ಪ್ರತಿಭೆಗಳ ಅನಾವರಣಕ್ಕೆ ಹಲವು ಅವಕಾಶಗಳಿವೆ: ನವೀನ್‌ ಸಜ್ಜು

KannadaprabhaNewsNetwork |  
Published : Apr 16, 2026, 01:15 AM IST
3 | Kannada Prabha

ಸಾರಾಂಶ

ಪ್ರಸ್ತುತ ಪ್ರತಿಭೆಗಳಿಗೆ ಸಾಕಷ್ಟು ವೇದಿಕೆಗಳು ಸಜ್ಜಾಗಿವೆ. ಅವಕಾಶಗಳಿಗೆ ಹುಡುಕುವ ಅಗತ್ಯವಿಲ್ಲ, ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ನಮ್ಮ ಮುಂದಿವೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ಪ್ರದರ್ಶಿಸುವ ಕಲೆ, ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳುವ ಸದಾವಕಾಶಗಳಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಪಂಚ ವಿಶಾಲವಾಗಿದ್ದು, ಪ್ರತಿಭೆಗಳ ಅನಾವರಣಕ್ಕೆ ಒಳ್ಳೆಯ ವೇದಿಕೆಗಳು ಸೃಷ್ಟಿಯಾಗುತ್ತಿವೆ ಎಂದು ಚಲನಚಿತ್ರ ಗಾಯಕ ಹಾಗೂ ನಟ ನವೀನ್‌ ಸಜ್ಜು ಹೇಳಿದರು.

ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ವೇದಿಕೆ 2025- 26ರ ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ಎನ್‌.ಸಿ.ಸಿ ರೇಂಜರ್ಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿ ಸಾಧಕರಿಗೆ ಕೊರತೆ ಇಲ್ಲ, ಸಾಧನೆ ಗುರಿ ನಮ್ಮದಾಗಬೇಕು. ನನ್ನ ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುವುದರ ಮೂಲಕ ಹಲವು ಬಹುಮಾನ ಪಡೆಯುತ್ತಿದ್ದೆ. ಅದೊಂದೆ ನನ್ನ ಧ್ಯೇಯವಾಗಿತ್ತು. ಪೋಷಕರು ಹಾಡುಗಾರಿಕೆ ಜೀವನ ರೂಪಿಸದು, ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತಿದ್ದರು. ಹಾಡುಗಾರಿಕೆಯನ್ನೇ ಉಸಿರಾಗಿಸಿಕೊಂಡ ನನಗೆ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಸ್ತುತ ಪ್ರತಿಭೆಗಳಿಗೆ ಸಾಕಷ್ಟು ವೇದಿಕೆಗಳು ಸಜ್ಜಾಗಿವೆ. ಅವಕಾಶಗಳಿಗೆ ಹುಡುಕುವ ಅಗತ್ಯವಿಲ್ಲ, ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ನಮ್ಮ ಮುಂದಿವೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ಪ್ರದರ್ಶಿಸುವ ಕಲೆ, ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳುವ ಸದಾವಕಾಶಗಳಿದ್ದು, ಈ ಮೂಲಕ ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಳ್ಳುವ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು.

ಬಳಿಕ ವಿದ್ಯಾರ್ಥಿನಿಯರನ್ನು ರಂಜಿಸಲು ತಮ್ಮ ಗಾಯನದ ಜನಪ್ರಿಯ ಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ವಿದ್ಯಾರ್ಥಿನಿಯರು ಶಿಳ್ಳೆ, ಚಪ್ಪಾಳೆ ನೀಡಿ ಹಾಡಿಗೆ ಹೆಜ್ಜೆ ಹಾಕಿದರು.

ನವೀನ್ ಸಜ್ಜು ಅವರ ನಟನೆಯ ಮೇ 15 ರಂದು ರಾಜ್ಯಾದಂತ ಬಿಡುಗಡೆಗೊಳ್ಳುವ ಹಳ್ಳಿ ಸೊಗಡಿನ ಕಥೆಯುಳ್ಳ ಲೋ..ನವೀನ ಚಲನಚಿತ್ರದ ಗೀತೆಗಳನ್ನು ಹಾಡಿ, ಚಿತ್ರಮಂದಿರಲ್ಲಿ ಸಿನಿಮಾ ನೋಡುವಂತೆ ತಿಳಿಸಿದರು.

ಮೈಸೂರು-ಮಡಿಕೇರಿ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಆರ್. ಶೈಲಜಾ ಮಾತನಾಡಿ, ಮಹಾರಾಣಿ ಕಾಲೇಜು ಅಸ್ಮಿತೆಯಿದ್ದಂತೆ. ಈವರೆಗೆ ಲಕ್ಷಾಂತರ ವಿದ್ಯಾರ್ಥಿನಿಯರು ಇಲ್ಲಿ ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಸಾಕಷ್ಟು ಮಹಿಳೆಯರು ಸಮಾಜಕ್ಕೆ ಬೆಳಕಾಗಿದ್ದಾರೆ ಎಂದರು.

ಕಾಲೇಜು ಶಿಕ್ಷಣ ವಿಭಾಗ ಮೈಸೂರು ಪ್ರಾದೇಶಿಕ ಜಂಟಿ ನಿರ್ದೇಶಕಿ ಪ್ರೊ.ಡಿ.ಎಸ್. ಪ್ರತಿಮಾ, ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ಎಂ.ಎಸ್. ಅನಿತಾ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಡಾ.ಕೆ.ಎಸ್. ಭಾಸ್ಕರ್, ಖಜಾಂಚಿ ಡಾ.ಟಿ. ನಾಗವೇಣಿ, ಐಕ್ಯೂಎಸಿ ಸಂಚಾಲಕ ಪ್ರೊ.ಎ. ಆನಂದ್, ಪತ್ರಾಂಕಿತ ವ್ಯವಸ್ಥಾಪಕ ಕೆ. ವೆಂಕಟೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ವರದಾನ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆರೆಗಳ ಪಾತ್ರ ಅತಿಮುಖ್ಯ