ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯನ್ನು ಸರ್ಕಾರದಿಂದ ಸದ್ಯಕ್ಕೆ ಕೈಬಿಡಲಾಗಿದೆ ಎಂದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದ್ದಾರೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನೇಕ ಮಂದಿ ಪರಿಸರವಾದಿಗಳು, ಹೋರಾಟಗಾರರು ವಿರೋಧಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಜನರಿಗೆ ಈ ಬಗ್ಗೆ ಆತಂಕಬೇಡ ಎಂದು ತಿಳಿಸಿದರು.ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ನಮ್ಮ ಸರ್ಕಾರದ್ದಲ್ಲ. ಈ ಹಿಂದೆ ಬೊಮ್ಮಾಯಿ ಸರ್ಕಾರ ಇದ್ದಾಗ ಪ್ರಸ್ತಾಪ ಮಾಡಲಾಗಿತ್ತು. ನಮ್ಮ ಸರ್ಕಾರ ಬಂದಾಗ ಈ ಯೋಜನೆಯ ಸಾಧ್ಯತೆಗಳ ಬಗ್ಗೆ ವರದಿ ಕೇಳಿತ್ತು. ಇದು 20 ಸಾವಿರ ಕೋಟಿ ರು. ಯೋಜನೆ ಎಂಬುದು ಬೆಳಕಿಗೆ ಬಂತು. ನಾನು ಕೂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ, ಇದು ಕಾರ್ಯ ಸಾಧುವಲ್ಲ, ಇದನ್ನು ಜಾರಿಗೆ ತರಬಾರದು ಎಂದು ಮನವಿ ಮಾಡಿದ್ದೇನೆ. ಈ ಕಾರಣದಿಂದಲೇ ಸರ್ಕಾರ ಈ ಯೋಜನೆಯನ್ನು ಸದ್ಯಕ್ಕೆ ಕೈ ಬಿಟ್ಟಿದೆ. ಈಗ ಈ ಯೋಜನೆಯ ವಿಚಾರದಲ್ಲಿ ಯಾವುದೇ ಹೋರಾಟಗಳು ಸಜ್ಜುಗೊಳ್ಳುವ ಅವಶ್ಯಕತೆ ಇಲ್ಲ. ಸರ್ಕಾರದ ಮುಂದೆ ಈ ಯೋಜನೆಯ ಪ್ರಸ್ತಾಪ ಇಲ್ಲ ಎಂದರು.ಸರ್ಕಾರ ರೈತರ ಪರ:
ಶರಾವತಿ ಸಂತ್ರಸ್ತರ ಪರವಾಗಿ ಸಂಸದ ರಾಘವೇಂದ್ರ ಕೇಂದ್ರದಲ್ಲಿ ಒಂದು ಮಾತಾಡಿಲ್ಲ. ರೈತರ ಧ್ವನಿಯಾಗಿ ರಾಘವೇಂದ್ರ ಕೆಲಸ ಮಾಡಿಲ್ಲ. ರೈತರ ಪರ ಧ್ವನಿ ಎತ್ತದೆ ಹೋದರೆ ಇವರು ಯಾಕೇ ಬೇಕು? ರಾಘವೇಂದ್ರ ತಮ್ಮ ಕಾಲೇಜು ಜಾಗ ಉಳಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಗೋಪಾಲಕೃಷ್ಣ ಆರೋಪಿಸಿದರು.ರಾಘವೇಂದ್ರ, ಹಾಲಪ್ಪ, ಅರಗ ಜ್ಞಾನೇಂದ್ರ, ಬೊಮ್ಮಾಯಿ ಅವರು ''''ಮಲೆನಾಡಿನ ಪಾಪಿಗಳು'''' ಎಂದು ಕಟುವಾಗಿ ಟೀಕಿಸಿದ ಶಾಸಕ ಬೇಳೂರು, ನಮ್ಮ ಸರ್ಕಾರ ಶರಾವತಿ ಸಂತ್ರಸ್ತರ ಪರವಾಗಿದೆ. ರೈತರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ನಾವು ರೈತರ ಜೊತೆಗಿದ್ದೇವೆ. ರೈತರ ಪರವಾಗಿ ನಮ್ಮ ಸರ್ಕಾರ ಎಂದಿಗೂ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಶಂಕರಘಟ್ಟ ರಮೇಶ್, ಶಿ.ಜು. ಪಾಶಾ, ಜಿ. ಪದ್ಮನಾಭ್, ಸೋಮಶೇಖರ್, ಬಾಲಾಜಿ ಇದ್ದರು.ಬಿಜೆಪಿ-ಜೆಡಿಎಸ್ ಮೈತ್ರಿ ಹೆಚ್ಚು ಇರದುಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಈಗ ಬಿಜೆಪಿಯಲ್ಲಿ ಶತ್ರುಗಳಿರುವುದು ಗೊತ್ತಾಗಿದೆ. ಇವರ ಮೈತ್ರಿ ಹೆಚ್ಚು ದಿನ ಉಳಿಯೋದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಅದೇ ರೀತಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕೆಳಗಿಳಿಸಲು ಯತ್ನಾಳ್ ಮತ್ತು ಈಶ್ವರಪ್ಪ ನವರ ತಂಡ ಹೊರಟಿದೆ. ಇದೆಲ್ಲ ಬಿಟ್ಟು ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ಮಾತನಾಡುತ್ತಾರೆ. ಇದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿಯಲ್ಲಿಯೇ ಕೆಲವು ಶತ್ರುಗಳಿದ್ದಾರೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿದರು.
ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ವಿಧಾನ ಪರಿಷತ್ ವಿಪಕ್ಷನಾಯಕ ನಾರಾಯಣ ಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಳ್ಳ ಎಂದು ಕರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಆರೋಪ ಸಾಬೀತಾಗದೇ ಈ ರೀತಿ ಅವರು ಮಾತನಾಡುವುದು ಸರಿಯಲ್ಲ. ಅವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮುಡಾ ಪ್ರಕರಣ ಎತ್ತಿ ದೊಡ್ಡದಾಗಿ ಮಾಡಿದ್ದಾರೆ. ಯಡಿಯೂರಪ್ಪರನ್ನು ಜೈಲಿಗೆ ಕಳಿಸಿದ್ದು ಯಾರು? ಹಾಗಾದರೆ ಯಡಿಯೂರಪ್ಪ ಕಳ್ಳರಾ. ಅದನ್ನು ಅವರು ಹೇಳಬೇಕು ಎಂದು ಕಿಡಿಕಾರಿದರು.