ರೈತರ ಸಾಲ ವಸೂಲಾತಿಗೆ ಬಲವಂತದ ಕ್ರಮ ಬೇಡ

KannadaprabhaNewsNetwork |  
Published : Mar 08, 2024, 01:54 AM IST
ಬೆಳಗಾವಿಯಲ್ಲಿ ನಡೆದ ಪ್ರಮುಖ ಸಹಕಾರಿ ಪತ್ತಿನ ಸಂಘಗಳು ಮತ್ತು ಬ್ಯಾಂಕ್‌ ಅಧಿಕಾರಿಗಳಸಭೆಯಲ್ಲಿ ಸಚಿವಸತೀಶ ಜಾರಕಿಹೊಳಿ ಮಾತನಾಡಿದರು | Kannada Prabha

ಸಾರಾಂಶ

ರಾಜ್ಯಾದ್ಯಂತ ಬರಗಾಲ ಇರುವ ಕಾರಣ ರೈತರಿಂದ ಯಾವುದೇ ಸಾಲ ವಸೂಲಾತಿಗೆ ಬಲವಂತದ ಕ್ರಮವಹಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬ್ಯಾಂಕ್ ಹಾಗೂ ಸಹಕಾರಿ ಪತ್ತಿನ ಸಂಘಗಳಿಗೆ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿರಾಜ್ಯಾದ್ಯಂತ ಬರಗಾಲ ಇರುವ ಕಾರಣ ರೈತರಿಂದ ಯಾವುದೇ ಸಾಲ ವಸೂಲಾತಿಗೆ ಬಲವಂತದ ಕ್ರಮವಹಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬ್ಯಾಂಕ್‌ ಹಾಗೂ ಸಹಕಾರಿ ಪತ್ತಿನ ಸಂಘಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಮುಖ ಸಹಕಾರಿ ಪತ್ತಿನ ಸಂಘಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಾಲ ವಸೂಲಾತಿಗೆ ಯಾವುದೇ ರೀತಿಯ ಒತ್ತಡ ಹೇರಬಾರದು. ಇದಲ್ಲದೇ ರೈತರ ಖಾತೆಗೆ‌ ಜಮೆಯಾಗುವ ವೃದ್ಧಾಪ್ಯ ವೇತನ ಅಥವಾ ಯಾವುದೇ ಸರ್ಕಾರಿ ಸೌಲಭ್ಯಗಳ ಹಣವನ್ನು ಸಾಲದ ಕಂತುಗಳಿಗೆ ಹೊಂದಾಣಿಕೆ‌ ಮಾಡಬಾರದು. ಸರ್ಕಾರದಿಂದ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿ ಸಾಲ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕು ಎಂದರು.

3 ತಿಂಗಳು ಸಾಲ ವಸೂಲಾತಿಗೆ ಕ್ರಮ ಬೇಡ:

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮುಂದಿನ 3 ತಿಂಗಳವರೆಗೆ ಬಲವಂತದ ಸಾಲ ವಸೂಲಾತಿ ಮಾಡಬಾರದು ಮತ್ತು ರೈತರಿಗೆ ನೋಟೀಸು ಜಾರಿಗೊಳಿಸಿ ತೊಂದರೆ ನೀಡಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬ್ಯಾಂಕುಗಳು ಮಾತ್ರವಲ್ಲದೇ ಖಾಸಗಿ ಲೇವಾದೇವಿದಾರರಿಂದ ಕೂಡ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದರು.

ಬೆಳಗಾವಿ(ಉತ್ತರ) ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಆಸೀಫ್(ರಾಜು) ಸೇಠ್, ಸಹಕಾರಿ ಸಂಘಗಳ ಜಂಟಿ ನಿಬಂಧಕ ಸುರೇಶ ಗೌಡ, ಸಹಕಾರಿ‌ ಸಂಘಗಳ ಉಪ ನಿಬಂಧಕರಾದ ಮಣಿ ಎಂ.ಎನ್. ಹಾಗೂ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ ಕುಲಕರ್ಣಿ ಹಾಗೂ ವಿವಿಧ ರೈತ ಸಂಘಗಳ ಸದಸ್ಯರು, ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ