ಜಿಲ್ಲೆಗೊಂದು ಗೋಶಾಲೆ ಯೋಜನೆ ಜಾರಿಗೊಳಿಸಿದ್ದು ಹಿಂದಿನ ಸರ್ಕಾರ. ಅವರು ಎಷ್ಟು ಕಡೆ ಜಾರಿ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಮತ್ತೆ ಈ ಸರ್ಕಾರ ಗೋಶಾಲೆ ಯೋಜನೆ ರದ್ದುಗೊಳಿಸಿದ ಬಗ್ಗೆ ಮಾತನಾಡಲಿ ಎಂದು ಸ್ಪೀಕರ್ ಖಾದರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಸರ್ಕಾರ ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆಯೇ ಮೊದಲಾದ ವಿಚಾರಗಳಲ್ಲಿ ಜನಹಿತದ ದೃಷ್ಟಿಯನ್ನು ಗಮನದಲ್ಲಿರಿಸಿಯೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಮರ್ಥಿಸಿಕೊಂಡಿದ್ದಾರೆ. ಬಸ್ ಪ್ರಯಾಣ ದರ ಏರಿಕೆಗೆ ಜನತೆಯ ವಿರೋಧ ಕುರಿತ ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಮಂಗಳೂರಲ್ಲಿ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಸರ್ಕಾರದ ಈ ನಿರ್ಧಾರದ ಹಿಂದೆ ಯಾವುದೋ ಸದುದ್ದೇಶ ಇರಬಹುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದರೆ, ಮಹಿಳೆಯರು ಹಣ ತೆತ್ತು ಪ್ರಯಾಣಿಸುವುದಿಲ್ಲ. ಆದರೆ ಅವರ ಟಿಕೆಟ್ ಮೊತ್ತವನ್ನು ಸರ್ಕಾರವೇ ಕೆಎಸ್ಆರ್ಟಿಸಿಗೆ ಭರಿಸುತ್ತದೆ. ಅದು ಕೆಎಸ್ಆರ್ಟಿಸಿಗೆ ಉಚಿತವಲ್ಲ. ಈಗ ದರ ಏರಿಕೆಯನ್ನು ಜನಸಾಮಾನ್ಯರೂ ವಿರೋಧಿಸುತ್ತಾರೆ ಎನ್ನುವಂತಿಲ್ಲ. ಜನತೆಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸರ್ಕಾರದ ನಿಲುವನ್ನು ಸ್ಪೀಕರ್ ಸಮರ್ಥಿಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಸ್ಪೀಕರ್ ಬೆಂಬಲಿಸಲಿ ಎನ್ನುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಬಗ್ಗೆ ಉತ್ತರಿಸಿದ ಯು.ಟಿ.ಖಾದರ್, ಗೋಹತ್ಯೆ ನಿಷೇಧ ಕಾನೂನು ಮೊದಲು ದೇಶದಲ್ಲಿ ಜಾರಿಗೆ ತಂದದ್ದು ಆಗಿನ ಪ್ರಧಾನಿ ಇಂದಿರಾಗಾಂಧಿ. ಆಗ ಅವರು ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ಕಾನೂನು ಎಂದು ಜಾರಿ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಒಂದೇ ಕಾನೂನು ಜಾರಿಗೆ ತಂದರು. ಅದು ದೇಶದಲ್ಲೇ ಅನುಷ್ಠಾನಗೊಳ್ಳುತ್ತಿದೆ, ಕರ್ನಾಟಕದಲ್ಲಿ ಪ್ರತ್ಯೇಕ ಅನುಷ್ಠಾನಗೊಳಿಸುವ ಮಾತೇ ಇಲ್ಲ. ಆನೆ, ಹಸು ಸೇರಿದಂತೆ ಪ್ರಾಣಿಗಳ ಯಾವುದೆಲ್ಲ ಜೀವ ಉಳಿಸಬೇಕು ಎಂಬ ಬಗ್ಗೆ ಬೇಕಾದರೆ ಅವರಿಗೆ ಪಟ್ಟಿ ನೀಡಲು ಸಿದ್ಧ ಎಂದರು.
ಜಿಲ್ಲೆಗೊಂದು ಗೋಶಾಲೆ ಯೋಜನೆ ಜಾರಿಗೊಳಿಸಿದ್ದು ಹಿಂದಿನ ಸರ್ಕಾರ. ಅವರು ಎಷ್ಟು ಕಡೆ ಜಾರಿ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಮತ್ತೆ ಈ ಸರ್ಕಾರ ಗೋಶಾಲೆ ಯೋಜನೆ ರದ್ದುಗೊಳಿಸಿದ ಬಗ್ಗೆ ಮಾತನಾಡಲಿ ಎಂದು ಸ್ಪೀಕರ್ ಖಾದರ್ ಹೇಳಿದರು.
ನಾನು ಸಚಿವನಾಗುವ ವಿಚಾರ ನನಗೆ ಗೊತ್ತಿಲ್ಲ ಎಂದು ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವಿರಾ ಎಂಬ ಪ್ರಶ್ನೆಗೆ ಸ್ಪೀಕರ್ ಖಾದರ್ ಉತ್ತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.