ಅಧಿಕಾರ ಹಂಚಿಕೆ ಬಗ್ಗೆ ಸಿಎಂ, ಡಿಸಿಎಂ ನಡುವೆ ಗೊಂದಲವಿಲ್ಲ: ಮಳವಳ್ಳಿ ಶಿವಣ್ಣ

KannadaprabhaNewsNetwork |  
Published : Mar 06, 2026, 01:45 AM IST
5ಕೆಎಂಎನ್ ಡಿ18 | Kannada Prabha

ಸಾರಾಂಶ

ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ನರೇಂದ್ರ ಮೋದಿ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಅವರನ್ನು ಬಿಟ್ಟು ಬೇರೆ ಬಿಜೆಪಿ ನಾಯಕರನ್ನು ಪ್ರಧಾನ ಮಂತ್ರಿ ಮಾಡಿ ಎಂದು ಯಾವ ಮಾಧ್ಯಮಗಳು ಪ್ರಶ್ನಿಸುವ ಎದೆಗಾರಿಕೆ ಪ್ರದರ್ಶನ ಮಾಡದಿರುವುದು ಬೇಸರದ ಸಂಗತಿ.

ಕನ್ನಡಪ್ರಭ ವಾರ್ತೆ ಮದ್ದೂರು

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ ಗುರುವಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣ ಮತ್ತು ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ಆಶೀರ್ವಾದವಿದೆ. ಇಬ್ಬರು ನಾಯಕರ ನಡುವೆ ಹಾಲು, ಜೇನಿನಂತ ಸಂಬಂಧವಿದೆ. ಇವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯನ್ನು ಸಹಿಸದ ವಿರೋಧ ಪಕ್ಷಗಳು ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ನರೇಂದ್ರ ಮೋದಿ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಅವರನ್ನು ಬಿಟ್ಟು ಬೇರೆ ಬಿಜೆಪಿ ನಾಯಕರನ್ನು ಪ್ರಧಾನ ಮಂತ್ರಿ ಮಾಡಿ ಎಂದು ಯಾವ ಮಾಧ್ಯಮಗಳು ಪ್ರಶ್ನಿಸುವ ಎದೆಗಾರಿಕೆ ಪ್ರದರ್ಶನ ಮಾಡದಿರುವುದು ಬೇಸರದ ಸಂಗತಿ ಎಂದರು.

ಅಧಿಕಾರ ಹಂಚಿಕೆ ಗೊಂದಲ, ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಮಯೋಜಿತ ಬಜೆಟ್ ಮಂಡಿಸಲಿದ್ದಾರೆ. ಇದರಿಂದ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು.

ವಿಧಾನ ಪರಿಷತ್ ಸದಸ್ಯನಾಗಲು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಈ ಹಿಂದೆ ಪಕ್ಷ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಫರ್ ನೀಡಿತ್ತು. ಇಂಥ ಅವಕಾಶವನ್ನು ನಿರಾಕರಿಸಿದ್ದ ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದೇನೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಯಾವ ರೀತಿ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡುತ್ತೇನೆ ಎಂದರು.

ಈ ವೇಳೆ ಮನ್ಮುಲ್ ಮಾಜಿ ನಿರ್ದೇಶಕ ಲಿಂಗನದೊಡ್ಡಿ ರಾಮಕೃಷ್ಣ, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಎಚ್.ರಾಜು, ಮುಖಂಡರಾದ ಕುಮಾರ ಹೆಗಡೆ, ರಾಜು, ಮನು ಕುಮಾರ, ಶಿವು, ಬೀರಯ್ಯ, ದರ್ಶನ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿನ್ನೇನಹಳ್ಳಿ ಸೊಸೈಟಿಗೆ ಯುವ ನಾಯಕರ ಆಯ್ಕೆ
ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲ