ಕನ್ನಡಪ್ರಭ ವಾರ್ತೆ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ರೈತ ಸಂಪರ್ಕ ಕೇಂದ್ರದ ಕೊಠಡಿ ಕಿಟಕಿ ರಾಡ್ ಮುರಿದು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕೃಷಿ ಪರಿಕರಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಮಂಗಳವಾರ ನಡೆದಿದೆ.ಮಲ್ಲಿಪಟ್ಟಣ ಹೋಬಳಿ ಕೇಂದ್ರದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಹೋಬಳಿ ರೈತರಿಗೆ ಪೂರಕವಾದ ಕೃಷಿ ಪರಿಕರಗಳನ್ನು ದಾಸ್ತಾನು ಮಾಡಲಾಗಿತ್ತು. ಮಂಗಳವಾರ ಬೆಳಿಗ್ಗೆ ಕಚೇರಿ ಬಾಗಿಲು ತೆರೆದು ನೋಡಿದ ವೇಳೆ ಕೃಷಿ ಪರಿಕರಗಳು ಚೆಲ್ಲಾಪಿಲ್ಲಿ ಆಗಿರುವುದಲ್ಲದೆ ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಸಿಬ್ಬಂದಿ ಬಳಕೆ ಮಾಡುವ ಟೇಬಲ್ ಕುರ್ಚಿಗಳ ಮೇಲೆ ಔಷಧಿಗಳನ್ನು ಎರಚಿ ಕಳ್ಳರು ಕೌರ್ಯ ಮೆರೆದಿದ್ದಾರೆ. ನಂತರ ದಾಸ್ತಾನು ಪರಿಶೀಲನೆ ನಡೆಸುವ ವೇಳೆ ವರದ ಸಂಸ್ಥೆಯ 3305 ನಂಬರಿನ ಬಿತ್ತನೆ ಮುಸುಕಿನ ಜೋಳದ ಒಟ್ಟು 775 ಕೇಜಿ ತೂಕವುಳ್ಳ ಚೀಲಗಳು, 50 ಕೇಜಿ ತೂಕದ ಔಷಧ ಬಾಕ್ಸ್ ಹಾಗೂ 18 ಕೇಜಿ ತೂಕದ ಸಸ್ಯ ಸಂರಕ್ಷಣಾ ಔಷಧಿಗಳನ್ನು ಮಾತ್ರ ಕಳ್ಳರು ಕದ್ದೊದಿದ್ದಾರೆ. ಅಲ್ಲದೆ ಹಾರೆ ಗುದ್ದಲಿಗಳನ್ನು ಕಿಟಕಿಯ ಹೊರಭಾಗಕ್ಕೆ ಎಸೆದು ದಾಂಧಲೆ ನಡೆಸಿದ್ದಾರೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕವಿತಾ ಅವರು ಮಾಹಿತಿ ನೀಡಿದರು.ರೈತರಿಗೆ ವಿತರಿಸಬೇಕಾಗಿರುವ ಬಿತ್ತನೆ ಬೀಜಗಳಾದ ಭತ್ತ, ಮುಸುಕಿನ ಜೋಳ, ದ್ವಿದಳ ಧಾನ್ಯ, ಹಾರೆ, ಗುದ್ದಲಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳರು ಕಳವು ಮಾಡಿಲ್ಲ ಆದರೆ ಅವುಗಳ ಮೇಲೆ ಔಷಧಗಳನ್ನು ಎರಚಿ ಹಾನಿಗೊಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಇದುವರೆಗೂ ಕೂಡ ತಾಲೂಕು ಕೇಂದ್ರ ಸೇರಿದಂತೆ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಇಂತಹ ಪ್ರಕರಣಗಳು ನಡೆದಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ರೈತ ಸಂಪರ್ಕ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಮಲ್ಲಿಪಟ್ಟಣ ರೈತ ಸಂಪರ್ಕ ಕೇಂದ್ರದ ಗಾಜಿನ ಕಿಟಕಿಗಳನ್ನು ಭದ್ರ ಪಡಿಸುವ ಕೆಲಸವನ್ನು ಸಹ ತ್ವರಿತವಾಗಿ ನಿರ್ವಹಿಸಲಾಗುವುದು ಎಂದು ಅವರು ತಿಳಿಸಿದರು.