ಶಿವಮೊಗ್ಗ: ಇಂದು ಕರ್ನಾಟಕ ಬಿಕ್ಕಟ್ಟಿನ ಕಾಲದಲ್ಲಿದೆ. ಈ ಬಿಕ್ಕಟ್ಟುಗಳನ್ನು ಪರಿಹಾರ ಕಂಡುಕೊಳ್ಳುವ ದಾರಿ ಸರಿಯಾಗಿಲ್ಲ ಎಂದು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.
ಭಾಷೆ, ಜಲ, ನೆಲದ ಸಮಸ್ಯೆಯಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತವೆ. ಸರ್ವ ಪಕ್ಷಗಳ ಸಭೆ ನಡೆಸಿ ರಾಜ್ಯದಿಂದ ಕೇಂದ್ರಕ್ಕೆ ನಿಯೋಗ ಹೋಗುವ ಪದ್ಧತಿಯಿತ್ತು. ಅದರೆ, ಇಂದು ಅಂತಹ ವಾತಾವರಣ ಕರ್ನಾಟಕದಲ್ಲಿಲ್ಲ. ಒಂದೇ ಪಕ್ಷದೊಳಗೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಸಾಮರಸ್ಯದ ರಾಜಕೀಯ ಸಂಸ್ಕೃತಿ ನಮಗೆ ಬೇಕಿದೆ. ಕೃಷ್ಣಾ ನದಿಯ ಸಮಸ್ಯೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳು ಸಮಸ್ಯೆಗಳಿಂದ ಮುಕ್ತಿಗಾಗಿ ಕಾಯುತ್ತಿದೆ ಎಂದರು.ಕೇಂದ್ರ ಸರ್ಕಾರಕ್ಕೆ ಕರ್ನಾಟಕ ನೀಡುವ ತೆರಿಗೆ ದೊಡ್ಡ ಮೊತ್ತದಾದರೂ, ಬಜೆಟ್ ಮೂಲಕ ಕರ್ನಾಟಕಕ್ಕೆ ಸಿಗುವ ಅನುದಾನಗಳು ಕಡಿಮೆ. ಇದಕ್ಕೆ ಮೂಲ ಕಾರಣ ಕರ್ನಾಟಕ ಅಭಿವೃದ್ಧಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ಹಿಂದುಳಿದ ರಾಜ್ಯಗಳಿಗೆ ನೀಡಿ ಅಲ್ಲಿ ಹೆಚ್ಚು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂಬ ವಾದವಿದೆ. ಅದರೆ ಹಿಂದುಳಿದ ರಾಜ್ಯಗಳು ಮೊದಲಿನಂತಿಲ್ಲ, ಅಲ್ಲಿ ಅದ್ಭುತ ಅಭಿವೃದ್ಧಿ ಕಂಡಿದೆ. ಹಾಗಾಗಿ ಕರ್ನಾಟಕಕ್ಕೆ ಸಿಗಬೇಕಾದ ಅನುದಾನಗಳು ಹೆಚ್ಚಾಗಬೇಕು. ದೆಹಲಿಯಲ್ಲಿ ಕರ್ನಾಟಕದ ಧ್ವನಿ ಕ್ಷೀಣವಾಗುತ್ತಿರುವುದು ಇದಕ್ಕೆಲ್ಲ ಕಾರಣ ಎಂದು ತಿಳಿಸಿದರು.ತೆರಿಗೆ ಹಂಚಿಕೆಯಲ್ಲಿ, ಕ್ಷೇತ್ರದ ವಿಂಗಡನೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇಂತಹ ಸವಾಲುಗಳನ್ನು ಎದುರಿಸಲು ಎಲ್ಲರೂ ಒಟ್ಟಾಗಬೇಕು. ಆಳುವವರು ಸರಿ ಮಾಡುತ್ತಾರೆ ಎಂಬ ಭ್ರಮೆ ಬೇಡ. ಓಟು ಹಾಕುವ ಮತದಾರನಿಗೆ ತನ್ನದೆ ಆದ ಜವಾಬ್ದಾರಿಯಿದೆ. ಎಲ್ಲವನ್ನೂ ರಾಜಕಾರಣಿಗಳ ಮೇಲೆ ಹೇರುವುದು, ನಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುವಂತಹ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನ ಜನಕ್ಕೆ ಕುಡಿಯುವ ನೀರಿಗಾಗಿ ಕೇಂದ್ರದಲ್ಲಿ ಯಾಕೆ ಹೋರಾಟ ಮಾಡಬಾರದು. ರಾಜ್ಯದ ಹೆಸರಾಂತ ಉದ್ಯಮಿಗಳು, ಕನ್ನಡ ನಟರು, ಲೇಖಕರು ಒಂದು ನಿಯೋಗದ ಮೂಲಕ ಕರ್ನಾಟಕದಲ್ಲಿರುವ ಸಮಸ್ಯೆಗಳ ಕುರಿತು ಬಗೆಹರಿಸುವಂತೆ ಏಕೆ ಪ್ರಧಾನಿಗಳ ಬಳಿ ಮನವಿ ಮಾಡಬಾರದು. ಹೊಸ ತಲೆಮಾರಿನ ಸಾಹಿತಿಗಳು ಯಾರು ಬೀದಿಗೆ ಬಂದು ಹೋರಾಟ ಮಾಡುತ್ತಿಲ್ಲ. ಸಾಹಿತಿಗಳ ಮೇಲೆ ಓದುಗರ ಋಣವಿದೆ, ಸಂಗೀತಗಾರನ ಮೇಲೆ ಕೇಳುಗರ ಋಣವಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೆ ಋಣ ಜವಾಬ್ದಾರಿಯನ್ನು ಹೊಂದಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ವಿಚಾರಗಳು ಹೆಚ್ಚೆಚ್ಚು ಚರ್ಚೆಯಾಗಬೇಕು. ಆ ಮೂಲಕ ಆತ್ಮವಿಮರ್ಶೆ ಮಾಡಿಕೊಳ್ಳುವಂತಾಗಬೇಕು ಎಂದು ಹೇಳಿದರು.ಸಮ್ಮೇಳನಗಳಲ್ಲಿ ವಾಸ್ತವತೆಯ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಗಳಾಗಬೇಕು. ಸಮ್ಮೇಳನಗಳಲ್ಲಿ ರಾಜಕಾರಣಿಗಳು, ಪತ್ರಕರ್ತರು, ಸಾಹಿತಿಗಳನ್ನು ಒಂದೆಡೆ ಸೇರಿಸುವ ಕಾರ್ಯ ಆಗಬೇಕಿದ್ದು, ಪರಿವರ್ತನೆಯ ನಿಜವಾದ ಬೀಗದ ಕೈ ರಾಜಕಾರಣಿಗಳ ಬಳಿ ಇದೆ ಎಂದರು.ಸಾಹಿತಿಗಳಿಗಿಂತ ಪತ್ರಕರ್ತರಿಗೆ ಸವಾಲುಗಳು ಹೆಚ್ಚು. ಪತ್ರಕರ್ತ ವಾಸ್ತವತೆಯನ್ನು ಹೇಳುವ ಧೈರ್ಯ ದಿಟ್ಟತನವನ್ನು ತೋರುತ್ತಾನೆ. ಯುದ್ಧ ಭೂಮಿಯ ಬಗ್ಗೆ ಸಾಹಿತಿ ಕಾಲ್ಪನಿಕವಾಗಿ ಹೇಳಬಹುದು ಅದರೆ ಪತ್ರಕರ್ತ ವಾಸ್ತವವಾಗಿ ಮಾತನಾಡಬೇಕು. ಕನ್ನಡವೆಂದರೆ ಕೇವಲ ಸಾಹಿತಿ ಅಲ್ಲ, ಭಾಷೆಯೆಂದರೆ ವರ್ಣಮಾಲೆ ಅಷ್ಟೆ ಅಲ್ಲ. ಕನ್ನಡ, ಕನ್ನಡಿಗ, ಕರ್ನಾಟಕ ಮೂರು ಇದ್ದಾಗ ಮಾತ್ರ ಕನ್ನಡ ಎಂಬ ಭಾಷೆ ಸಂಪೂರ್ಣವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಡಾ.ಜೆ.ಕೆ.ರಮೇಶ್, ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.