ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಕಳೆದ ವಾರ ಪಟ್ಟಣದಲ್ಲಿ ಕಳ್ಳತನ ಮಾಡಿದ ಮೂವರನ್ನು ಬಂಧಿಸಿ ಅವರಿಂದ 10.18 ಲಕ್ಷ ಮೌಲ್ಯದ ವಸ್ತುಗಳನ್ನು ಇಲ್ಲಿಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಹೊಸಪೇಟೆಯ ಮಣಿ ಅಲಿಯಾಸ್ ಮಣಿಕಂಠ(20), ಚಂದ್ರಶೇಖರ ಅಲಿಯಾಸ್ ಕುಂಟ ಚಂದ್ರ(20), ಭೀಮ ಅಲಿಯಾಸ್ ಭೀಮೇಶ(19) ಬಂಧಿತ ಕಳ್ಳತನ ಆರೋಪಿಗಳು.
ಮೇಲಿನ ಆರೋಪಿತರಿಂದ 80 ಗ್ರಾಂ ಬಂಗಾರದ ಆಭರಣಗಳು, 80 ಗ್ರಾಮ ಬೆಳ್ಳಿಯ ಆಭರಣಗಳು, 1.40 ಲಕ್ಷ ನಗದು ಹಣ, ಕಳ್ಳತನ ಮಾಡಲು ಬಳಸಿದ ಕಾರು ಸೇರಿದಂತೆ ಒಟ್ಟು 10.18 ಲಕ್ಷ ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರತ್ಯೇಕ ಪ್ರಕರಣಃ ಇಬ್ಬರ ಬಂಧನ:
ತಾಲೂಕಿನ ನಜೀರ ನಗರದ ಮನೆಯೊಂದರಲ್ಲಿ ಎ.29 ರಂದು ರಾತ್ರಿ ಬೀಗ ಮುರಿದು ಮಾಡಿದ ಕಳ್ಳತನ ಹಾಗೂ ಎ.28 ರಂದು ಹನುಮನಹಳ್ಳಿ ಗ್ರಾಮದ ಮನೆಯಲ್ಲಿ ನಡೆದ ಕಳ್ಳತನ ಹೀಗೆ ಎರಡು ಪ್ರತ್ಯೇಕ ಕಳ್ಳತನಕ್ಕೆ ಸಂಬಂಧ ಪಟ್ಟಂತೆ ಅರಸೀಕೆರೆ ಹಾಗೂ ಚಿಗಟೇರಿ ಪೋಲೀಸ್ ಠಾಣೆಯ ಪಿಎಸ್ ಐಗಳು ಕಾರ್ಯಚರಣೆ ನಡೆಸಿ ಎರಡೂ ಪ್ರಕರಣಗಳನ್ನು ಭೇದಿಸಿದ್ದು, ಅರಸೀಕೆರೆ ಪಿಎಸ್ ಐ ದಾವಣಗೆರೆ ತಾಲೂಕಿನ ಕಾಡಜ್ಜಿ ಗ್ರಾಮದ ಮುಬಾರಕ್ ಅಲಿ(18) ಹಾಗೂ ಮನೋಜ ಅಲಿಯಾಸ್ ಕ್ರೇಜಿ (22) ಬಂಧಿತರು.ಅವರಿಂದ ಕೃತ್ಯಕ್ಕೆ ಬಳಸಿದ ಡಿಯೊ ಸ್ಕೂಟಿ ಸೇರಿದಂತೆ 17 ಗ್ರಾಂ ಬಂಗಾರದ ಆಭರಣ, 112 ಗ್ರಾಮ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು 1.78 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಎಲ್ಲಾ ಪ್ರಕರಣ ಸೇರಿ ಐದು ಜನ ಕಳ್ಳರ ಬಂಧನ ಹಾಗೂ 11.96 ಲಕ್ಷ ಮೌಲ್ಯದ ವಸ್ತುಗಳ ವಶ ಪಡೆಯಲಾಗಿದೆ.ಆರೋಪಿತರ ಪತ್ತೆ ಮಾಡಲು ಎಸ್ಪಿ ಶ್ರೀಹರಿಬಾಬು, ಹೆಚ್ಚುವರಿ ಎಸ್ಪಿ ಸಲೀಂ ಪಾಷ, ಸ್ಥಳೀಯ ಡಿವೈಎಸ್ಪಿ ವೆಂಕಟಪ್ಪ ನಾಯಕ ರವರ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಸಿಪಿಐ ಮಹಾಂತೇಶ ಜಿ.ಸಜ್ಜನ ನೇತೃತ್ವದಲ್ಲಿ ಹರಪನಹಳ್ಳಿ ಪಿಎಸ್ಐ ಶಂಭುಲಿಂಗಹಿರೇಮಠ, ಅರಸೀಕೆರೆ ಪಿಎಸ್ಐ ರಂಗಯ್ಯ, ಚಿಗಟೇರಿ ಪಿಎಸ್ಐ ನಾಗರತ್ನ ಹಾಗೂ ಸಿಬ್ಬಂದಿ ಮುಬಾರಕ್, ರವಿದಾದಾಪುರ, ಮಾಲತೇಶ ಬಳಿಚೋಡು, ಆನಂದ, ನಾಗರಾಜ, ವೀರಯ್ಯ, ಎಚ್.ನಟರಾಜ, ದಾದಾಪೀರ, ಗುರುರಾಜ, ಹರೀಶ, ಕುಮಾರನಾಯ್ಕ, ಕೊಟ್ರೇಶ, ಮೂರು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿಯ ಪೋಲೀಸ್ ತಂಡದ ಕಾರ್ಯವನ್ನು ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿಬಾಬು ಶ್ಲಾಘಿಸಿದ್ದಾರೆ.