ರಾಮನಗರ: ಎಲ್ಲಾ ಕಲಾ ಪ್ರಕಾರಗಳಿಗೆ ರಂಗಭೂಮಿ ಅಡಿಪಾಯವಿದ್ದಂತೆ. ನಟ ಸಾರ್ವಭೌಮ ಡಾ. ರಾಜಕುಮಾರ್ ಸೇರಿದಂತೆ ದೇಶದ ಮೇರು ನಟರು ರಂಗಭೂಮಿ ಹಿನ್ನೆಲೆಯಿಂದ ಬಂದವರು ಎಂದು ಆರ್.ಚಂದ್ರಯ್ಯ ಅಭಿಪ್ರಾಯಪಟ್ಟರು.
ಈಗಿನ ಆಧುನಿಕ ಮನರಂಜನಾ ಮಾಧ್ಯಮಗಳಿಗೂ ಮುಂಚೆ ಜನರ ಮನರಂಜನೆಗಾಗಿ ಇದ್ದದ್ದು ರಂಗಭೂಮಿ ಮಾತ್ರ. ಈಗ ಸಿನಿಮಾ, ಕಿರುತೆರೆ ಸೇರಿದಂತೆ ಹಲವು ರೀತಿಯ ಮಾಧ್ಯಮಗಳು ಇದ್ದರೂ, ರಂಗಭೂಮಿ ತನ್ನದೇ ಆದ ಮಹತ್ವ ಉಳಿಸಿಕೊಂಡು ಬಂದಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯು ರಂಗಭೂಮಿ ಚಟುವಟಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಇಂದಿಗೂ ಈ ಭಾಗದ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳನ್ನು ಸ್ಥಳೀಯರೇ ಆಯೋಜಿಸಿ ನಟಿಸುವುದು ಗಮನಾರ್ಹ ಎಂದು ಚಂದ್ರಯ್ಯ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಆ ನಿಟ್ಟಿನಲ್ಲಿ ಶಾಲಾ- ಕಾಲೇಜು ಹಂತದಲ್ಲೇ ಮಕ್ಕಳಿಗೆ ರಂಗಭೂಮಿ ಚಟುವಟಿಕೆಗಳನ್ನು ನೀಡುವ ಕೆಲಸವಾಗಬೇಕು. ಇದರಿಂದ ನಮ್ಮ ನೆಲದ ಜಾನಪದ ಕಲೆಗಳನ್ನು ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.
ರಂಗ ಗೌರವ ಸ್ವೀಕರಿಸಿದ ಹಿರಿಯ ಕಲಾವಿದ ವಿಜಯ ಕುಮಾರ್ , ರಾಮನಗರವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಇಲ್ಲಿ ಕಲಾ ಪ್ರದರ್ಶನ ಚಟುವಟಿಕೆಗಳಿಗೆ ಒಂದು ಕಲಾ ಭವನ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ, ಭವನ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಯೂನಿವರ್ಸಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚೇತನ್ ಕುಮಾರ್, ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ನಮ್ಮವರು ಬಳಗದ ಡಾ. ಅಂಕನಹಳ್ಳಿ ಪಾರ್ಥ, ಪದ್ಮರೇಖಾ, ಡಾ. ಎಚ್.ಡಿ. ಉಮಾಶಂಕರ್ ಉಪಸ್ಥಿತರಿದ್ದರು.
------------------------27ಕೆಆರ್ ಎಂಎನ್ 3.ಜೆಪಿಜಿ
----------------------------