ಜಗತ್ತಿಗೆ ವೈದ್ಯರ ಅವಶ್ಯಕತೆ ಅತ್ಯಗತ್ಯ: ಡಾ.ಮೊಹಮ್ಮದ್ ಅಶೀಲ್

KannadaprabhaNewsNetwork |  
Published : Jul 15, 2025, 01:01 AM IST
3 | Kannada Prabha

ಸಾರಾಂಶ

ವಿಶ್ವಸಂಸ್ಥೆ ಪ್ರತಿವರ್ಷ ರಾಷ್ಟ್ರಗಳ ಹವಾಮಾನ ಹಾಗೂ ಆರೋಗ್ಯದ ಆದ್ಯತೆಗಳ ಬಗ್ಗೆ ಪ್ರತಿ ರಾಷ್ಟ್ರದ ಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುತ್ತಿದೆ. ಪ್ರಸ್ತುತ ವರ್ಷದಲ್ಲಿ 77ನೇ ಸಭೆ ನಡೆಸಲಾಗಿದ್ದು, 77 ವರ್ಷಗಳಿಂದ ಗಮನಿಸಿದರೆ ಪ್ರತಿಯೊಂದು ಆದ್ಯತೆಗಳು ಬದಲಾಗುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಗತ್ತಿಗೆ ವೈದೈರ ಅವಶ್ಯಕತೆ ಅತ್ಯಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ರಾಷ್ಟ್ರೀಯ ವೃತ್ತಿಪರ ಅಧಿಕಾರಿ ಡಾ. ಮೊಹಮ್ಮದ್ ಅಶೀಲ್ ತಿಳಿಸಿದರು.

ನಗರದ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ಫಿಜಿಯೋಥೆರಪಿ ಕಾಲೇಜು ಸೋಮವಾರ ಆಯೋಜಿಸಿದ್ದ ಪದವಿ ಪ್ರದಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಸಂಸ್ಥೆಯ ಗಣತಿ ಪ್ರಕಾರ ವಿಶ್ವದಾದ್ಯಂತ 120 ಕೋಟಿ ಜನರು ವಿವಿಧ ಅಂಗವೈಕಲ್ಯದಿಂದ ಬಳಲುತಿದ್ದಾರೆ. ನಮ್ಮ ವಯಸ್ಸು ಕೂಡ ವೇಗವಾಗಿ ಕಳೆದು ಹೋಗುತ್ತಿದೆ ಎಂದರು.

ವಿಶ್ವಸಂಸ್ಥೆ ಪ್ರತಿವರ್ಷ ರಾಷ್ಟ್ರಗಳ ಹವಾಮಾನ ಹಾಗೂ ಆರೋಗ್ಯದ ಆದ್ಯತೆಗಳ ಬಗ್ಗೆ ಪ್ರತಿ ರಾಷ್ಟ್ರದ ಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುತ್ತಿದೆ. ಪ್ರಸ್ತುತ ವರ್ಷದಲ್ಲಿ 77ನೇ ಸಭೆ ನಡೆಸಲಾಗಿದ್ದು, 77 ವರ್ಷಗಳಿಂದ ಗಮನಿಸಿದರೆ ಪ್ರತಿಯೊಂದು ಆದ್ಯತೆಗಳು ಬದಲಾಗುತ್ತಿವೆ ಎಂದರು.

ಪ್ರತಿವರ್ಷ 5 ರಿಂದ 6 ಲಕ್ಷ ಜನ ರಸ್ತೆ ಅಫಘಾತದಲ್ಲಿ ಅಂಗವೈಕಲ್ಯಗಳಿಗೆ ತುತ್ತಾಗುತಿದ್ದಾರೆ. ಪುನರ್ವಸತಿ ಕೇಂದ್ರಗಳು ಹೆಚ್ಚಾಗುತಿದ್ದು, ನಮ್ಮ ಆದ್ಯತೆಗಳು ಸಾಂಕ್ರಾಮಿಕ ಕಾಯಿಲೆಗಳು, ಅಂಗವೈಕಲ್ಯಗಳು ಹಾಗೂ ಹೆಚ್ಚಿನದಾಗಿ ಪುನರ್ವಸತಿ ಕೇಂದ್ರಗಳ ಕಡೆಗೆ ಮುಖ ಮಾಡಿವೆ. 2023ರ ಸಭೆಯಲ್ಲಿ ಪ್ರಪಂಚದ ಆದ್ಯತೆ ಪುನರ್ವಸತಿ ಮುಖ್ಯವಾಹಿನಿ ವ್ಯವಸ್ಥೆಯಾಗಿದೆ. ಯುವ ಜನಾಂಗದಲ್ಲಿ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚುತ್ತಿವೆ. ಇದೆಲ್ಲದರ ಕುರಿತಾಗಿ ವೈದ್ಯಕೀಯ ಕ್ಷೇತ್ರ, ವೈದ್ಯರ ಬೇಡಿಕೆಗಳು ಹೆಚ್ಚುತ್ತಿವೆ ಎಂದು ತಿಳಿಸಿದರು.

ವೃತ್ತಿಪರತೆಯಲ್ಲಿ ವೈದ್ಯರಾಗುವವರಿಗೆ ನಿಮ್ಮದೇ ಆದ ಜವಬ್ದಾರಿಗಳು ಇರುತ್ತವೆ. ಆ ಜವಾಬ್ದಾರಿಗಳಿಂದ ಎಂದಿಗೂ ನುಣಿಚಿಕೊಳ್ಳುವ, ಮೋಸ ಮಾಡುವ ಕೆಲಸ ಮಾಡಬಾರದು. ಎಲ್ಲ ಜವಾಬ್ದಾರಿಗಳನ್ನು ತೆಗೆದುಕೊಂಡು ನಿರ್ವಹಿಸಬೇಕು. ಒಬ್ಬ ನಿಜವಾದ ತರಬೇತುದಾರ ಉತ್ತಮವಾಗಿ ಮುಂದಿನ ಪೀಳಿಗೆಗೆ ತರಬೇತಿ ನೀಡಿದ್ದಲ್ಲಿ ಸಮಾಜಕ್ಕೆ ಉತ್ತಮ ರೀತಿಯ ಸೇವಾ ಜೀವಿಗಳು ದೊರೆಯಲು ಸಾಧ್ಯ ಎಂದರು.

ಭವಿಷ್ಯದಲ್ಲಿ ಜೀವನ ನಡೆಸಲು ಎಲ್ಲೇ ಹೋದರೂ ಮನುಷ್ಯತ್ವ, ಗಟ್ಟಿ ಸ್ನೇಹ ಗಳಿಸುವುದು ಬಹು ಮುಖ್ಯವಾಗುತ್ತದೆ. ಪ್ರಪಂಚದ ಯಾವುದೇ ಸ್ಥಳದಲ್ಲಿ ಬದುಕಿದರೂ ನಿಮ್ಮ ಸ್ನೇಹಿತರನ್ನು ಹಾಗೂ ಕುಟುಂಬವನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದರು.

ಇದೇ ವೇಳೆ 57 ಪದವಿಪೂರ್ವ ಮತ್ತು 29 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಇಂಟರ್ನ್- ಕೆ.ಪಿ. ಚೇತನ್ ಗೌಡ, ಡಾ.ಶ್ರೀ ರಾಜೇಂದ್ರ ಮಹಾಸ್ವಾಮೀಜಿ ಒಟ್ಟಾರೆ ಶೈಕ್ಷಣಿಕ ಶ್ರೇಷ್ಠತೆಗಾಗಿ ಪ್ರಶಸ್ತಿ 2020– 2025 ಬ್ಯಾಚ್- ರಿಯಾನ್ ರಶೀದ್ ಅವರಿಗೆ ನೀಡಲಾಯಿತು.

ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲೆ ಡಾ. ಕವಿತಾ ರಾಜ ಅವರು ವಾರ್ಷಿಕ ವರದಿ ಮಂಡಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರತಿಜ್ಞೆಯನ್ನು ಬೋಧಿಸಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗ ನಿರ್ದೇಶಕ ಆರ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಡಾ.ವಿ. ವಿಜಯ್ ಸ್ಯಾಮ್ಯುಯೆಲ್ ಸ್ವಾಗತಿಸಿದರು. ಡಾ. ಸಂದೀಪ್ ವಂದಿಸಿದರು.

PREV

Latest Stories

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ
ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ