ರಾಮನಗರ: ಒಂದು ಕಾಲಕ್ಕೆ ಶಿಕ್ಷಣದ ಕಾಶಿ ಎನಿಸಿದ್ದ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಾ ಕಾರ್ಪೊರೇಟ್ ಸಂಸ್ಕೃತಿಯ ಶಾಲೆಗಳು ತಲೆ ಎತ್ತುತ್ತಿವೆ. ಕೈಲಾಗದಿದ್ದರೂ ಸಾಲಸೋಲ ಮಾಡಿ ಬಡ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಿರುವುದನ್ನು ನೆನೆಸಿಕೊಂಡರೆ ಮುಂದಿನ ದಿನಗಳಲ್ಲಿ ನಾವು ಎದುರಿಸಬೇಕಾದ ಸವಾಲುಗಳ ಬಗ್ಗೆ ಭಯವೆನಿಸುತ್ತಿದೆ ಎಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಆತಂಕ ವ್ಯಕ್ತಪಡಿಸಿದರು.
ಮನ ಮನೆಗಳಿಗೆ ಕನ್ನಡ ತಲುಪಬೇಕಾದ ಅವಶ್ಯಕತೆ ಇದೆ. ನಾವು ನವೆಂಬರ್ ಕನ್ನಡಿಗರಾಗುವುದು ಬೇಡ, ನಿತ್ಯ ಕನ್ನಡಿಗರಾಗೋಣ, ಕನ್ನಡದ ಬೆಳವಣಿಗೆಗೆ ಶ್ರಮಿಸೋಣ. ಈ ಆಶಯ ಈಡೇರಬೇಕಾದರೆ ದ್ವಿಭಾಷಾ ನೀತಿ ಜಾರಿಯಾಗಬೇಕು. ಸರ್ಕಾರ ಶಿಕ್ಷಣದ ಮಹತ್ವ ಅರಿತು ಕಾರ್ಯನಿರ್ವಹಿಸಬೇಕು. ಹಾಗೆಯೇ ಮಕ್ಕಳ ಪೋಷಕರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಗೌರವಭಾವ ಮೂಡಬೇಕು ಎಂದು ಹೇಳಿದರು.
ಸ್ಥಳೀಯ ಇತಿಹಾಸ ಉಳಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಯಾಗೋಣ. ಬೀಳಗುಂಬ ಅಂತಹ ಕ್ರಿಸ್ತ ಪೂರ್ವದ ಐತಿಹಾಸಿಕ ನೆಲೆಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ ಎಂದು ಸುತ್ತಮುತ್ತಲ ಸ್ಥಳನಾಮಗಳನ್ನು ಹೇಳಿ ಬೈರೇಗೌಡರು ಗಮನ ಸೆಳೆದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ನಾಡು, ನುಡಿಯ ವಿಚಾರದಲ್ಲಿ ಇಂದಿನ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪ್ರತಿ ನಿತ್ಯ ಕನ್ನಡ ಬಳಸಿ ಉಳಿಸುವ ನಿಟ್ಟಿನಲ್ಲಿ ಪಣ ತೋಡಬೇಕಾಗಿದೆ. ಪ್ರತಿಯೊಬ್ಬ ಪೋಷಕರಲ್ಲಿ ಆಂಗ್ಲ ಭಾಷೆಯಲ್ಲಿ ವ್ಯಾಮೋಹ ಹೆಚ್ಚಾಗಿ ಮಕ್ಕಳಲ್ಲಿನ ಕನ್ನಡ ಭಾಷಾ ಅಭಿಮಾನ ಕಡಿಮೆಯಾಗುತ್ತಿದೆ. ಈ ಪರಭಾಷೆ ವ್ಯಾಮೋಹ ಕಡಿಮೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯ ಭವಿಷ್ಯ ಕುಂಠಿತವಾಗುತ್ತದೆ. ಮಕ್ಕಳು ಶಾಲಾ ಹಂತದಲ್ಲಿ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡಬೇಕು. ಈ ಬಗ್ಗೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದರು.
ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಅಧ್ಯಕ್ಷ ಪಟೇಲ್.ಸಿ.ರಾಜು ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿದೆ. ಸರ್ಕಾರ ಆಡಳಿತ ಹಂತದಲ್ಲಿ ಕನ್ನಡ ಕಡ್ಡಾಯಗೊಳಿಸುವಲ್ಲಿ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಹೇಳಿದರು.ಕಸಾಪ ತಾಲೂಕು ಸಂಚಾಲಕ ಬಿ.ಟಿ.ರಾಜೇಂದ್ರ ಮಾತನಾಡಿ, ನಾಡಿನ ಯುವಕರು ಭಾಷಾ ಅಭಿಮಾನ ಮೆರೆಯಲು ಕನ್ನಡ ಸಿನಿಮಾ ನೋಡುವ ಮೂಲಕ ಭಾಷೆ ಬೆಳವಣಿಗೆ ಸಹಕಾರ ನೀಡಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ಅವರನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಭಿನಂದಿಸಿದರು.ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಲತಾ ಎಚ್.ಕಜರಿ. ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್ಗೌಡ, ಮಾಜಿ ಉಪಾಧ್ಯಕ್ಷ ಕೆಂಚೇಗೌಡ, ಎಸ್ಡಿಎಂಸಿ ಅಧ್ಯಕ್ಷ ಯೋಗಾನಂದ, ವಿಎನ್ಎಸ್ಎಸ್ ಅಧ್ಯಕ್ಷ ಬಿ.ಸಿ.ಶಾಂತಯ್ಯ, ಯಜಮಾನ್ ತಿಮ್ಮಪ್ಪ, ಸಂತೋಷ್ , ಕಸಾಪ ತಾಲೂಕು ಸಂಚಾಲಕ ಅರುಣ್ ಆನುಮಾನಹಳ್ಳಿ, ಜಗದೀಶ್, ಎಸ್ಡಿಎಂಸಿ ಉಪಾಧ್ಯಕ್ಷ ಭಾಗ್ಯಮ್ಮ, ಸದಸ್ಯರಾದ ಸುದೀಪ್, ನಟರಾಜ್, ಶಾಲಾ ಶಿಕ್ಷಕರಾದ ಸುಜಾತ, ವಿನುತಾ, ದೇವಿಕ ಸುನೀಲ್, ಅಭಿ, ರಾಮು ಉಪಸ್ಥಿತರಿದ್ದರು.
17ಕೆಆರ್ ಎಂಎನ್ 2.ಜೆಪಿಜಿಬಿಳಗುಂಬ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ನಮ್ಮೂರ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ಅವರನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಭಿನಂದಿಸಿದರು.