ರೋಣ: ಕಾಯಕಕ್ಕೆ ಎತ್ತರವಾದ ಗೌರವ ಸ್ಥಾನವಿದ್ದು, ಆದ್ದರಿಂದ ಪ್ರತಿಯೊಬ್ಬರೂ ಕಾಯಕದ ಮೂಲಕ ಸ್ವಾವಲಂಬನೆ ಜೀವನ ಸಾಗಿಸಬೇಕು. ಅಂದಾಗ ಬದುಕು ಪರಿಪೂರ್ಣವಾಗುವುದು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಮಹಿಳೆ ಎಲ್ಲ ರಂಗದಲ್ಲಿ ಮುಂದಿದ್ದಾಳೆ. ಅಂದು ಸೈಕಲ್ ಹೊಡೆದ ಹೆಣ್ಣುಮಗಳು ಇಂದು ವಿಮಾನ ಚಾಲನೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ಆಕೆಯ ಸಾಧನೆ ಮೆಚ್ಚಲೇಬೇಕು. ಉದ್ಯೋಗದಲ್ಲಿ ಸಣ್ಣದು, ದೊಡ್ಡದು ಎಂಬುದಿಲ್ಲ. ಯಾವುದೇ ಉದ್ಯೋಗವಿರಲಿ, ಅದನ್ನು ಎತ್ತರಕ್ಕೆ ಕೊಂಡೊಯುವ ಶಕ್ತಿ ನಮ್ಮಲ್ಲಿರಬೇಕು. ಸೋನಿಯಾಗಾಂದಿ, ಜಯಲಲಿತಾ, ಮಮತಾ ಬ್ಯಾನರ್ಜಿ ಅಷ್ಟೇ ಏಕೆ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಉತ್ತಮ ಆಡಳಿತ ನೀಡಿ, ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಮನೆಯಲ್ಲಿ ಕುಳಿತರೆ ದೇವರ ಆಶೀರ್ವಾದ ಸಿಗುವುದಿಲ್ಲ. ಬದಲಾಗಿ ಉದ್ಯೋಗ ಪಡೆದುಕೊಳ್ಳಬೇಕೆಂಬ ಹಂಬಲ ಇದ್ದರೆ ದೇವರ ಆಶೀರ್ವಾದ ಸಿಗುತ್ತದೆ. ಇಂದು ಪುರುಷರು ನಿರುದ್ಯೋಗಿಯಾಗುತ್ತಿದ್ದಾರೆ. ಈಗ ಕಾಲ ಬದಲಾಗಿದೆ. ಉದ್ಯೋಗಂ ಸ್ತ್ರೀ ಲಕ್ಷಣಂ ಎಂಬಂತಾಗಿದೆ. ಮಹಿಳೆಯರನ್ನು ಯಾರು ಗೌರವಿಸುತ್ತಾರೋ ಅವರು ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ. ಈ ನಿಟ್ಟಿನಲ್ಲಿ ಶಾಸಕ ಜಿ.ಎಸ್. ಪಾಟೀಲರು ಮಹಿಳೆಯರಿಗೆ ಅತ್ಯಂತ ಗೌರವ ಕೊಡುವುದರ ಜತೆಗೆ ಮಹಿಳಾ ಸಬಲಿಕರಣಕ್ಕೆ ಅಪಾರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಪಾಟೀಲ ಮಾತನಾಡಿ, ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವ ಮಹಿಳೆಯರನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಮಹಿಳಾ ಸ್ವಾವಲಂಬಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಲಕೃಷಿ ತಜ್ಞ ಡಾ. ನಬಿ ಮಾತನಾಡಿ, ಮಣ್ಣಿಲ್ಲದೆ ಕೇವಲ ನೀರಿನ ಮೂಲಕ ಕೃಷಿ ಮಾಡುವುದು ಈಗ ಸುಲಭವಾಗಿದೆ. ಟೆಕ್ನಾಲಜಿ ಮೂಲಕ ಜಲ ಕೃಷಿ ಮಾಡಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇದಕ್ಕೆ ಸಬ್ಸಿಡಿ ದೊರೆಯಲಿದ್ದು, ಆಸಕ್ತರು ಜಲಕೃಷಿ ಮಾಡಬಹುದು ಎಂದರು.