ಶಿಕಾರಿಪುರ: ಯಡಿಯೂರಪ್ಪನವರನ್ನು ಕನ್ನಡದ ಮುಖ್ಯಮಂತ್ರಿ ಎಂದು ರಾಜ್ಯದ ಜನತೆ ಅಭಿಮಾನದಿಂದ ಸ್ಮರಿಸುವಂತಹ ಹಲವು ಕ್ರಾಂತಿಕಾರಕ ಕನ್ನಡಪರ ನಿರ್ದಾರಗಳನ್ನು ಕೈಗೊಂಡಿದ್ದಾರೆ ಎಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿಜಯೇಂದ್ರ ಇತ್ತೀಚೆಗೆ ಹೇಳಿದ್ದರು. ಆದರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕನಿಷ್ಠ ಕನ್ನಡ ದ್ವಜಸ್ತಂಭವಿಲ್ಲ. ಜತೆಗೆ ಹಲವು ಸಮಸ್ಯೆಯಿಂದ ಜನತೆ ಪರಿತಪಿಸುವಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಗೌರವಾದ್ಯಕ್ಷ ಶಿವಯ್ಯ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದೇ ನ.1 ರಂದು ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿಜಯೇಂದ್ರ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅತಿ ಹೆಚ್ಚು ಅನುದಾನ, ಕನ್ನಡ ಬಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಹಿತ ಕನ್ನಡ ಬಾಷೆ ನಾಡು ನುಡಿ ನೆಲ ಜಲದ ಹಿರಿಮೆ ಹೆಚ್ಚಳಕ್ಕಾಗಿ ಹಲವು ಕ್ರಾಂತಿಕಾರಕ ನಿಲುವು ಕೈಗೊಂಡ ಪರಿಣಾಮ ರಾಜ್ಯದ ಜನತೆ ಕನ್ನಡದ ಮುಖ್ಯಮಂತ್ರಿ ಎಂಬ ಅಭಿಮಾನದಿಂದ ಗುರುತಿಸುತ್ತಿದ್ದಾರೆ ಎಂದಿದ್ದರು. ಆದರೆ ಯಡಿಯೂರಪ್ಪನವರ ಹೆಸರಿಡಲಾದ ಪಟ್ಟಣದ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಿ ಸುಮಾರು 14 ವರ್ಷ ಕಳೆದರೂ ಸಹ ಬಸ್ ನಿಲ್ದಾಣದಲ್ಲಿ ಕನ್ನಡ ಧ್ವಜಸ್ತಂಭವಿಲ್ಲ. ಶೌಚಾಲಯದ ಸ್ಥಿತಿ ಅದೋಗತಿಯಾಗಿದ್ದು,ಕುಡಿಯುವ ನೀರಿನ ಸೌಲಭ್ಯವಿಲ್ಲ, ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲ. ತಾಯಿ ಮಕ್ಕಳ ಹಾಲುಣಿಸುವ ಕೇಂದ್ರ ಮತ್ತು ಮಹಿಳೆಯರ ವಿಶ್ರಾಂತಿ ಸ್ಥಳದಲ್ಲಿ ಸೂಕ್ತ ವ್ಯವಸ್ಥೆಯಲ್ಲದೆ ಸಾರ್ವಜನಿಕರು ಪರಿತಪಿಸುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಸ್ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಿ ಮತ್ತು ಕನ್ನಡ ಧ್ವಜಸ್ತಂಭವನ್ನು ಪ್ರಮುಖ ಸ್ಥಳದಲ್ಲಿ ನಿರ್ಮಿಸುವ ಮೂಲಕ ಕನ್ನಡದ ಮುಖ್ಯಮಂತ್ರಿ ಎಂಬ ಹಿರಿಮೆಯನ್ನು ಸ್ವಕ್ಷೇತ್ರದಲ್ಲಿ ಸಾಬೀತುಪಡಿಸುವಂತೆ ತಿಳಿಸಿದರು.
ಬಸ್ ನಿಲ್ದಾಣದಲ್ಲಿನ ಸಮಸ್ಯೆ ಹಾಗೂ ದ್ವಜಸ್ತಂಭ ನಿರ್ಮಾಣದ ಬಗ್ಗೆ ತಾ.ಆಡಳಿತ ಪುರಸಭೆ ಮತ್ತಿತರ ಸಂಬಂದಿಸಿದ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದು ನಿಶ್ಚಿತ ಎಂದು ಎಚ್ಚರಿಸಿದರು.ಖಾಸಗಿ ಬಸ್ ನಿಲ್ದಾಣದಲ್ಲಿ ಗುಟ್ಕಾ, ಅಡಕೆ, ತಂಬಾಕು ಮತ್ತಿತರ ಪದಾರ್ಥ ಉಗಿದು ಮಾಲಿನ್ಯ ಉಂಟುಮಾಡುವುದನ್ನು ತಡೆಗಟ್ಟಲು ನಿತ್ಯ ಅವಿರತವಾಗಿ ಶ್ರಮಿಸಿ ಜಾಗೃತಿ ಮೂಡಿಸುತ್ತಿರುವ ನಿವೃತ್ತ ಮುಖ್ಯ ಶಿಕ್ಷಕ ದುರ್ಗಪ್ಪನವರ ಜನಪರ ಕಾಳಜಿಗೆ ಸಂಘಟನೆ ಅಭಿನಂದಿಸುತ್ತದೆ ಎಂದು ತಿಳಿಸಿದರು.
ಸಂಘಟನೆ ಅಧ್ಯಕ್ಷ ಆನಂದ,ನಗರ ಗೌರವಾಧ್ಯಕ್ಷ ಮುಕ್ತಿಯಾರ್ ಅಹಮದ್,ಆನಂದ ಎಚ್,ನಗರಾಧ್ಯಕ್ಷ ರವೀಂದ್ರ ಕುಮಾರ್ ಮತ್ತಿತರರು ಹಾಜರಿದ್ದರು.