ನರಗುಂದ: ಮನುಷ್ಯ ತಾನು ಸಮಾಜದಲ್ಲಿ ಸರಳತೆ, ವಿನಯ, ಶ್ರದ್ಧೆಯಿಂದ ಜೀವನ ನಡೆಸಿದರೆ, ಅವನ ಜೀವನ ಪಾವನವಾಗುತ್ತದೆ ಎಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು. ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ 27ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಸೇವಿಸುವ ಕಾರಕ್ಕೂ ಮತ್ತು ಅಹಂಕಾರಕ್ಕೆ ಬಹಳ ವ್ಯತ್ಯಾಸವಿದೆ, ಕಾರವನ್ನು ಬಹಳ ಸೇವನೆ ಮಾಡಿದರೆ ನಾವು ನೀರು ಕುಡಿಯಬೇಕಾಗುತ್ತದೆ. ಸಮಾಜದಲ್ಲಿ ನಾವು ಬಹಳ ಅಹಂಕಾರದಿಂದ ನಡೆದುಕೊಂಡರೆ ನಮಗೆ ಜನರೇ ಬುದ್ಧಿ ಕಲಿಸುವರೆಂದು ಹೇಳಿದರು.
ಕಲ್ಯಾಣ ನಾಡಿನಲ್ಲಿ ನಮ್ಮ ಹಲವಾರು ಸಮುದಾಯದ ಶರಣರು ಅನುಭವ ಮಂಟಪದಲ್ಲಿ ಬಸವಣ್ಣವರ ಅಧ್ಯಕ್ಷತೆಯಲ್ಲಿ ಸಾವಿರಾರು ವಚನಗಳನ್ನು ಈ ಸಮಾಜದ ಸುಧಾರಣೆಗೆ ರಚನೆ ಮಾಡಿದ್ದಾರೆ. ಆದ್ದರಿಂದ ನಾವು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಈ ಸಮಾಜದ ಅಭಿವೃದ್ಧಿಗೆ ಮುಂದಾಗೋಣ. ಧರ್ಮ, ಸಂಸ್ಕೃತಿ ನಮ್ಮನ್ನು ಕಾಪಾಡುತ್ತದೆ. ಉತ್ತಮ ನಡೆ ನುಡಿಗಳನ್ನು ಅಳವಡಿಸಿಕೊಂಡಿರೆ ಮಾತ್ರ ಮನುಷ್ಯನಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುವದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಯೋಗ ಮಂದಿರದ ಅಧ್ಯಕ್ಷರು, ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ಶೆಲ್ಲಿಕೇರಿ, ನಾಗನಗೌಡ ತಿಮ್ಮನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ. ನದಾಫ, ನಾಗಲೋಟಿಮಠ, ಹನಮಂತ ಕಾಡಪ್ಪನವರ, ಪ್ರಾಚಾರ್ಯ ಬಿ.ಆರ್. ಸಾಲಿಮಠವರು ಇದ್ದರು.