ಕಳಪೆ ಗುಣಮಟ್ಟದ ಹಾಗೂ ಬಿರುಕು ಬಿಟ್ಟ ಸಿಮೆಂಟ್ ಇಟ್ಟಿಗೆ ಬಳಸಿ ಕಟ್ಟಡ ಕಟ್ಟಲಾಗಿದೆ. ನಿರ್ಮಾಣದ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಅಶೋಕ ಡಿ. ಸೊರಟೂರ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಕಳಪೆ ಗುಣಮಟ್ಟದ ಹಾಗೂ ಬಿರುಕು ಬಿಟ್ಟ ಸಿಮೆಂಟ್ ಇಟ್ಟಿಗೆ ಬಳಸಿ ಕಟ್ಟಡ ಕಟ್ಟಲಾಗಿದೆ. ನಿರ್ಮಾಣದ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪಟ್ಟಣದಿಂದ ಅಕ್ಕಿಗುಂದ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂರು ಅಂತಸ್ತಿನ ಬಾಲಕರ ವಸತಿ ನಿಲಯದ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಕಟ್ಟಡದಲ್ಲಿ ಸುಮಾರು 100 ವಿದ್ಯಾರ್ಥಿಗಳ ವಸತಿಗೆ ಅವಕಾಶವಿದೆ. ₹6.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡದ ನೆಲ ಮಹಡಿಯ ಕಟ್ಟಡದಲ್ಲಿ ಕಳಪೆ ಗುಣಮಟ್ಟದ ಹಾಗೂ ಬಿರುಕು ಸಿಮೆಂಟ್ ಇಟ್ಟಿಗೆ ಬಳಸಿ ಕಾಮಗಾರಿ ಮಾಡಿರುವುದು ಬೆಳಕಿಗೆ ಬಂದಿದೆ.
ಕಟ್ಟಡಕ್ಕೆ ಬಳಸಿರುವ ಕಬ್ಬಿಣವೂ ಗುಣಮಟ್ಟದಿಂದ ಕೂಡಿಲ್ಲ. ತರಾತುರಿಯಲ್ಲಿ ಈ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಸರಿಯಾದ ರೀತಿಯಲ್ಲಿ ಕ್ಯೂರಿಂಗ್ ಮಾಡಿಲ್ಲ. ಮಣ್ಣಿನ ಅಂಶ ಹೆಚ್ಚಿರುವ ಎಂ ಸ್ಯಾಂಡ್ ಬಳಸುತ್ತಿರುವುದರಿಂದ ಕಟ್ಟಡದ ಬಾಳಿಕೆ ಬಗ್ಗೆ ಶಂಸಯ ಮೂಡುವುದು ಸಹಜವಾಗಿದೆ.
ಈ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅವಶ್ಯವಾದ ನೀರಿನ ಸೌಲಭ್ಯವೂ ಇಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಕಟ್ಟಡ ಕಟ್ಟಿದ ಜಮೀನಿನ ಕೆಳಗೆ ಕಲ್ಲು ಭೂಮಿ ಇದೆ. ಹೀಗಾಗಿ, ಇಲ್ಲಿ ಕೊಳವೆ ಬಾವಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಬಳಕೆಗೆ ಸಾವಿರಾರು ಲೀಟರ್ ನೀರು ಬೇಕಾಗುತ್ತದೆ. ಅಧಿಕಾರಿಗಳು ನೀರನ್ನು ಎಲ್ಲಿಂದ ತರುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ನೀರು ಲಭ್ಯವಿರದ ಜಮೀನಿನಲ್ಲಿ ವಸತಿ ನಿಲಯದ ಕಟ್ಟಡ ಕಟ್ಟಬಾರದು ಎಂಬ ಸಾಮಾನ್ಯ ಅರಿವು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಇಲ್ಲದಿರುವುದು ನೋವಿನ ಸಂಗತಿಯಾಗಿದೆ.
ಕಳಪೆ ಕಾಮಗಾರಿ
ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡವನ್ನು ಬಿರುಕು ಬಿಟ್ಟಿರುವ ಸಿಮೆಂಟ್ ಬ್ಲಾಕ್ಗಳನ್ನು ಬಳಸಿ ಕಟ್ಟಿದ್ದಾರೆ. ಕಬ್ಬಿಣದ ಗುಣಮಟ್ಟವೂ ಸರಿಯಾಗಿಲ್ಲ. ಇದರಿಂದ ಕಟ್ಟಡ ಸುಭದ್ರವಾಗಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಳ್ಳುವ ಹಾಗೂ ದರ್ಪದಿಂದ ಉತ್ತರಿಸುವ ಕಾರ್ಯ ಮಾಡುತ್ತಾರೆ.
ಸದಾನಂದ ನಂದೆಣ್ಣವರ ಗದಗ ಜಿಲ್ಲಾ ಡಿಎಸ್ಎಸ್ ಪ್ರಧಾನ ಕಾರ್ಯದರ್ಶಿಕಟ್ಟಡ ಸುರಕ್ಷಿತವಾಗಿದೆ
ಬಾಲಕರ ವಸತಿ ನಿಲಯಕ್ಕೆ ಬಳಸುತ್ತಿರುವ ಸಿಮೆಂಟ್ ಬ್ಲಾಕ್ಗಳು ಏರ್ ಕ್ರ್ಯಾಕ್ ಬಿಟ್ಟಿವೆ. ಕಟ್ಟಡ ಕಟ್ಟುವಾಗ ನೀರನ್ನು ಹಾಕಿಸಿಕೊಂಡು ಕ್ಯೂರಿಂಗ್ ಮಾಡುತ್ತೇವೆ. ಕಟ್ಟಡ ಎಲ್ಲ ರೀತಿಯಲ್ಲಿ ಸುರಕ್ಷಿತವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.