ಇಸ್ಲಾಂ ಇರುವ ವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ: ಅನಂತಕುಮಾರ ಹೆಗಡೆ

KannadaprabhaNewsNetwork |  
Published : Feb 16, 2024, 01:49 AM ISTUpdated : Feb 16, 2024, 01:50 AM IST
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಹಿಂದೂ ಧರ್ಮ, ಭಾರತ ದೇಶ ಉಳಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾಗಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಲ್ಲಿ ಮಾತ್ರ ದೇಶ ಉಳಿಯಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

ಶಿರಸಿ: ಬಿಜೆಪಿ, ಸಂಘ ಪರಿವಾರ ಇದ್ದರೆ ಮಾತ್ರ ದೇಶ ಉಳಿಯುತ್ತದೆ. ಹಿಂದುತ್ವವು ನಮ್ಮ ದೇಶದ ಉಸಿರಾಗಿದ್ದು, ಎಲ್ಲಿಯವರೆಗೆ ಇಸ್ಲಾಂ ಇರುತ್ತದೋ ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ ಹೆಗಡೆ ಗುಡುಗಿದ್ದಾರೆ.

ಗುರುವಾರ ಇಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ, ಭಾರತ ದೇಶ ಉಳಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾಗಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಲ್ಲಿ ಮಾತ್ರ ದೇಶ ಉಳಿಯಲಿದೆ. ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಚಾರಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸಾಮಾಜಿಕ, ಸಾಂಸ್ಕೃತಿಕವಾಗಿ ಎಲ್ಲ ದೃಷ್ಟಿಯಿಂದ ಅಭಿವೃದ್ಧಿ ಹೊಂದಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ಹೊಂದಿದಂತೆ ಎಂದರು.

ಬಿಜೆಪಿ ಮತ್ತು ಸಂಘ ಪರಿವಾರ ಇದ್ದಲ್ಲಿ ಜಗತ್ತಿಗೆ ನೆಮ್ಮದಿ. ನಾವು ಇಲ್ಲದೇ ಹೋದಲ್ಲಿ ಜಗತ್ತನಲ್ಲಿ ನೆಮ್ಮದಿ ಇಲ್ಲ. ಕೇವಲ ಮೂಲಭೂತ ಸೌಕರ್ಯವೇ ಅಭಿವೃದ್ಧಿಯೆಂದು ಕೊಂಡರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ. ಮುಂಬರುವ ಲೋಕಸಭಾ ಮಹಾ ಸಂಘರ್ಷದಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಕಾಂಗ್ರೆಸ್ಸಿನವರು ಈಗಾಗಲೇ ಶಸ್ತ್ರಗಳನ್ನು ತ್ಯಜಿಸಿದ್ದಾರೆ. ವೈಚಾರಿಕವಾಗಿ ನಾವು ಚುನಾವಣೆ ಗೆದ್ದು ತೋರಿಸಬೇಕಾಗಿದೆ. ರಾಜಕೀಯ ಅಂದ ಮೇಲೆ ವಲಸೆ ಪ್ರಕ್ರಿಯೆ ಸಹಜವಾಗಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಯಾವ ರೀತಿಯಲ್ಲಿ ರಾಜಕೀಯ ಡೊಂಬರಾಟ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೆಲ್ಲವನ್ನು ಬದಿಗಿಟ್ಟು ಸಂಘಟನೆಯ ಕಡೆಗೆ ಗಮನಹರಿಸೋಣ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ ಮಾತನಾಡಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ, ರಾಜ್ಯ ರೈತ ಮೋರ್ಚಾ ಸದಸ್ಯ ಗಣೇಶ ಸಣ್ಣಲಿಂಗಣ್ಣನವರ, ಶಿರಸಿ ಗ್ರಾಮೀಣ ಮಂಡಲ ಉಪಾಧ್ಯಕ್ಷ ಅರವಿಂದ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಸಿದ್ದು ಟೆಂಪೋ, ಬನವಾಸಿ ಶಕ್ತಿಕೇಂದ್ರದ ಅಧ್ಯಕ್ಷ ಸಿದ್ದವೀರೇಶ ನರೆಗಲ್, ಹಿರಿಯರಾದ ಟಿ.ಜಿ. ನಾಡಿಗೇರ, ಮೃತ್ಯುಂಜಯ ಚೌಧರಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.ಏಕವಚನ ಬಳಕೆ ಪ್ರಸ್ತಾಪ: ಸಭೆಯಲ್ಲಿ ಸಂಸದ ಹೆಗಡೆ ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಹೇಳಿದ ಏಕವಚನ ವಿಷಯ ಪ್ರಸ್ತಾಪಿಸಿದರು. ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದಲ್ಲಿ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಅವರಿಗೆ ಮಗನೇ ಎನ್ನದೇ ಬೇರೇನು ಹೇಳಲು ಸಾಧ್ಯ? ಅಪ್ಪ ಅಂತಲೋ, ಅಜ್ಜ ಅಂತಲೋ, ಮಾಮಾ ಅಂತಲೋ ಕರೆಯಲು ಸಾಧ್ಯವೇ? ಎಂದು ವ್ಯಂಗ್ಯವಾಡಿದರು. ಅಲ್ಲದೇ ಯುದ್ಧ ಕಾಲದಲ್ಲಿ ಯಾವ ಭಾಷೆಯಲ್ಲಿ ಮಾತನಾಡಬೇಕೋ ಅದನ್ನೇ ಬಳಸಬೇಕು. ಅಲ್ಲಿ ಶಾಸ್ತ್ರೀಯ ಸಂಗೀತ ಬಳಸಲು ಸಾಧ್ಯವಿಲ್ಲ ಎಂದರು.‌

ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದೇನೆ. ತುಂಬಾ ವರ್ಷ ಆಗಿತ್ತು. ಕೇಸ್ ಇರಲಿಲ್ಲ. ಒಂದು ರೀತಿಯ ಮುಜುಗುರ ಉಂಟಾಗಿತ್ತು. ಏನೋ ಕಳೆದುಕೊಂಡಂತೆ ಅನಿಸುತ್ತಿತ್ತು. ಈಗ ಪುನಃ ವಾಪಸ್ ಬಂದ ಅನುಭವ ಆಗುತ್ತಿದೆ ಎಂದು ಹೆಗಡೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ