ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಪುರಸಭೆಯಲ್ಲಿ ಮಾಸಿಕ ಸಭೆ ನಡೆಸುತ್ತಿದ್ದಾಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅವರ ಅನುಮತಿ ಪಡೆದು ಸಭೆಗೆ ಆಗಮಿಸಿದ ಬಡಾವಣೆಯ ಮಹಿಳೆಯರು, ನಮ್ಮ ಬಡಾವಣೆಗೆ ಕುಡಿಯುವ ನೀರು ಬರುತ್ತಿಲ್ಲ. ದಯವಿಟ್ಟು ನೀರು ಬಿಡಿಸಿ ಎಂದು ವಿನಂತಿಸಿದರು. ಸಭಾಧ್ಯಕ್ಷರು ಎಂಜಿನಿಯರ್ ಪರಮೇಶ್ ಅವರಲ್ಲಿ ಈ ಬಗ್ಗೆ ಸ್ಪಷ್ಟನೆ ಕೇಳಿದರು. ಎಂಜಿನಿಯರ್ ಪರಮೇಶ್ ೨ ದಿನಕ್ಕೊಮ್ಮೆ ರಾತ್ರಿ ೭ ರಿಂದ ೮.೩೦ ರವರೆಗೆ ನೀರು ಬಿಡುತ್ತಿದ್ದೇವೆ. ಅವರು ಬೆಳಗಿನ ವೇಳೆಯಲ್ಲಿ ನೀರು ಬಿಡಿ ಎಂದು ಕೇಳುತ್ತಿದ್ದಾರೆ. ಅದು ಸಾಧ್ಯಆಗುತ್ತಿಲ್ಲ. ನಾವು ನೀರಿನ ಟ್ಯಾಂಕ್ ಲೋಡ್ ಮಾಡಿಕೊಂಡು ಪ್ರತೀ ಬಡಾವಣೆಗೆ ನೀರು ಬಿಡುತ್ತಿದ್ದೇವೆ ಎಂದರು. ಹಾಗಾದರೆ ಈ ಮೊದಲು ಬೆಳಗಿನ ವೇಳೆಯಲ್ಲೇ ನೀರು ಬಿಡುತ್ತಿದ್ದರಲ್ಲ ಎಂದು ಬಡಾವಣೆಯ ಮಹಿಳೆ ಸುಧಾಮಣಿ ಪ್ರಶ್ನಿಸಿದಾಗ, ಇನ್ನೆರೆಡು ತಿಂಗಳಲ್ಲಿ ನಿಮ್ಮ ಬಡಾವಾಣೆಯ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ.
ನಮ್ಮ ಬಡಾವಣೆಯಲ್ಲಿ ಸ್ವಚ್ಚತಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಪ್ರತೀ ದಿನ ಕಸ ಸಂಗ್ರಹಿಸಲು ಬರುತ್ತಿಲ್ಲ ಎಂದು ಶೀಲಾ ಅವರು ದೂರಿದಾಗ, ಕಸ ಸಂಗ್ರಹಣೆಯ ವಾಹನಗಳು ಕೆಟ್ಟಿದೆ ಎಂದು ಪರಿಸರ ಎಂಜಿನಿಯರ್ ರುಚಿದರ್ಶಿನಿ ಉತ್ತರಿಸಿದಾಗ ವಾಹನ ಕೆಟ್ಟರೆ ಕಸ ತೆಗೆಯುವುದಿಲ್ಲವೇ ಎಂದು ಸಭಾಧ್ಯಕ್ಷರು ಪ್ರಶ್ನಿಸಿ, ವಾಹನ ಕೆಟ್ಟಾಗ ವಾಹನ ರಿಪೇರಿ ಆಗುವವರೆಗೆ ಟೆಂಡರ್ ಕರೆದು ಬೇರೆ ವಾಹನದಲ್ಲಿ ಕಸ ಸಂಗ್ರಹಿಸಿ ಎಂದರು.ಸಭೆಯಲ್ಲಿ ೩೮ ವಿಷಯಗಳು ಚರ್ಚೆ ಆದವು. ಪಟ್ಟಣದಲ್ಲಿ ಪುರಸಭೆಯ ನೂರಾರು ವಾಣಿಜ್ಯ ಮಳಿಗೆಗಳು ಖಾಲಿ ಬಿದ್ದಿರುವ ಬಗ್ಗೆ ಅವುಗಳನ್ನು ಮರುಹರಾಜು ಮಾಡುವ ಬಗ್ಗೆ, ಬಾಡಿಗೆ ಕಟ್ಟುನಿಟ್ಟಾಗಿ ವಸೂಲಿ ಮಾಡುವ ಬಗ್ಗೆ, ದ್ವಿಚಕ್ರವಾಹನ ನಿಲ್ದಾಣ ಒದಗಿಸುವುದರ ಬಗ್ಗೆ, ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಬಗ್ಗೆ, ಜಮೀನುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಬಗ್ಗೆ ಚರ್ಚೆ ನಡೆಸಿದರು. ಹಸಿ ಕಸ, ಒಣ ಕಸವನ್ನು ಜನರು ಬೇರ್ಪಡಿಸಿಕೊಟ್ಟರೂ ಒಂದೇ ಜಾಗದಲ್ಲಿ ಸುರಿದುಕೊಳ್ಳುತ್ತಾರೆ ಎಂದಾಗ ಇದನ್ನು ಬೇರೆ ಬೇರೆ ಸಂಗ್ರಹಿಸಲು ಕ್ರಮ ಜರುಗಿಸಿ ಎಂದರು.