- ಚಿಕ್ಕೇರಳ್ಳಿಯಲ್ಲಿ ನಿವೃತ್ತ ಯೋಧ ಎಚ್.ರಮೇಶ್ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಶಾಂತನಗೌಡ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಅಥವಾ ಉನ್ನತ ಅಧಿಕಾರಿಗಳಾಗಬೇಕೆಂದು ಬಯಸುತ್ತಾರೆ. ಆದರೆ, ದೇಶ ಕಾಯುವ ಸೈನ್ಯಕ್ಕೆ ಕಳಿಸಲು ಹಿಂದೇಟು ಹಾಕುತ್ತಾರೆ. ಇದೇ ರೀತಿ ಹೆಣ್ಣು ಹೆತ್ತವರು ಕೂಡ ಸೈನಿಕರಿಗೆ ಹಾಗೂ ರೈತರಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಮುಂದೆ ಬರುವುದಿಲ್ಲ. ಇಂಥ ಮನೋಭಾವ ಸಲ್ಲದು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.22 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧ ಎಚ್.ರಮೇಶ್ (ಹವಾಲ್ದಾರ) ನಿವೃತ್ತಿ ಹೊಂದಿ ಶುಕ್ರವಾರ ಸ್ವಗ್ರಾಮ ಚಿಕ್ಕೇರಳ್ಳಿ ಗ್ರಾಮಕ್ಕೆ ಮರಳಿದ್ದ ಹಿನ್ನೆಲೆ ಸ್ವಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮದವರು, ನಿವೃತ್ತ ಸೈನಿಕನ ಬಂಧುಗಳು, ಸ್ನೇಹಿತರು ರಾತ್ರಿ ಏರ್ಪಡಿಸಿದ್ದ ಅದ್ಧೂರಿ ಸ್ವಾಗತ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನಮ್ಮ ಯೋಧ, ನಮ್ಮ ರೈತರು ನಮ್ಮ ಹೆಮ್ಮೆಯಾಗಿದ್ದಾರೆ. ಈ ಕಾರಣದಿಂದಲೇ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯವನ್ನು ದೇಶವಾಸಿಗಳಿಗೆ ನೀಡಿದ್ದಾರೆ. ದೇಶ, ಸಮಾಜಕ್ಕೆ ಯೋಧರು ಮತ್ತು ರೈತರು ಸಲ್ಲಿಸುತ್ತಿರುವ ಸೇವೆ ಕೇವಲ ಮಾತುಗಳಲ್ಲಿ ವರ್ಣಿಸಲು ಅಸಾಧ್ಯ ಎಂದರು.
ಜಿಪಂ ಮಾಜಿ ಸದಸ್ಯ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ, ಡಿ.ಜಿ.ವಿಶ್ವನಾಥ, ನೊಳಂಬ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಆಶೋಕ್ ಕುಮಾರ್ ವಿ. ಪಾಳೇದ, ಮಾಜಿ ಸೈನಿಕ ಎಂ.ವಾಸಪ್ಪ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಎಚ್. ಷಣ್ಮುಖಪ್ಪ, ರೈತ ಮುಖಂಡ ಎಚ್.ಕಡದಕಟ್ಟೆ ಜಗದೀಶ್, ರುದ್ರಪ್ಪ, ಸುಭಾಶ್, ಗ್ರಾ.ಪಂ. ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು. ನಿವೃತ್ತ ಯೋಧ ರಮೇಶ್ ಅವರನ್ನು ಹೊನ್ನಾಳಿಯಿಂದ ಗ್ರಾಮದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದಿದ್ದು ವಿಶೇಷವಾಗಿತ್ತು.
-2ಎಚ್.ಎಲ್.ಐ2: ಚಿಕ್ಕೇರಳ್ಳಿಯಲ್ಲಿ ಶುಕ್ರವಾರ ರಾತ್ರಿ ನಿವೃತ್ತ ಸೈನಿಕ ಎಚ್.ರಮೇಶ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಎಚ್.ಬಿ..ಮಂಜಪ್ಪ, ಡಿ.ಜಿ. ವಿಶ್ವನಾಥ,ಕೆ.ಎಚ್. ಷಣ್ಮುಖಪ್ಪ ಇತರರು ಇದ್ದರು.