ಸತ್ಕಾರ್ಯ ಮಾಡುವಾಗ ಪ್ರತಿಫಲದ ನಿರೀಕ್ಷೆ ಇರಬಾರದು: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork |  
Published : Apr 06, 2026, 02:15 AM IST
ಶಾಸಕ ಶಿವರಾಮ ಹೆಬ್ಬಾರ ಗೌರವ ಸ್ವೀಕರಿಸಿ‌ದರು. | Kannada Prabha

ಸಾರಾಂಶ

ನಾವು ಯಾವುದೇ ಸತ್ಕಾರ್ಯ ಮಾಡುವಾಗ ಪ್ರತಿಫಲದ ನಿರೀಕ್ಷೆ ಇರಬಾರದು. ನಮ್ಮ ಕಾರ್ಯಗಳಿಗೆ ಫಲಾಫಲ ನೀಡುವವನು ದೇವರು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ನಾವು ಯಾವುದೇ ಸತ್ಕಾರ್ಯ ಮಾಡುವಾಗ ಪ್ರತಿಫಲದ ನಿರೀಕ್ಷೆ ಇರಬಾರದು. ನಮ್ಮ ಕಾರ್ಯಗಳಿಗೆ ಫಲಾಫಲ ನೀಡುವವನು ದೇವರು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ‌ ಮಾತನಾಡಿದರು.

ಪರಿಶ್ರಮ ಇಲ್ಲದೇ ಯಾರೂ ಸಾಧನೆ ಮಾಡಲು ಸಾಧ್ಯವಿಲ್ಲ. ಪರಿಶ್ರಮ ಇಲ್ಲದೇ ಮಾಡಬಹುದಾದ ಕಾರ್ಯ ಕೇವಲ ಟೀಕೆ ಮಾತ್ರ. ನಿಷ್ಕಾಮದಿಂದ ಮಾಡುವ ಕರ್ಮವೇ ನನ್ನನ್ನು ರಾಜಕೀಯ, ಸಾಮಾಜಿಕವಾಗಿ ಎತ್ತರಕ್ಕೇರುವಂತೆ ಮಾಡಿದೆ. ಬಡವರು, ಅಶಕ್ತರಿಗೆ ನೆರವಾಗುವುದು ನನಗೆ ನೆಮ್ಮದಿ ನೀಡುವ ಸಂಗತಿ. ನಮ್ಮ ಗಳಿಕೆಯಲ್ಲಿ ಕೆಲ ಭಾಗವನ್ನು ಸಮಾಜಕ್ಕೆ ನೀಡಬೇಕಾದದ್ದು ನನ್ನ ಕರ್ತವ್ಯ. ದೇವರ ಅನುಗ್ರಹ ಇರುವವರೆಗೆ ಈ ಕಾರ್ಯವನ್ನು ಮುಂದುವರಿಸುತ್ತೇನೆ ಎಂದರು.

ಮನುಷ್ಯನಿಗೆ ಬರುವ ಅತಿದೊಡ್ಡ ರೋಗ ಗರ್ವ ಮತ್ತು ಅಹಂಕಾರ. ಅದರಿಂದ ದೂರ ಇದ್ದಷ್ಟೂ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯ ಎಂದ ಅವರು, ದೇವಸ್ಥಾನದ ಅಭಿವೃದ್ಧಿಗೆ, ಗಣಪತಿಯ ಸೇವೆಗೆ ಸದಾ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಆಡಳಿತ ಮಂಡಳಿಯ ಸದಸ್ಯ ಎಲ್.ಪಿ. ಭಟ್ಟ ಗುಂಡ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ನದಾನ, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ನೆಲೆಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸುತ್ತಿರುವ ಶಾಸಕರಿಗೆ ಗೌರವ ಸಲ್ಲಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್ ಭಟ್ಟ ಮಾತನಾಡಿ, ಶಾಸಕರು ದೇವಸ್ಥಾನದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಅಧ್ಯಕ್ಷತೆ ವಹಿಸಿದ್ದರು.

ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಕಾರ್ಯಕ್ರಮ ಉದ್ಘಾಟಿಸಿದರು.

ವನಜಾಕ್ಷಿ ಹೆಬ್ಬಾರ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಪ್ರಮುಖರಾದ ನರಸಿಂಹ ಭಟ್ಟ ಗುಂಡಗಲ್, ನಾಗೇಶ ಭಟ್ಟ ಮಳಲಗಾಂವ ಇತರರಿದ್ದರು.

ವೆಂಕಟರಮಣ ಭಟ್ಟ ಬೆಳಖಂಡ, ಗುರುನಂದನ ಭಟ್ಟ ವೇದಘೋಷ ಮಾಡಿದರು. ಅನ್ವಿತಾ ಭಟ್ಟ ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು.

ಸುಬ್ರಾಯ ಭಟ್ಟ ಗುಂಡ್ಕಲ್ ನಿರ್ವಹಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜೀ, ಅಂಬೇಡ್ಕರ್‌ ಸಮಾಜದ ಎರಡು ಕಣ್ಣುಗಳಿದ್ದಂತೆ
ದಲಿತೋದ್ಧಾರಕ ಬಾಬು ಜಗಜೀವನರಾಮ್