ಅಪ್ರಾಪ್ತೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕ ಹಾಗೂ ಅವನ ಸಹೋದನನ್ನು ಹುಡುಗಿಯ ತಂದೆಯೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಅಪ್ರಾಪ್ತೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕ ಹಾಗೂ ಅವನ ಸಹೋದನನ್ನು ಹುಡುಗಿಯ ತಂದೆಯೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ದುಂಡನಕೊಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ತಾಲೂಕಿನ ದುಂಡನಕೊಪ್ಪ ಗ್ರಾಮದ ಮಾಯಪ್ಪ ಸೋಮಪ್ಪ ಅಳಗೋಡಿ (20), ಯಲ್ಲಪ್ಪ ಸೋಮಪ್ಪ ಅಳಗೋಡಿ (22) ಕೊಲೆಯಾದ ಸಹೋದರರು. ಅದೇ ಗ್ರಾಮದ ಫಕ್ಕೀರಪ್ಪ ಮಾರುತಿ ಭಾಂವಿಹಾಳ (50) ಹತ್ಯೆ ಆರೋಪಿಯಾಗಿದ್ದು, ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ವೀರೇಶ ಮಠಪತಿ ಹಾಗೂ ಸಿಬ್ಬಂದಿ ಭೇಟಿ ತನಿಖೆ ಕೈಗೊಂಡಿದ್ದಾರೆ.
ಏನಿದು ಘಟನೆ?:
ಫಕ್ಕೀರಪ್ಪ ಭಾಂವಿಹಾಳ ಅವರ ಅಪ್ರಾಪ್ತೆ ಮಗಳನ್ನು ವಿವಾಹವಾಗುವುದಾಗಿ ಮಾಯಪ್ಪ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದನಂತೆ. ಆತನಿಗೆ ಫಕೀರಪ್ಪ ಹಾಗೂ ಮನೆಯವರು ಬುದ್ಧಿ ಹೇಳಿದರೂ ತೊಂದರೆ ಕೊಡುವುದನ್ನು ನಿಲ್ಲಿಸದ ಕಾರಣ ಬೇಸತ್ತ ಹುಡುಗಿಯ ತಂದೆ ಮಾಯಪ್ಪನನ್ನು ಚಾಕುವಿನಿಂದ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ಮಾಯಪ್ಪನನ್ನು ರಕ್ಷಿಸಲು ಬಂದ ಆತನ ಅಣ್ಣನ ಮೇಲೂ ಫಕ್ಕೀರಪ್ಪ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಇದರಿಂದ ಗಂಭೀರ ಗಾಯಗೊಂಡು ನರಳಾಡುತ್ತಿದ್ದ ಯಲ್ಲಪ್ಪನನ್ನು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯಲ್ಲಪ್ಪ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆರೋಪಿ ಫಕೀರಪ್ಪ ಭಾಂವಿಹಾಳ ಪರಾರಿಯಾಗಿದ್ದು, ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.