- ಅಜ್ಜಂಪುರ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಮಂಜುನಾಥ್
ರೈತರು ಐಪಿ ಸೆಟ್ ಗೆ ಅಕ್ರಮ ಸಕ್ರಮದಲ್ಲಿ ಹಣ ಪಾವತಿಸಿ ಪಡೆದುಕೊಂಡರೆ ಟಿಸಿ ಗಳ ಸಮಸ್ಯೆಇರುವುದಿಲ್ಲವೆಂದು ಚಿಕ್ಕಮಗಳೂರಿನ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಹೇಳಿದರು.
ಅಜ್ಜಂಪುರ ಮೆಸ್ಕಾಂ ಇಲಾಖೆ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆ ಮೇಲ್ಚಾವಣಿ ಮತ್ತು ಜಮೀನುಗಳಲ್ಲಿ ಸೌರಶಕ್ತಿ ಅಳವಡಿಸುವ ಮೂಲಕ ಉತ್ತಮ ಸೇವೆ ಪಡೆದುಕೊಳ್ಳಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಯೋಜನೆಯಡಿ ಶೇ.30 ಸಬ್ಸಿಡಿ ನೀಡಲಾಗುತ್ತದೆ. ಈ ಕುರಿತಂತೆ ಸಾರ್ವಜನಿಕರು 31/ 12/25 ಒಳಗೆ ಅರ್ಜಿ ಸಲ್ಲಿಸಲು ಕಡೆ ದಿನಾಂಕವಾಗಿದೆ. ಆದ್ದರಿಂದ ರೈತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ಕುಡ್ಲೂರು ರೈತ ಮಹೇಶ್ವರಪ್ಪ ಮಾತನಾಡಿ ತಮ್ಮ ತೋಟದಲ್ಲಿ ಮರಗಳ ಮಧ್ಯೆ ವಿದ್ಯುತ್ ತಂತಿಗಳು ಹಾದುಹೋಗಿ ಶಿಥಿಲಗೊಂಡಿದ್ದು ಯಾವ ಸಂದರ್ಭದಲ್ಲಾದರೂ ಅದು ತುಂಡಾಗಿ ಬೀಳಬಹುದು. ತೋಟಗಳಲ್ಲಿ ನೀರು ಮತ್ತು ಕೆಸರು ತುಂಬಿ ಕೊಂಡಿದ್ದು ಪವರ್ ಲೈನ್ ಬಿದ್ದಾಗ ದೊಡ್ಡ ಪ್ರಮಾಣದ ಅವಘಡ ಸಂಭವಿಸುತ್ತದೆ. ಆದ್ದರಿಂದ ತಕ್ಷಣವೇ ಸೂಕ್ತ ಕಾಮ ಗಾರಿ ನಡೆಸಿ ಮುಂದಾಗುವ ಅನಾಹುತ ತಡೆಯಬೇಕೆಂದು ಅರ್ಜಿ ಸಲ್ಲಿಸಿದರು. ಪಪಂ ವ್ಯಾಪ್ತಿಯಲ್ಲಿ ಬರುವ ಎಲ್ ಟಿ 1,3,5 ವಿದ್ಯುತ್ ಸಂಪರ್ಕ ಪಡೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಗುತ್ತಿಗೆದಾರ ಕೆ ಸುಭಾಷ್ ಮನವಿ ಮಾಡಿದರು.
ಅವಿನಾಶ್ ಬೇಗೂರು ಇವರು ಮಾತನಾಡಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿದ್ದೇವೆ ಇದಕ್ಕೆ ವಿದ್ಯುತ್ ಸಂಪರ್ಕ ಪಡೆಯುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮಹದೇವಪ್ಪ ಗಡಿರಂಗಪುರ ಟಿಸಿ ಅಳವಡಿಸಬೇಕೆಂದು ಮನವಿ ಮಾಡಿದರು. ಪತ್ರಸಂಘದ ಅಧ್ಯಕ್ಷ ಹೆಬ್ಬೂರು ಶಿವಣ್ಣ ಮಾತನಾಡಿ ಕೊಡ್ಲೂರು ಮಹೇಶ್ವರಪ್ಪನವರು 2023 ರಲ್ಲಿ ಅರ್ಜಿ ಹಾಕಿದ್ದು ಹಿರಿಯ ನಾಗರಿಕರಾದ ಅವರ ಕೆಲಸ ತಕ್ಷಣ ಮಾಡಿಕೊಡಬೇಕೆಂದು ಆಗ್ರಹಿಸಿದರು.