-ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ । ನಾಟಕೋತ್ಸವ
---ಕನ್ನಡಪ್ರಭ ವಾರ್ತೆ ಯಾದಗಿರಿ
ಇತ್ತೀಚಿನ ದಿನಗಳಲ್ಲಿ ಜನರಿಗೆ ನಾಟಕಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ನಶಿಸಿ ಹೋಗುತ್ತಿರುವ ರಂಗಭೂಮಿ ನಾಟಕಗಳನ್ನು ಉಳಿಸಿ, ಬೆಳಸಬೇಕಾಗಿದೆ ಎಂದು ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು.ಸಮೀಪದ ಅಬ್ಬೆತುಮಕೂರಿನಲ್ಲಿ ಬುಧವಾರ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತ, ಜನರಿಗೆ ಈಗ ಟಿವಿ ಮಾಧ್ಯಮದ ಅಭಿರುಚಿ ಹೆಚ್ಚಾಗಿ ನಾಟಕಗಳ ಆಸಕ್ತಿ ಇಲ್ಲವಾಗಿದೆ. ಹೀಗಾಗಿ ರಂಗಭೂಮಿಯ ನಾಟಕಗಳು ಮರೆಯಾಗಿ ಹೊಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ನಾಟಕಗಳ ಪ್ರದರ್ಶನಗಳು ತುಂಬಾ ಕಡಿಮೆಯಾಗಿ ಕಲಾವಿದರ ಬದುಕು ಶೋಚನೀಯವಾಗಿದೆ. ಅದಕ್ಕಾಗಿ ನಾಟಕ ಕಲೆಯನ್ನು ಉಳಿಸಲು ಮತ್ತು ಜನರಲ್ಲಿ ಆಸಕ್ತಿಯನ್ನು ಮೂಡಿಸಲು ಈ ಬಾರಿ ಜಾತ್ರಾ ಮಹೊತ್ಸವದಲ್ಲಿ ಮೂರು ದಿನಗಳ ಕಾಲ ರಂಗಭೂಮಿಯ ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಠದ ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರು ಮಾತನಾಡಿ, ಮನುಷ್ಯರ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ನಿರ್ಮಾಣದಲ್ಲಿ ರಂಗಭೂಮಿಯ ಪಾತ್ರ ಅತ್ಯಂತ ಮುಖ್ಯವಾದದು. ಅದಕ್ಕಾಗಿ ರಂಗಭೂಮಿ ಕಲಾವಿದರು ಅಭಿನಯಿಸುವ ನಾಟಕಗಳನ್ನು ತಪ್ಪದೇ ನೋಡಬೇಕೆಂದು ಹೇಳಿದರು.ಡಾ. ಸಿ. ಎಂ. ಪಾಟೀಲ್ ಮಾತನಾಡಿ, ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿಗಳ ಸಂಕಲ್ಪ ಶಕ್ತಿಯಿಂದ ಪ್ರವರ್ಧಮಾನಗೊಳ್ಳುತ್ತಿದೆ. ಡಾ. ಗಂಗಾಧರ ಸ್ವಾಮಿಗಳ ನೇತೃತ್ವದಲ್ಲಿ ಅಲ್ಪ ಅವಧಿಯಲ್ಲಿಯೇ ಕಲ್ಪತರುವಿನಂತೆ ಶ್ರೀಮಠ ಬೆಳೆದು ನಿಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ವೀರೇಶ ಜಾಕಾ ಮತ್ತು ಬಸ್ ಡಿಪೋ ಮ್ಯಾನೇಜರ್ ಶಶಾಂಕ ಬಾಬು ಮಾತನಾಡಿದರು. ಬಸ್ಸುಗೌಡ ಬಿಳ್ಹಾರ, ಡಾ. ಮಹಾದೇವರೆಡ್ಡಿ ಗೌಡರೆಡ್ಡಿ ಬಿಳ್ಹಾರ ಮತ್ತು ಡಾ. ಸುಭಾಶ್ಚಂದ್ರ ಕೌಲಗಿ ವೇದಿಕೆಯಲ್ಲಿದ್ದರು. ನಂತರ ನಾಲತವಾಡದ ವೀರೇಶ್ವರ ನಾಟ್ಯ ಸಂಘದ ನುರಿತ ಕಲಾವಿದರಿಂದ “ಕಿವುಡ ಮಾಡಿದ ಕಿತಾಪತಿ” ನಾಟಕ ಪ್ರದರ್ಶನಗೊಂಡಿತು.----
7ವೈಡಿಆರ್4: ಯಾದಗಿರಿ ಸಮೀಪದ ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ನಾಟಕೋತ್ಸವವನ್ನು ಉದ್ಘಾಟಿಸಲಾಯಿತು.