ಹಗರಿಬೊಮ್ಮನಹಳ್ಳಿ: ರಂಗಭೂಮಿ ಒಂದು ಪ್ರಾಕಾರದ ಚಳವಳಿಯಾಗಿದೆ. ಅದು ಎಂದಿಗೂ ಜೀವಂತವಾಗಿರಲು ರಂಗಕಲೆಗೆ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಂಗಾಸಕ್ತರು ಮತ್ತು ಸಮುದಾಯ ಮುಂದಾಗಬೇಕು ಎಂದು ಕೂಡ್ಲಿಗಿಯ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಕರೆ ನೀಡಿದರು.
ಬಲವಂತ ಬಹರಿ ಬಹಾದ್ಧೂರು ಸಂಸ್ಥಾನ ಸುರಪುರದ ವಂಶಸ್ಥ ರಾಜಾ ಕೃಷ್ಣಪ್ಪ ನಾಯಕ ಪುಸ್ತಕ ಬಿಡುಗಡೆಗೊಳಿಸಿ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ, ಪುಸ್ತಕಗಳಿಂದ ಆಯಾ ಕಾಲದ ಘಟನೆಗಳು ಜನರ ಜೀವನ ಶೈಲಿ, ಪರಿಸರ ಸೇರಿದಂತೆ ವೈವಿಧ್ಯಮಯ ಸಂಗತಿಗಳನ್ನು ತಿಳಿಯುವ ಹಾಗೂ ಜೀವನ ಶೈಲಿಯನ್ನು ಅರಿತುಕೊಳ್ಳಲು ಸಹಾಯಕ. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಗ್ರಂಥಾಲಗಳು ಓದುಗರಿಗೆ ಪುಸ್ತಕಗಳನ್ನು ತಲುಪಿಸಲು ನೆರವಾಗಬೇಕು ಎಂದು ಆಶಿಸಿದರು.
ಲೇಖಕಿ ಡಾ.ಸುಜಾತ ಅಕ್ಕಿ, ರಂಗ ಕಲಾವಿದ ಜೆ.ಯೋಗಾನಂದ, ಸಾಹಿತಿಗಳಾದ ಮೇಟಿ ಕೊಟ್ರಪ್ಪ, ಹುರುಕಡ್ಲಿ ಶಿವಕುಮಾರ ಮಾತನಾಡಿದರು. ಸಮಾರಂಭದಲ್ಲಿ ಕಲಾವಿದರಾದ ವೈ.ಗುರುಬಸವರಾಜ, ಕೆ.ರೋಹಿತ್, ಜಿ.ತೋಟಪ್ಪ, ಹುಗ್ಗಿ ಸೋಮಪ್ಪ, ಮೊರಗೆರೆ ವಿರುಪಾಕ್ಷಪ್ಪನವರಿಗೆ ಸನ್ಮಾನಿಸಲಾಯಿತು.ರಾಜನಹಳ್ಳಿ ವಾಲ್ಮಿಕಿ ಗುರುಪೀಠದ ಪ್ರಸನ್ನಾನಂದ ಪುರಿ ಮಹಾ ಸ್ವಾಮಿಗಳು ಸಮಾರಂಭದ ಸಾನಿಧ್ಯವನ್ನು ಮತ್ತು ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಪವಾಡಿ ಹನಮಂತಪ್ಪ ವಹಿಸಿದ್ದರು.
ಸಂಗೀತ ಶಿಕ್ಷಕಿ ಶಾರದ ಮಂಜುನಾಥ ಪ್ರಾರ್ಥಿಸಿದರು, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಟಿ.ಸೋಮಶೇಖರ, ಶಿಕ್ಷಕ ಟಿ.ಮಾರುತಿ, ಯು.ರಾಮಕೃಷ್ಣ, ಎನ್.ಸುರೇಶ, ಚಂದ್ರಾಮಪ್ಪ ನಿರ್ವಹಿಸಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಹಾಗೂ ಜ್ಯೋತಿವೃಂದ ಪದಾಧಿಕಾರಿಗಳು ಭಾನುವಾರ ಜೋಗಿನಕಟ್ಟಿ ಜಂಗಮ ಪುಸ್ತಕ ಬಿಡುಗಡೆ ಮಾಡಿದರು.