ಶಿಕಾರಿಪುರ: ಯಡಿಯೂರಪ್ಪನವರನ್ನು ಕನ್ನಡದ ಮುಖ್ಯಮಂತ್ರಿ ಎಂದು ರಾಜ್ಯದ ಜನತೆ ಅಭಿಮಾನದಿಂದ ಸ್ಮರಿಸುವಂತಹ ಹಲವು ಕ್ರಾಂತಿಕಾರಕ ಕನ್ನಡಪರ ನಿರ್ದಾರಗಳನ್ನು ಕೈಗೊಂಡಿದ್ದಾರೆ ಎಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿಜಯೇಂದ್ರ ಇತ್ತೀಚೆಗೆ ಹೇಳಿದ್ದರು. ಆದರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕನಿಷ್ಠ ಕನ್ನಡ ದ್ವಜಸ್ತಂಭವಿಲ್ಲ. ಜತೆಗೆ ಹಲವು ಸಮಸ್ಯೆಯಿಂದ ಜನತೆ ಪರಿತಪಿಸುವಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಗೌರವಾದ್ಯಕ್ಷ ಶಿವಯ್ಯ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಿ ಮತ್ತು ಕನ್ನಡ ಧ್ವಜಸ್ತಂಭವನ್ನು ಪ್ರಮುಖ ಸ್ಥಳದಲ್ಲಿ ನಿರ್ಮಿಸುವ ಮೂಲಕ ಕನ್ನಡದ ಮುಖ್ಯಮಂತ್ರಿ ಎಂಬ ಹಿರಿಮೆಯನ್ನು ಸ್ವಕ್ಷೇತ್ರದಲ್ಲಿ ಸಾಬೀತುಪಡಿಸುವಂತೆ ತಿಳಿಸಿದರು.
ಬಸ್ ನಿಲ್ದಾಣದಲ್ಲಿನ ಸಮಸ್ಯೆ ಹಾಗೂ ದ್ವಜಸ್ತಂಭ ನಿರ್ಮಾಣದ ಬಗ್ಗೆ ತಾ.ಆಡಳಿತ ಪುರಸಭೆ ಮತ್ತಿತರ ಸಂಬಂದಿಸಿದ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದು ನಿಶ್ಚಿತ ಎಂದು ಎಚ್ಚರಿಸಿದರು.ಖಾಸಗಿ ಬಸ್ ನಿಲ್ದಾಣದಲ್ಲಿ ಗುಟ್ಕಾ, ಅಡಕೆ, ತಂಬಾಕು ಮತ್ತಿತರ ಪದಾರ್ಥ ಉಗಿದು ಮಾಲಿನ್ಯ ಉಂಟುಮಾಡುವುದನ್ನು ತಡೆಗಟ್ಟಲು ನಿತ್ಯ ಅವಿರತವಾಗಿ ಶ್ರಮಿಸಿ ಜಾಗೃತಿ ಮೂಡಿಸುತ್ತಿರುವ ನಿವೃತ್ತ ಮುಖ್ಯ ಶಿಕ್ಷಕ ದುರ್ಗಪ್ಪನವರ ಜನಪರ ಕಾಳಜಿಗೆ ಸಂಘಟನೆ ಅಭಿನಂದಿಸುತ್ತದೆ ಎಂದು ತಿಳಿಸಿದರು.
ಸಂಘಟನೆ ಅಧ್ಯಕ್ಷ ಆನಂದ,ನಗರ ಗೌರವಾಧ್ಯಕ್ಷ ಮುಕ್ತಿಯಾರ್ ಅಹಮದ್,ಆನಂದ ಎಚ್,ನಗರಾಧ್ಯಕ್ಷ ರವೀಂದ್ರ ಕುಮಾರ್ ಮತ್ತಿತರರು ಹಾಜರಿದ್ದರು.