ಜಗತ್ತಿನಲ್ಲಿ ಮಹಿಳೆಯಿಲ್ಲದ ಕ್ಷೇತ್ರಗಳಿಲ್ಲ: ಮಂಜುನಾಥ ಉಪ್ಪಾರ

KannadaprabhaNewsNetwork | Published : Mar 13, 2025 12:48 AM

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಪುರುಷನಿಗೆ ಸಮನಾಗಿ ಬಹಳಷ್ಟು ಕ್ಷೇತ್ರದಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದಾರೆ. ಮಹಿಳೆ ಇಲ್ಲದೇ ಎಲ್ಲ ಕ್ಷೇತ್ರಗಳು ಅಪೂರ್ಣ ಎನಿಸುವಷ್ಟು ಮಹಿಳೆ ಅನಿವಾರ್ಯವಾಗಿದ್ದಾಳೆ.

ಬ್ಯಾಡಗಿ: ಪಿತೃ ಪ್ರಧಾನ ಕೌಟುಂಬಿಕ ವ್ಯವಸ್ಥೆ ಮಹಿಳೆಯರನ್ನು ಹೊರಬರಲಾರದಂತೆ ನಿರ್ಬಂಧಿಸಿರಬಹುದು. ಆದರೆ ಇದು ಮಹಿಳೆಯ ಬಲಹೀನತೆಯಲ್ಲ. ಪ್ರಸ್ತುತ ಜಗತ್ತಿನಲ್ಲಿ ಆಕೆಯಿಲ್ಲದ ಕ್ಷೇತ್ರಗಳಿಲ್ಲ ಎಂದು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ತಿಳಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶ್ರೀ ಭಗೀರಥ ಉಪ್ಪಾರ ಸಮಾಜ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಪುರುಷನಿಗೆ ಸಮನಾಗಿ ಬಹಳಷ್ಟು ಕ್ಷೇತ್ರದಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದಾರೆ. ಮಹಿಳೆ ಇಲ್ಲದೇ ಎಲ್ಲ ಕ್ಷೇತ್ರಗಳು ಅಪೂರ್ಣ ಎನಿಸುವಷ್ಟು ಮಹಿಳೆ ಅನಿವಾರ್ಯವಾಗಿದ್ದಾಳೆ. ಆದ್ದರಿಂದ ಮಹಿಳೆಯರಿಗೆ ಅರ್ಹ ಬೆಂಬಲ ಮತ್ತು ಮೆಚ್ಚುಗೆ ಸಿಗಲಿ ಎಂದರು.

ಈ ವೇಳೆ ಪಟ್ಟಣದಲ್ಲಿ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ 5 ಸಾವಿರ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಸಂಧ್ಯಾರಾಣಿ ದೇಶಪಾಂಡೆ, ಲಕ್ಷ್ಮೀ ಉಪ್ಪಾರ, ಶೋಭಾ ನೋಟದ, ಡಾ. ಪವಿತ್ರಾ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಗೀತಾ ಕಬ್ಬೂರ, ಚಂದ್ರು ರೋಣದ, ಬಸವರಾಜ ಬಡಗಡ್ಡಿ, ಭರತ ಉಪ್ಪಾರ, ಸಂತೋಷ ಸಿಂದೋಗಿ, ಶೈಲಜ ರೋಣದ, ನಾಗಮ್ಮ ಕೋರಿ, ದೀಪಾ ಉಪ್ಪಾರ, ಪ್ರೀತಿ ರೋಣದ ಸೇರಿದಂತೆ ಉಪ್ಪಾರ ಸಮಾಜದ ಹಿರಿಯರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರಸ್ವತಿ ಉಪ್ಪಾರ ನಿರೂಪಿಸಿದರು. ಶಿವಬಸಪ್ಪ ಉಪ್ಪಾರ ಸ್ವಾಗತಿಸಿದರು. ಲಿಂಗರಾಜ ಹರ್ಲಾಪುರ ವಂದಿಸಿದರು. ಪರಿಸರ ಹಾಳು ಮಾಡಿದರೆ ವಿನಾಶ ಗ್ಯಾರಂಟಿ

ಹಾನಗಲ್ಲ: ಪರಿಸರ ಹಾಳು ಮಾಡಿದ ಮನುಷ್ಯನೇ ಭೂಮಿಯನ್ನು ಅಪಾಯದಂಚಿನಿಂದ ಹಿಂದೆ ಸರಿಸದಿದ್ದರೆ ಪ್ರಾಕೃತಿಕ ಸಮಸ್ಯೆಗಳ ಶಾಪಕ್ಕೊಳಗಾಗಿ ವಿನಾಶದ ಕಾಲಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಹಾವೇರಿ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ದೀಪಕ್ ಕೊಲ್ಲಾಪುರೆ ತಿಳಿಸಿದರು.

ಇಲ್ಲಿನ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಯದ ಭೂಗೋಳಶಾಸ್ತ್ರ ವಿಭಾಗದಲ್ಲಿ ಏರ್ಪಡಿಸಿದ ಹಾವೇರಿ ವಿಶ್ವವಿದ್ಯಾಲಯ ಮಟ್ಟದ ಜಾಗತಿಕ ತಾಪಮಾನ- ಭೌಗೋಳಿಕ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಾನವನ ಆಧುನಿಕತೆಯ ಪರಿಣಾಮವಾಗಿ ವಾಯುಮಂಡಲದ ಅನಿಲಗಳಾದ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮೊನಾಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್, ಸಾರಜನಕದ ಆಕ್ಸೈಡ್‌ಗಳು, ಕ್ಲೋರೋ ಪ್ಲೋರೋಕಾರ್ಬನ್ಸ್ ಹಾಗೂ ಇತರ ವಿಷಕಾರಕ ಅನಿಲಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ಭೂಮಂಡಲದ ಉಷ್ಣಾಂಶ ಸರಾಸರಿಗಿಂತ ಸುಮಾರು 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದಕ್ಕೆ ಪರಿಹಾರವಾಗಿ ಕಾಡಿನ ಸಂರಕ್ಷಣೆ ಮಾಡಿ, ಬೀಳು ಭೂಮಿಯನ್ನು ಸಸ್ಯಗಳಿಂದ ಆವೃತ ಮಾಡಿದಾಗ ಭೂಮಿಯ ಜಲಾಂಶ ಹೆಚ್ಚಾಗಿ ಭೂ ತಾಪಮಾನ ಕಡಿಮೆ ಮಾಡಬಹುದು ಎಂದರು.ಕಾರ್ಯಾಗಾರ ಸಂಯೋಜಕ ಡಾ. ಪ್ರಕಾಶ ಹೊಳೇರ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ.ಎಚ್. ಹೊಳಿಯಣ್ಣನವರ ಮಾತನಾಡಿದರು. ಅತಿಥಿಗಳಾಗಿ ಹಾವೇರಿಯ ಜಿ.ಎಚ್. ಕಾಲೇಜಿನ ಪ್ರಾಧ್ಯಾಪಕ ಪ್ರೊ. ಬಿ.ಎನ್. ಎಲಿಗಾರ, ರಾಣಿಬೆನ್ನೂರಿನ ಆರ್‌ಟಿಇಎಸ್ ಕಾಲೇಜಿನ ಪ್ರೊ. ಬಿ.ಎಂ. ಇಂಗಳಗಿ, ಹಂಸಭಾವಿ ಎಂಎಎಸ್‌ಸಿ ಕಾಲೇಜಿನ ಡಾ. ವಿ.ಎಸ್. ದಾನೇನವರ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಭೀಮಮ್ಮ ಪ್ರಾರ್ಥಿಸಿದರು. ಉಪನ್ಯಾಸಕಿ ಸುಚಿತ್ರ ಅಂಬಿಗ ಸ್ವಾಗತಿಸಿದರು. ಸುಶೀಲಾ ಬಡಿಗೇರ ನಿರೂಪಿಸಿದರು. ಸುಷ್ಮಾ ವಂದಿಸಿದರು.