ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ

KannadaprabhaNewsNetwork | Published : Aug 18, 2024 1:46 AM

ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾದರೂ ಸಹ ಮಹಿಳೆಯರಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲದಂತಾಗಿದೆ

ಮುಂಡರಗಿ: ಸಮಾಜದಲ್ಲಿ ವೈದ್ಯರು ಎಂದರೆ ದೇವರು, ಆಸ್ಪತ್ರೆಗಳೆಂದರೆ ದೇವಸ್ಥಾನ ಎನ್ನುವ ಭಾವನೆ ಇದೆ. ಆ ದೇವರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡುವುದು ಸರಿಯೇ? ಇದ್ಯಾವ ನ್ಯಾಯ ಎಂದು ಮುಂಡರಗಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಅಂಜುಮಾ ಬೇಸರ ವ್ಯಕ್ತಪಡಿಸಿದರು.

ಅವರು ಶನಿವಾರ ಮುಂಡರಗಿಯಲ್ಲಿ ಕೊಲ್ಕತ್ತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಹತ್ಯೆವಿರುದ್ಧ ಭಾರತೀಯ ವೈದ್ಯರ ಸಂಘ ಮುಂಡರಗಿ, ಕರ್ನಾಟಕ ರಾಜ್ಯ ವೈದ್ಯರ ಸಂಘ ಗದಗ ಹಾಗೂ ತಾಲೂಕು ಆಯುಷ್ಯ ಇಲಾಖೆಗಳ ಆಶ್ರಯದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೊಪ್ಪಳ ವೃತ್ತದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾದರೂ ಸಹ ಮಹಿಳೆಯರಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲದಂತಾಗಿದೆ. ಇಂದು ಮಹಿಳಾ ವೈದ್ಯರು ಆಸ್ಪತ್ರೆಗಳಲ್ಲಿ, ಮನೆಯಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಎಲ್ಲೆಡೆಯೂ ಕಿರುಕುಳ ಅನುಭವಿಸುತ್ತಿದ್ದು, ಇದಕ್ಕೆ ಕೊನೆ ಯಾವಾಗ? ಸಮಾಜ ಮಹಿಳಾ ವೈದ್ಯರನ್ನು, ಮಹಿಳಾ ಅಧಿಕಾರಿಗಳನ್ನು ಮಾನವೀಯತೆಯ ಹೃದಯದಿಂದ ನೋಡಬೇಕು. ಕೊಲ್ಕತಾ ಪ್ರಕರಣಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸುವ ಮೂಲಕ ಮತ್ತೊಮ್ಮೆ ಇಂತಹ ಘಟನೆಗಳು ಮತ್ತೆ ಜರುಗದಂತೆ ನೋಡಿಕೊಳ್ಳಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ, ರಾಜ್ಯ ಐಎಂಎ ಮಾಜಿ ಅಧ್ಯಕ್ಷ ಡಾ. ಅನ್ನದಾನಿ ಮೇಟಿ ಮಾತನಾಡಿ, ಕೊಲ್ಕತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿರುವ ಅಮಾನವೀಯ ಘಟನೆಯನ್ನು ನಾವೆಲ್ಲರೂ ಉಗ್ರವಾಗಿ ಖಂಡಿಸುತ್ತೇವೆ. ಹೀಗಾಗಿ ಇಂದು ತಾಲೂಕಿನಾದ್ಯಂತ ತುರ್ತುಸೇವೆ ಹೊರತು ಪಡಿಸಿ ಎಲ್ಲ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸ್ಥಗಿತಗೊಳಿಸಿಲಾಗಿದೆ. ಇಂತಹ ಘಟನೆಗೆಳು ಮತ್ತೆ ಜರುಗಬಾರದು. ಈ ಘಟನೆಗೆ ಕಾರಣರಾದವರಿಗೆ ಶಿಕ್ಷೆ ವಿಧಿಸಲು ಒತ್ತಾಯಿಸುತ್ತಿದ್ದೇವೆ ಎಂದರು.

ನಂತರ ತಹಸೀಲ್ದಾರ್‌ ಕಚೇರಿಗೆ ತೆರಳಿದ ಪ್ರತಿಭಟನಾ ನಿರತ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಕೆಲ ಸಮಯ ಅತ್ಯಾಚಾರ ಹಾಗೂ ಹತ್ಯದ ಕಾರಣರಾದವರ ವಿರುದ್ಧ ಘೋಷಣೆ ಕೂಗಿದರು. ನಂತರ ಗ್ರೇಡ್ 2 ತಹಸೀಲ್ದಾರ ಕೆ. ರಾಧಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಾ. ವಿ.ಕೆ. ಸಂಕನಗೌಡರ್, ಡಾ. ವೈ.ಎಸ್. ಮೇಟಿ, ಡಾ. ಬಿ.ಎಸ್. ಮೇಟಿ, ಡಾ.ವಿಜಯ ಗಿಂಡಿಮಠ, ಡಾ. ಚಂದ್ರಕಾಂತ ಇಟಗಿ, ಡಾ. ಶರತ್ ಮೇಟಿ, ಡಾ. ಅರವಿಂದ ಹಂಚಿನಾಳ, ಡಾ. ಜಹಾಂಗೀರ ಹಾರೋಗೇರಿ, ಡಾ. ಸಿ.ಸಿ. ವಾಚದಮಠ, ಡಾ. ಅಮರೇಶ ಶಿವಶೆಟ್ಟಿ, ಡಾ. ವಿರೇಶ ಸಜ್ಜನರ, ಡಾ. ಜಗದೀಶ ಹಂಚಿನಾಳ, ಡಾ. ಪ್ರಿಯದರ್ಶಿನಿ ಮೇಟಿ, ಡಾ. ಪೂರ್ಣಿಮಾ ಗಿಂಡಿಮಠ, ಡಾ. ನಂದಿತಾ ಹಂಚಿನಾಳ, ಡಾ. ಜ್ಯೋತಿ ಕೊಪ್ಪಳ, ಡಾ. ಸೌಮ್ಯ, ಡಾ. ನಾಗಭೂಷನ ಬಗರೆ, ಡಾ. ಮಲ್ಲಿಕಾರ್ಜುನ ತಾಂಬ್ರಗುಂಡಿ ಸೇರಿದಂತೆ ಅನೇಕ ಬಿಎಂಎಸ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.