-ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ ಶ್ಲಾಘನೆ
ಗುಟ್ಕಾ ಸೇವನೆ ಆರೋಗ್ಯಕ್ಕೆ ಮಾರಕ ಎಂಬ ಅರಿವಿದ್ದರೂ ಯುವಕರು, ಮಹಿಳೆಯರು ಸೇವಿಸುವ ಮೂಲಕ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ವಿಪರೀತವಾಗುತ್ತಿದ್ದು, ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಗುಟ್ಕಾ ನಿಷೇಧಿಸುವ ಬಹು ಮಹತ್ವದ ನಿರ್ಧಾರ ಕೈಗೊಂಡು ಆದೇಶ ಹೊರಡಿಸಿರುವ ರಾಜ್ಯದ ಆರೋಗ್ಯ ಸಚಿವ ಯು.ಟಿ ಖಾದರ್ ಕ್ರಮ ಸ್ವಾಗತಾರ್ಹ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾ ಸೇವನೆಯು ಆರೋಗ್ಯಕ್ಕೆ ತೀವ್ರ ಹಾನಿಕಾರ ಎಂಬ ಅರಿವಿದ್ದರೂ ಬಹುತೇಕ ಯುವಕರು ಸಹಿತ ಮಹಿಳೆಯರು ಗುಟ್ಕಾ ಸೇವಿಸುವ ಮೂಲಕ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಶಾಲಾ-ಕಾಲೇಜು ಮಕ್ಕಳು ಗುಟ್ಕಾ ಪಾನ್ ಮಸಾಲಗಳ ವರ್ಣರಂಜಿತ ಜಾಹೀರಾತುಗಳಿಗೆ ಮರುಳಾಗಿ ಗುಟ್ಕಾ ಸೇವನೆಯ ದುರಭ್ಯಾಸಕ್ಕೆ ಬಲಿಯಾಗಿ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿನ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಗಮನಾರ್ಹ ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ಯು.ಟಿ ಖಾದರ್ ಕೈಗೊಂಡ ಗುಟ್ಕಾ ನಿಷೇಧಪಡಿಸುವ ತೀರ್ಮಾನ ಐತಿಹಾಸಿಕ ಸಂಗತಿಯಾಗಿದ್ದು, ಸಚಿವರ ತೀರ್ಮಾನವನ್ನು ಜಯಕರ್ನಾಟಕ ಸಂಘಟನೆ ಬೆಂಬಲಿಸುತ್ತದೆ ಎಂದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಚಿವರು ಕೈಗೊಂಡ ದಿಟ್ಟ ಕ್ರಮವನ್ನು ಸಾರ್ವಜನಿಕರು ಪ್ರಶಂಸಿಸಿದ್ದು, ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯದೆ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಚಿವರ ಕಾರ್ಯವೈಖರಿ ಅಭಿನಂದಿಸುವುದಾಗಿ ತಿಳಿಸಿದರು.
ಫೋಟೋ
[ಫೋಟೋ ಫೈಲ್ ನಂ.18 ಕೆ.ಎಸ್.ಕೆ.ಪಿ 1]