವಾಗಿದೆ. ವೈವಿಧ್ಯತೆಯಲ್ಲಿ ಸ್ಥಳೀಯ ಚರಿತೆಯನ್ನು ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷ್ಯ ಮಾಡಲಾಗಿದೆ. ವೈವಿದ್ಯತೆಯಲ್ಲಿ ಏಕತೆ ಕಾಣಬೇಕಾದರೆ ಸ್ಥಳೀಯ ಚರಿತ್ರೆ ಮೂಲಕ ರಾಷ್ಟ್ರೀಯ ಚರಿತ್ರೆ ಕಟ್ಟುಕೊಳ್ಳಬೇಕಿದೆ. ಒಂದು ಸಂಸ್ಥಾನದ ಇತಿಹಾಸ ಎಂದರೆ ರಾಜ-ರಾಣಿಯವರ ಇತಿಹಾಸ ಮಾತ್ರವಲ್ಲ, ಅದು ಸಂಸ್ಥಾನದ ಕೈಕೆಳಗೆ ಇದ್ದ ಜನ ಸಾಮಾನ್ಯರಿಂದ ಮೊದಲುಗೊಂಡು ಪ್ರತಿಯೊಬ್ಬ ಅಧಿಕಾರಿ ಇತಿಹಾಸವಾಗಿದೆ ಎಂದರು.

ಸಂಸ್ಕಾರ ಭಾರತೀಯ ಜಿಲ್ಲಾ ಅಧ್ಯಕ್ಷೆ ಸುಜಾತ ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದ ಪದ ನಿಮಿತ್ತ ಸಹ ನಿರ್ದೇಶಕಿ ಲೀಲಾವತಿ, ಇತಿಹಾಸ ಸಂಶೋಧಕ ಡಾ.ರಾಜಶೇಖರಪ್ಪ, ಹಿರಿಯೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಡಾ.ಯಶೋಧಾ ರಾಜಶೇಖರಪ್ಪ, ಸಂಸ್ಕಾರ ಭಾರತಿ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ರಾಜೀವ ಲೋಚನ, ಕಾರ್ಯದರ್ಶಿ ಮಾರುತಿ ಮೋಹನ್, ಉಮೇಶ್ ತುಪ್ಪದ್, ಸಂಘಟನಾ ಕಾರ್ಯದರ್ಶಿ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಹೇಮಂತ ರಾವ್ ಭಾಗವಹಿಸಿದ್ದರು. ಗುರುರಾಜ್ ಪ್ರಾರ್ಥಿಸಿದರೆ, ನಾಗರಾಜ್ ಸ್ವಾಗತಿಸಿದರು, ಚಂದ್ರಿಕಾ ಸುರೇಶ್ ಕಾರ್ಯಕ್ರಮ ಪ್ರಸ್ತಾವಿಕ ಮಾತನಾಡಿದರು.

Share this article