ಕನ್ನಡಪ್ರಭ ವಾರ್ತೆ ವಿಜಯಪುರ
ಬಸವಣ್ಣ ಮತ್ತು ಅಲ್ಲಮಪ್ರಭುಗಳ ವಚನಗಳು ಕನ್ನಡದಿಂದ ನಾನಾ ಭಾಷೆಗಳಿಗೆ ಅನುವಾದಗೊಂಡಿದ್ದು, ಜಗತ್ತಿನಾದ್ಯಂತ ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳು ತಿಳಿಯಬೇಕಿದೆ ಎಂದು ಚರ್ಮರೋಗ ತಜ್ಞ ಡಾ.ಅರುಣ ಇನಾಮದಾರ ಹೇಳಿದರು.ನಗರದ ಹೊರವಲಯದ ಹುಂಡೇಕಾರ ಪೆಟ್ರೋಲಿಯಂನಲ್ಲಿ ಆಯೋಜಿಸಿದ್ದ ನನ್ನೊಳಗಿನ ನಾನು ನೀನೇ ಕೃತಿ ರಚಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ ಅಭಿನಂದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿಗೆ ಭಾರತೀಯ ಸಂಸ್ಕೃತಿ ಮಾದರಿಯಾಗಲಿ ಹಾಗೂ ನನ್ನೊಳಗಿನ ನಾನು ನೀನೇ ಎಂಬ ವಚನ ಕೃತಿಯನ್ನು ಇಂಗ್ಲೀಷ್ಗೆ ಅನುವಾದಿಸಿದ ಬಸವರಾಜ ಯಲಿಗಾರ ಅವರ My Me Is THEE ಕೃತಿಯು ಮಾದರಿಯಾಗಲಿದೆ. ಈ ಕೃತಿಯ ಬರವಣಿಗೆಯು ಜಗತ್ತಿನ ಅತ್ಯುತ್ತಮ ನಾಟಕಕಾರ ಶೇಕ್ಸಪಿಯರ್ನ ಬರವಣಿಗೆಗೆ ಹೋಲಿಸಿ, ಯಲಿಗಾರ ಅವರಿಗೆ ಧನ್ಯವಾದ ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ವಚನಗಳೇ ಜೀವನದ ಮೌಲ್ಯಗಳನ್ನು ತಿಳಿಸುತ್ತವೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮುಂದಿನ ಪೀಳಿಗೆಗೆ ಮಾದರಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.ಸಚಿವ ಎಂ.ಬಿ.ಪಾಟೀಲರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಸಮಯ ಸಿಗದಿದ್ದರೂ ಬಸವರಾಜ ಯಲಿಗಾರ ಬಿಡುವು ಮಾಡಿಕೊಂಡು ಅದ್ಬುತ ಕೃತಿ ರಚಿಸಿದ್ದಾರೆ. ಬಸವಣ್ಣನವರ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ದೇಶ ವಿದೇಶಗರಿಗೂ ತಿಳಿಯುವಂತೆ ಮಾಡಿದ್ದಾರೆ. ವಿಜಯಪುರದಲ್ಲಿ ಸಾಹಿತ್ಯ ಉಳಿಯಲು ಹುಂಡೇಕಾರ ಮನೆತನದ ಶ್ರಮವಿದೆ. ದಿ.ಸಾ.ಮ.ಹುಂಡೇಕಾರ ಅವರು ಜಿಲ್ಲಾ ಸಾಹಿತ್ಯ ಸಂಘ ನಿರ್ಮಿಸಿ ಸ್ವಂತ ಖರ್ಚಿನಲ್ಲಿ ಪ್ರತಿ ವರ್ಷ ನೃತ್ಯ, ನಾಟಕ ಏರ್ಪಡಿಸಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ದಿ.ಎಂ.ಎಂ.ಹುಂಡೇಕಾರ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲೆಯ ಅಧ್ಯಕ್ಷರಾಗಿ 24 ವರ್ಷಗಳ ಕಾಲ ಸೇವೆ ಮಾಡಿದ್ದರು ಎಂದು ಸ್ಮರಿಸಿದರು.
ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ನಮ್ಮ ತಂದೆ ತಾಯಿ ಅವರ ಪ್ರೇರಣೆಯಿಂದ ಇಂತಹ ಕೃತಿ ರಚಿಸಲು ಸಾಧ್ಯವಾಗಿದೆ. ವಚನಗಳು ಗ್ರಾಮೀಣ ಭಾಗದಿಂದ ಹೆಚ್ಚು ಪ್ರಸಿದ್ಧಿ ಪಡೆದಿವೆ. ಆದರೆ, ನಗರ ಪ್ರದೇಶದಲ್ಲಿ ಕೇವಲ ಇಂಗ್ಲೀಷ್ ವ್ಯಾಮೋಹದಿಂದ ಎಲ್ಲವನ್ನೂ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಿನಿಂದಲೇ ನಾವು ಮತ್ತು ನಮ್ಮ ಮಕ್ಕಳಿಗೆ ಉತ್ತಮ ವಿಚಾರಗಳನ್ನು ತುಂಬಿದರೆ ಮಾತ್ರ ಶರಣರು ಮಾಡಿದ ಕಾರ್ಯಕ್ಕೆ ಪ್ರತಿಫಲ ದೊರಕಿದಂತಾಗುತ್ತದೆ. ಹುಂಡೇಕಾರ ಮನೆತನ ಕೂಡ ಸಜ್ಜನಿಕೆಯ ಮನೆತನವಾಗಿದೆ. ಇವರಿಂದ ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳು ಇರಲು ಸಾಧ್ಯವಾಗಿದೆ. ಜೊತೆಗೆ ತಾವು ಅನುವಾದಿಸಿದ ಕೆಲವು ವಚನಗಳ ಭಾವಾರ್ಥ ಸಹಿತ ವಿವರಣೆ ನೀಡಿದರು.ಈ ವೇಳೆ ಶಾಸಕ ರಾಜುಗೌಡ ಪಾಟೀಲ, ಅರುಣ ಹುಂಡೇಕಾರ, ಡಾ.ಸುನಿಲ ಬಿರಾದಾರ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ಮುಕುಂದ ಗಲಗಲಿ, ಬಾಪು ಗಂಜಲಕೆಡ, ಡಾ.ಸಂಪತ್ ಗುಣಾರಿ, ಡಾ.ವಿಜಯ ಪಾಟೀಲ, ರಾಕೇಶ ದರ್ಬಾರ, ಬಸವರಾಜ ಪಾಟೀಲ, ಶರಣು ಗುಡ್ಡೋಡಗಿ, ಮನೋಜ ಬಗಲಿ, ವಿಜಯ ಡೋಣಿ, ವಿವೇಕಾನಂದ, ವಿಜಯ, ಅರವಿಂದ, ಬಸವರಾಜ ಹುಂಡೇಕಾರ, ರವಿ ಬಿಜ್ಜರಗಿ, ಗುರುಪಾದಗೌಡ ದಾಶ್ಯಾಳ, ಶರಣು ಸಬರದ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಮೇತ್ರಿ ನಿರೂಪಿಸಿದರು